ಸಾಸಲು ಸತೀಶ್ ಗೆ ಎಂಎಲ್ಸಿ ಸ್ಥಾನ ನೀಡುವಂತೆ ಕಾಡುಗೊಲ್ಲ ಮುಖಂಡರ ಒತ್ತಾಯ
ಚಿತ್ರದುರ್ಗ, ಜೂನ್ 08: ರಾಜ್ಯದಲ್ಲಿ ಎಂಎಲ್ಸಿ ಸ್ಥಾನ ಚುನಾವಣೆ ಗರಿಗೆದರಿದ್ದು, ಮುಂದಿನ ತಿಂಗಳು ಖಾಲಿಯಾಗಲಿರುವ ಎಂಎಲ್ಸಿ ಸ್ಥಾನಕ್ಕೆ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಸಾಸಲು ಸತೀಶ್ ಗೆ ಸ್ಥಾನ ನೀಡುವಂತೆ ಹಿರಿಯೂರಿನಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಹಿರಿಯೂರಿನ ಪ್ರವಾಸಿ ಮಂದಿರದ ಸಭೆಯಲ್ಲಿ ಮಾತನಾಡಿದ ಮುಖಂಡರು, ಚಿತ್ರದುರ್ಗ ಜಿಲ್ಲೆಯಿಂದ ಆಯ್ಕೆಯಾಗಿದ್ದ ಜಯಮ್ಮ ಬಾಲರಾಜ್ ಅವರ ಸ್ಥಾನವನ್ನು ಕಾಡುಗೊಲ್ಲರಿಗೆ ಮೀಸಲಿಡಬೇಕು. ಮುಂದಿನ ತಿಂಗಳು ಅವರ ಎಂಎಲ್ಸಿ ಸ್ಥಾನ ಖಾಲಿಯಾಗಲಿದ್ದು, ಆ ಸ್ಥಾನವನ್ನು ಡಾ. ಸಾಸಲು ಸತೀಶ್ ಅವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿ.ನಾ. ಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ. ಸತೀಶ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕೊನೆ ಗಳಿಗೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ನವರ ಮಗ ಸಂತೋಷ್ ಜಯಚಂದ್ರ ನವರಿಗೆ ಟಿಕೆಟ್ ಪಾಲಾಯಿತು. ಇದರಿಂದ ಸತೀಶ್ ಸಿಡೆದಿದ್ದರಿಂದ ಕಾಂಗ್ರೆಸ್ ಪಕ್ಷ ಡಾ. ಸತೀಶ್ ಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುವುದಾಗಿ ಭರವಸೆ ನೀಡಿತ್ತು.
ಇದೀಗ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಮನವಿ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ಕಾಡುಗೊಲ್ಲರ ಬಗ್ಗೆ ಅಭಿಮಾನ ಇದೆ. ಹಿಂದುಳಿದ ವರ್ಗಗಳ ಪರವಾಗಿ ಇರುವ ಸಿದ್ದರಾಮಯ್ಯ ನವರು ಕಾಡುಗೊಲ್ಲರನ್ನು ಗುರುತಿಸಿ ಜಯಮ್ಮ ಬಾಲರಾಜ್ ನವರಿಗೆ ಎಂಎಲ್ಸಿ ಸ್ಥಾನ ನೀಡಿದ್ದರು.
ಆ ಸ್ಥಾನವನ್ನು ಕಾಡುಗೊಲ್ಲರಿಗೆ ಮುಂದುವರಿಸಿ. ಹಿಂದಿನಿಂದಲೂ ಡಿ.ಕೆ. ಶಿವಕುಮಾರ್ ಕಾಡುಗೊಲ್ಲರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಡಿಕೆಶಿ ಗೆಲುವಿಗೆ ಕಾಡುಗೊಲ್ಲ ಮತಗಳೇ ನಿರ್ಣಾಯಕವಾಗಿದ್ದು, ಮುಂದಿನ ನಿಮ್ಮ ಗೆಲುವು ಪಡೆಯಬೇಕಾದರೆ ಈ ಬಾರಿ ಕಾಡುಗೊಲ್ಲರಿಗೆ ಸ್ಥಾನ ನೀಡಿ ಎಂದು ಆಗ್ರಹಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಡುಗೊಲ್ಲರಿಗೆ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿಸಿದ್ದ ಪರಿಣಾಮವಾಗಿ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ಸೋಲನುಭವಿಸಿದ್ದರು. ಒಂದು ವೇಳೆ ಕಾಡುಗೊಲ್ಲರಿಗೆ ಎಂಎಲ್ಸಿ ಸ್ಥಾನ ಕೈ ತಪ್ಪಿದರೆ ಕಳೆದ ಚುನಾವಣೆಯಲ್ಲಿ ನಡೆದ ಘಟನೆ ಮರುಕಳಸಬೇಕಾಗುತ್ತದೆ ಎಂದು ಮುಖಂಡರು ಕಾಂಗ್ರೆಸ್ ಪಕ್ಷವನ್ನು ಎಚ್ಚರಿಸಿದ್ದಾರೆ.












Click it and Unblock the Notifications