ಶಾಲೆ ಆರಂಭಿಸಲು ಸರ್ಕಾರದ ಮಹತ್ವದ ತೀರ್ಮಾನದ ಹಿಂದಿನ ಕಾರಣಗಳಿವು!
ಬೆಂಗಳೂರು, ಆ. 30: ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ. ಆದರೂ ಶಾಲೆ ಆರಂಭಿಸಿ ಎಂದು ಕೋವಿಡ್ ತಾಂತ್ರಿಕ ಸಮಿತಿ ಸದಸ್ಯರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ತಾಂತ್ರಿಕ ಸಮಿತಿ ಸದಸ್ಯರು ಶಾಲೆ ಆರಂಭಿಸಲು ಸಲಹೆ ಕೊಟ್ಟಿರುವುದರ ಹಿಂದೆ ಬಹಳಷ್ಟು ಕಾರಣಗಳಿವೆ. ಹೀಗಾಗಿ ಸೆಪ್ಟಂಬರ್ 6 ರಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಪುನರಾರಂಭಿಸಲಾಗುತ್ತಿದೆ.
ಶಾಲೆ ಆರಂಭಿಸುವುದರ ಬಗ್ಗೆ ತೀರ್ಮಾನ ಮಾಡಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ವೈರಸ್ ವಿಷಯದ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಎಲ್ಲರಿಂದಲೂ ಮಾಹಿತಿ, ಸಲಹೆ ಪಡೆದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡಿ ಎರಡು ವರ್ಷಗಳಾಗುತ್ತಿವೆ. ಆದರೆ ಈಗ ಮತ್ತೆ ಕೊರೊನಾ ಮೂರನೇ ಅಲೆಯ ಆತಂಕವೂ ಇದೆ. ಆದರೂ ಶಾಲೆಗಳನ್ನು ಆರಂಭಿಸುವ ದೊಡ್ಡ ಸವಾಲನ್ನು ಸರ್ಕಾರ ತೆಗೆದು ಕೊಂಡಿದೆ. ಶಾಲೆ ಆರಂಭಿಸಲು ಸರ್ಕಾರಕ್ಕಿರುವ ಒತ್ತಡಗಳೇನು? ಮುಂದಿದೆ ಮಾಹಿತಿ.
ಶೀಘ್ರ ಎಲ್ಲ ತರಗತಿಗಳು ಆರಂಭ!
ಕೊರೊನಾ ಆತಂಕ ಇನ್ನೂ ಕಡಿಮೆಯಾಗಿಲ್ಲ. ಆದರೂ 6ನೇ ರಿಂದ 8 ನೇ ತರಗತಿ ವರೆಗಿನ ಮಕ್ಕಳಿಗೆ ಶಾಲೆ ಆರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನೂ ಹತ್ತು-ಹನ್ನೆರಡು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಶಾಲೆ ಆರಂಭಕ್ಕೆ ತಜ್ಞರೂ ಕೂಡ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ 6 ರಿಂದ 8ನೇ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ. ಮುಂದಿನ ವಾರ ಮತ್ತೊಂದು ಹಂತದ ಸಭೆ ಮಾಡಿ, ಆ ಸಭೆಯ ಬಳಿಕ 1 ರಿಂದ 5ನೇ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಶಾಲೆ ಆರಂಭಿಸಲು ಸರ್ಕಾರದ ಮೇಲಿರುವ ಒತ್ತಡಗಳು!
ಪ್ರಮುಖವಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂಬ ಮಾಹಿತಿಯಿದೆ ಆದರೂ ಸರ್ಕಾರಕ್ಕೆ ತಜ್ಞರು ಕೊಟ್ಟಿರುವ ಮಾಹಿತಿ ಆತಂಕ ತರುವಂತಿದೆ.
ಶಾಲಾರಂಭ ವಿಳಂಬ ಮಾಡಿದಷ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಶಾಲೆಗಳನ್ನು ಆರಂಭಿಸದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಬಡ ಪೋಷಕರಿಗೆ ಶಾಲೆ ತೆರೆಯದೇ ಇರುವುದು ಸಂಕಷ್ಟ ತಂದಿದೆ. ಮಕ್ಕಳನ್ನ ನೋಡಿಕೊಳ್ಳಬೇಕಾ? ಜೀವನ ನಿರ್ವಹಣೆಗೆ ಕೆಲಸಕ್ಕೆ ಹೋಗಬೇಕಾ? ಎಂಬ ಸಮಸ್ಯೆ ಶುರುವಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿವೆ ಸಮಸ್ಯೆ?
ಶಾಲೆಗಳು ಬಂದ್ ಆಗಿರುವುದರಿಂದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಬಾಲ್ಯವಿವಾಹ ಹೆಚ್ಚಾಗಿವೆ. ಅದರೊಂದಿಗೆ ಮತ್ತೊಂದು ಆತಂಕದ ವಿಚಾರವೆಂದರೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಹೆಚ್ಚಾಗುತ್ತಿವೆ. ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಪೋಷಕರು ಕೂಲಿ ಕೆಲಸಕ್ಕೆ ಹೋದಾಗ ಲೈಂಗಿಕ ದೌರ್ಜನ್ಯಗಳಾಗುತ್ತಿರುವುದು ಕಂಡು ಬಂದಿದೆ. 10 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಮಕ್ಕಳನ್ನು ಪೋಷಕರು ಕೆಲಸಕ್ಕೆ ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದಾರೆ. ಶಾಲೆಗಳು ತೆರೆದರೆ ಮಕ್ಕಳು ಶಾಲೆಗೆ, ಪೋಷಕರು ಕೂಲಿಗೆ ಹೋಗಬಹುದು ಎಂದು ತಜ್ಞರು ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದಾರೆ. ಇದು ಬಡವರ ವ್ಯಥೆಯಾದರೆ, ಅನುಕೂಲಸ್ಥ ಕುಟುಂಬಗಳ ಮಕ್ಕಳ ಕಥೆ ಮತ್ತೊಂದು ರೀತಿಯಲ್ಲಿದೆ.
Recommended Video
ಆಟ ಆಟ ಮತ್ತು ಆಟ ಮಾತ್ರ, ಪಾಠವಿಲ್ಲ!
ಬಡ ಕುಟುಂಬಗಳ ಸಮಸ್ಯೆ ಒಂದು ರೀತಿಯಾದರೆ, ಅನುಕೂಲಸ್ಥ ಹಾಗೂ ಶ್ರೀಮಂತ ಕುಟುಂಬಗಳ ಪರಿಸ್ಥಿತಿ ಬೇರೆ ರೀತಿಯಲ್ಲಿ ಸಮಸ್ಯೆಗೆ ಕಾರಣವಾಗಿದೆ. ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳ ಕುಟುಂಬಗಳ ಮಕ್ಕಳಿಗೆ ಆಟ ಬಿಟ್ಟರೆ, ಪಾಠದ ಕಡೆ ಗಮನವಿಲ್ಲದಂತಾಗಿದೆ. ಆನ್ಲೈನ್ ತರಗತಿಗಳು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಆಟೋಟ ಕುಂಠಿತಗೊಳ್ಳುವುದುರಿಂದ ದೀರ್ಘ ಕಾಲದ ಸಮಸ್ಯೆಗಳು ಮಕ್ಕಳನ್ನು ಕಾಡಬಹುದು. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಾಕ್ಷರತಾ ಪ್ರಮಾಣ ಕುಸಿಯುವ ಸಾಧ್ಯತೆಗಳು ತೀರಾ ಹೆಚ್ಚಾಗಿವೆ ಎಂದು ಸರ್ಕಾರಕ್ಕೆ ತಜ್ಞರು ಮಾಹಿತಿ ಕೊಟ್ಟಿದ್ದಾರೆ.
ಹೀಗಾಗಿ ಶಾಲೆಗಳನ್ನು ಹಂತ ಹಂತವಾಗಿ ಶೀಘ್ರದಲ್ಲಿ ಪುನರಾರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ. ಸಭೆಯಲ್ಲಿ ಸಚಿವರಾದ ಆರ್ ಅಶೋಕ, ಡಾ. ಕೆ. ಸುಧಾಕರ್, ಎಸ್. ಟಿ. ಸೋಮಶೇಖರ, ಬಿ. ಸಿ. ನಾಗೇಶ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್, ತಜ್ಞ ವೈದರಾದ ಡಾ. ಸುದರ್ಶನ್ , ಡಾ. ಸಿ ಎನ್ ಮಂಜುನಾಥ, ಡಾ. ದೇವಿಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.