ಬ್ರಾಹ್ಮಿ ಮುಹೂರ್ತದಲ್ಲಿ ಏನೇನು ಮಾಡಿದ್ರೆ ಲೈಫ್ ಸೂಪರ್ ಆಗಿರುತ್ತೆ ಗೊತ್ತಾ..?
ನಾವು ಆರೋಗ್ಯವಾಗಿರುವುದಕ್ಕೂ ಬ್ರಾಹ್ಮಿ ಮುಹೂರ್ತಕ್ಕೂ ಏನು ಸಂಬಂಧ ಹೀಗೊಂದು ಪ್ರಶ್ನೆಗಳು ನಮ್ಮ ಮನದಲ್ಲಿ ಮೂಡುವುದು ಸಹಜ. ಆದರೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳು ನಮಗೆ ಒಂದೊಳ್ಳೆಯ ಫಲಕೊಡುತ್ತದೆ ಎಂಬುದನ್ನು ಹಿರಿಯರು ಹೇಳುತ್ತಲೇ ಬಂದಿದ್ದಾರೆ.
ಬದಲಾದ ಜೀವನ ಶೈಲಿಯಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ವ್ಯಾಯಾಮ ಮಾಡುವುದು, ಪೂಜಾ ಕೈಂಕರ್ಯ, ಜಪತಪಗಳನ್ನು ಮಾಡುವ ಸ್ಥಿತಿಯಲ್ಲಿ ಹೆಚ್ಚಿನವರು ಇಲ್ಲ. ಕಾರಣ ರಾತ್ರಿಯೆಲ್ಲ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಡುರಾತ್ರಿಯಲ್ಲಿ ನಿದ್ದೆಗೆ ಜಾರುವವರು ಮುಂಜಾನೆ 4ರಿಂದ 5.30ರ ಬ್ರಾಹ್ಮಿ ಮುಹೂರ್ತದಲ್ಲಿ ಹಾಸಿಗೆಯಿಂದ ಎದ್ದೇಳಲು ಸಾಧ್ಯನಾ?

ಹೀಗಾಗಿ ಮುಂಜಾನೆ ಇಷ್ಟೇ ಸಮಯಕ್ಕೆ ಏಳಬೇಕು. ಹೀಗೆಯೇ ಕೆಲಸ ಆರಂಭಿಸಬೇಕೆನ್ನುವ ಹಿಂದಿನವರ ಕಟ್ಟುಪಾಡಿಗೆ, ಸಂಪ್ರದಾಯ ಅನುಸರಿಸಿಕೊಂಡು ಬದುಕಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸೂರ್ಯ ನೆತ್ತಿ ಮೇಲೆ ಬಂದರೂ ಹಾಸಿಗೆ ಬಿಟ್ಟು ಏಳಲಾರದ ಪರಿಸ್ಥಿತಿಗೆ ಬಂದಿದ್ದಾರೆ. ಆದರೆ ಒಮ್ಮೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾರ್ಯ ಪ್ರಾರಂಭಿಸಿದರೆ ಅದರ ಮಹತ್ವವೇನು ಎಂಬುದು ಅರಿವಾಗುತ್ತದೆ.
ಮಾಡಬೇಕೆಂದುಕೊಂಡ ಕೆಲಸವನ್ನು ಮಾಡಿ
ನಿಜ ಹೇಳಬೇಕೆಂದರೆ ಹಿರಿಯರು ಏನೇನು ಮಾಡಿಕೊಂಡು ಬಂದಿದ್ದರೋ ಅದೆಲ್ಲವೂ ಅವರ ಅನುಭವದಿಂದ ಮತ್ತು ಅದರ ಫಲ ಪಡೆದುದರಿಂದ ಮುಂದುವರೆಸಿಕೊಂಡು ಬಂದಿದ್ದರು. ಜೊತೆಗೆ ಅದರಲ್ಲಿ ಒಳಿತನ್ನು ಕಂಡಿದ್ದರಿಂದಲೇ ಅದನ್ನು ಬೇರೆಯವರಿಗೆ ಅನುಸರಿಸುವಂತೆ ಸಲಹೆ ನೀಡುತ್ತಿದ್ದರು. ಆದರೆ ಈಗಿನ ಜಂಜಾಟದ ಬದುಕಿನಲ್ಲಿ ಎಲ್ಲರಿಗೂ ಎಲ್ಲವನ್ನು ಅನುಸರಿಸಿಕೊಂಡು ಹೋಗುವುದು ಕಷ್ಟಸಾಧ್ಯವೇ.
ಆದರೂ ಬ್ರಾಹ್ಮಿ ಕಾಲದಲ್ಲೆದ್ದು ನೀವೇನು ಮಾಡಬೇಕೆಂದು ಆಲೋಚಿಸಿದ್ದಿರೋ ಅದನ್ನು ಮಾಡಿ ನೋಡಿ ಅದರ ಮಹತ್ವ ನಿಮ್ಮ ಅರಿವಿಗೆ ಬಾರದಿರದು. ಇನ್ನು ಬಿಪಿ, ಶುಗರ್, ಬೊಜ್ಜು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಒಂದಷ್ಟು ಹೊತ್ತು ನಡೆದಾಡಿ ಬಂದರೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಇವತ್ತಿನ ದಿನಗಳಲ್ಲಿ ಜನಜಂಗುಳಿ, ವಾಹನ ಸಂಚಾರವಿಲ್ಲದೆ ನೀರವ ವಾತಾವರಣ ಸಿಗುವಂತಿದ್ದರೆ ಅದು ಬ್ರಾಹ್ಮಿ ಮುಹೂರ್ತದಲ್ಲಿ ಮಾತ್ರ ಸಾಧ್ಯ ಹಾಗಾಗಿ ನೆಮ್ಮದಿಯಾಗಿ ಪ್ರಶಾಂತವಾಗಿ ಹೆಜ್ಜೆ ಹಾಕಲು ಆ ಕಾಲದಲ್ಲಿ ಸಾಧ್ಯವಾಗುತ್ತದೆ. ಜೊತೆಗೆ ದೇಹ ಮತ್ತು ಮನಸ್ಸು ಎರಡಕ್ಕೂ ಸಂತಸ ಸಿಗುತ್ತದೆ.

ಪ್ರಕೃತಿಗೆ ವಿರುದ್ಧ ಹೋಗೋದು ಒಳಿತಲ್ಲ
ಇವತ್ತು ರಾತ್ರಿಯೆಲ್ಲ ನಿದ್ದೆಗೆಟ್ಟು ಕೆಲಸ ಮಾಡುವವರು ಒಂದೆಡೆಯಾದರೆ, ಇನ್ನೊಂದೆಡೆ ಸಿನಿಮಾ, ಟಿವಿ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಯಕ್ಕೆ ಸರಿಯಾಗಿ ಮಲಗದೆ ಬೆಳಿಗ್ಗೆ ಬೇಗವೂ ಏಳದೆ ಮಲಗಿಯೇ ಇರುವವರು ಇಲ್ಲದಿಲ್ಲ. ಇಂತಹವರು ಹಗಲಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯವೇ? ನಾವೇನು ಮಾಡಿದರೂ ಪ್ರಕೃತಿಗೆ ವಿರುದ್ಧವಾಗಿ ಹೋದರೆ ಅದರಿಂದ ಆರೋಗ್ಯಕರ ಬದುಕು ಅಸಾಧ್ಯ.
ಇದೆಲ್ಲವನ್ನು ಅರಿತು ಪ್ರಾತಃಕಾಲದ ಅರ್ಥಾತ್ ಬ್ರಾಹ್ಮಿ ಮುಹೂರ್ತದ ಒಂದಷ್ಟು ವಿಧಿವಿಧಾನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇದನ್ನು ಅಧ್ಯಾತ್ಮಿಕ ಚಿಂತಕರು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ನಮ್ಮೊಡನೆ ಇರುವವರ ಪೈಕಿ ಕೆಲವರು ಬೆಳಿಗ್ಗೆ ಎದ್ದ ಕೂಡಲೇ ಬೆಡ್ ಕಾಫಿ, ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸವಲ್ಲ.
ಬೆಳಿಗ್ಗೆ ಎದ್ದ ಕೂಡಲೇ ಏನು ಮಾಡಬೇಕು?
ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ. ಇದರಿಂದ ಆಹಾರ ಜೀರ್ಣಗೊಂಡು ಅಳಿದುಳಿದ ತ್ಯಾಜ್ಯಗಳ ವಿಸರ್ಜನೆಗೆ ಅನುಕೂಲವಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಹಾಸಿಗೆಯಿಂದ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಮಲ ಮೂತ್ರಾದಿಗಳನ್ನು ವಿಸರ್ಜಿಸಿ, ಹಲ್ಲುಜ್ಜಿ ಮುಖ ತೊಳೆದು ಮುಂದಿನ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಈ ರೀತಿಯ ಪದ್ಧತಿಯ ರೂಢಿಸಿಕೊಂಡರೆ ಜೀವನಕ್ಕೊಂದು ಶಿಸ್ತು ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಈ ಸಮಯದ ವಾಯು ಸೇವನೆಯೂ ಆರೋಗ್ಯಕ್ಕೆ ಸಹಕಾರಿಯಾಗಿದೆ.

ವಾಯು ಮಾಲಿನ್ಯದ ಸೋಂಕಿಲ್ಲದೆ ನಿರ್ಮಲ ವಾತಾವರಣವಿರುವ ಈ ವೇಳೆಯಲ್ಲಿ ನಡೆದಾಡುವುದು, ಓಡುವುದು, ವ್ಯಾಯಾಮ, ಯೋಗಾಸನ, ಪ್ರಾಣಾಯಾಮಗಳನ್ನು ಮಾಡುವುದು ಆರೋಗ್ಯ ವರ್ಧನೆಗೆ ಉತ್ತಮ ಹಾದಿಯಾಗಿದೆ. ಇನ್ನು ವಿದ್ಯಾರ್ಥಿಗಳು ಪ್ರಾತಃಕಾಲ ಕ್ರೀಡೆಗಳನ್ನು ಆಡುವುದು ಮತ್ತು ಓದುವುದನ್ನು ಮಾಡಿದರೆ ಇನ್ನಷ್ಟು ಒಳ್ಳೆಯದು.
ಬ್ರಾಹ್ಮಿ ಮುಹೂರ್ತದ ಸದ್ಭಳಕೆಯಾಗಲಿ
ವಿದ್ಯಾರ್ಥಿಗಳು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಬ್ರಾಹ್ಮಿಮುಹೂರ್ತ ಬಹು ಮುಖ್ಯ ಪಾತ್ರ ವಹಿಸುವುದರಿಂದಲೇ ಪ್ರತಿಯೊಬ್ಬರೂ ಈ ಕಾಲಾವಧಿಯನ್ನು ಸದ್ಭಳಕೆ ಮಾಡಿಕೊಳ್ಳುವುದನ್ನು ಕಲಿಯಬೇಕಾಗಿದೆ.
ನಮ್ಮ ದಿನ ನಿತ್ಯದ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಆಶಿಸಿದ್ದರೆ ಮೊದಲಿಗೆ ಬ್ರಾಹ್ಮಿಮುಹೂರ್ತದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಳಿಕ ಒಂದಷ್ಟು ಹೊತ್ತು ನಡೆದಾಡಿ ಬನ್ನಿ ಆಗ ಅದರ ಮಹತ್ವ ಅರಿವಾಗುತ್ತದೆ. ಅದೇ ಸಮಯದಲ್ಲಿ ನಿಮ್ಮ ಕೆಲಸಗಳನ್ನು ಮಾಡಲು ಆರಂಭಿಸಿ ನೋಡಿ ಕೆಲಸ ಮಾಡೋದಕ್ಕೆ ಸಮಯವೇ ಸಿಗಲ್ಲ ಎಂಬ ನಿಮ್ಮ ಕೊರಗಿಗೆ ಉತ್ತರ ಸಿಕ್ಕರೂ ಸಿಗಬಹುದು.












Click it and Unblock the Notifications