ನಿಜ ಹೇಳು, ಕಡೆಯವನು ನಮ್ಮಿಬ್ಬರ ಮಗ ತಾನೆ?
ಇದೇ ಆಧುನಿಕ ಯುಗದಲ್ಲಿ ಒಂದು ಸಿಟಿಯಲ್ಲಿ ಒಂದು ಕುಟುಂಬ ವಾಸವಾಗಿರುತ್ತದೆ. ಗಂಡ ಹೆಂಡತಿಗೆ ಮೂರು ಮತ್ತೊಂದು ಮುದ್ದುಮುದ್ದಾದ ಮಕ್ಕಳು. ಅಕ್ಕಪಕ್ಕದವರು ಇವರನ್ನು ನೋಡಿ ಹೊಟ್ಟೆಕಿಚ್ಚಿನಿಂದ ಕಣ್ಣೀರ್ ಸುರಿಸಬೇಕು, ಹಾಗೆ ಸಾಗಿತ್ತು ಅವರ ಸಂಸಾರ.
ಒಂದು ದಿನ ಆದಾವ ಘಳಿಗೆಯೋ ಏನೋ ಗಂಡ ರೋಗಗ್ರಸ್ತನಾಗಿಬಿಟ್ಟ. ಅವನನ್ನು ಚಿಕಿತ್ಸೆ ಮಾಡುತ್ತಿದ್ದ ವೈದ್ಯರು ಎಲ್ಲಾ ದೈವೇಚ್ಛೆ ಎಂದು ಕೈಮುಗಿದುಬಿಟ್ಟರು. ಗಂಡನಿಗೂ ತಾನಿನ್ನು ಬದುಕಿರಲಾರೆ ಎಂದೆನಿಸಲು ಪ್ರಾರಂಭಿಸಿತು. ಆ ಕಡೆ ಘಳಿಗೆಯಲ್ಲಿ, ಪ್ರೇಮಿಸುವ ಹೆಂಡತಿ, ಮುದ್ದುಮುದ್ದಾದ ಮಕ್ಕಳ ಜೊತೆ ಜೀವನ ಸಾಗಿಸಿದ ಸಂತಸ ಒಂದೆಡೆಯಾದರೆ, ಒಂದು ಖಿನ್ನತೆ ಆತನನ್ನು ಕಾಡಲು ಪ್ರಾರಂಭಿಸಿತು. ಇದಕ್ಕೆ ಏನಾದರೂ ಉತ್ತರ ಕಂಡುಕೊಳ್ಳಲೇಬೇಕು ಎಂದು ಆತ ನಿರ್ಧರಿಸಿದ.
ಅದೇನೆಂದರೆ, ಮೊದಲನೇ ಮೂರು ಮಕ್ಕಳು ಒಂದೇ ತೆರನಾಗಿದ್ದರು. ಎತ್ತರವಾಗಿದ್ದರು, ಬೆಳಗಿದ್ದರು, ನೋಡಲು ಸುಂದರವಾಗಿದ್ದರು. ಆದರೆ, ಕಡೆಯ ಮಗ ಮಾತ್ರ ತದ್ವಿರುದ್ಧವಾಗಿ ಕರ್ರಗೆ ಇದ್ದ, ಕುಳ್ಳನೆ ಆಕೃತಿ. ಎಂದೂ ಕಾಡದಿದ್ದ ಸಂದೇಹ ಈಗ ಕಾಡಲು ಪ್ರಾರಂಭಿಸಿತು. ಹೆಂಡತಿಗೆ ಕೇಳಿ, ಉತ್ತರ ಕಂಡುಕೊಂಡು ನೆಮ್ಮದಿಯಿಂದ ಕಣ್ಣುಮುಚ್ಚೋಣವೆಂದು ಆತ ತೀರ್ಮಾನಿಸಿದ. ಸರಿ ಹೆಂಡತಿಯನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡ.
"ಪ್ರಿಯೆ, ನಾನು ಜೀವನದ ಕೊನೆಯ ಹಂತದಲ್ಲಿದ್ದೇನೆ. ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ. ನನಗೆ ಸುಳ್ಳು ಹೇಳುವುದಿಲ್ಲವೆಂದು ಭಾಷೆ ಕೊಡು" ಎಂದು ಕೇಳಿದ.
"ಖಂಡಿತ ಸುಳ್ಳು ಹೇಳುವುದಿಲ್ಲ, ಸುಳ್ಳು ಹೇಳಿ ನಾನಾವ ನರಕಕ್ಕೆ ಹೋಗಲಿ. ಸತ್ಯವನ್ನೇ ನುಡಿಯುತ್ತೇನೆ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಏನೆಂದು ಕೇಳಿ" ಎಂದು ಆಕೆ ಹೇಳಿದಳು.
"ಪ್ರಮಾಣ ಮಾಡಿ ಹೇಳು, ಕಡೆಯ ಮಗ ನಮ್ಮಿಬ್ಬರ ಮಗನೇ ತಾನೆ?" ಎಂದು ಸಣ್ಣದನಿಯಲ್ಲಿ ಕೇಳಿದ.
"ಅದೇನು ಹೀಗೆ ಕೇಳುತ್ತೀರಿ? ಆ ದೇವರಾಣೆಗೂ ನಾಲ್ಕನೇಯವನು ನಮ್ಮಿಬ್ಬರ ಮಗನೇ" ಎಂದು ಢವಗುಡುತ್ತಿರುವ ಎದೆಯನ್ನು ಹಿಡಿದುಕೊಂಡು ಕಣ್ಣೀರೊರೆಸುತ್ತ ಹೇಳಿದಳು.
ಈ ಉತ್ತರದಿಂದ ಸಂತುಷ್ಟನಾದ ಗಂಡ ನೆಮ್ಮದಿಯಿಂದ ಪ್ರಾಣಬಿಟ್ಟುಬಿಟ್ಟ. ಆತನ ಸಾವಿನಿಂದ ತತ್ತರಿಸಿದರೂ ಸಾವರಿಸಿಕೊಂಡು, ನಿಟ್ಟುಸಿರುಬಿಟ್ಟ ಹೆಂಡತಿ ತನಗೆ ತಾನೇ ಗೊಣಗಿಕೊಂಡಳು, "ಮೊದಲನೇ ಮೂರು ಮಕ್ಕಳ ಬಗ್ಗೆ ಕೇಳಲಿಲ್ಲವಲ್ಲ, ಸದ್ಯ ದೇವರು ದೊಡ್ಡವನು!"












Click it and Unblock the Notifications