ಮಿಂದುಬಂದ ದ್ರೌಪದಿಯನ್ನು ಧೃತರಾಷ್ಟ್ರ ಕಂಡಾಕ್ಷಣ
ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಆತನ ನೆನಪಿಗೆ ಬಂದಿದ್ದೇ ದ್ರೌಪದಿ. ಅದುಮಿಕೊಳ್ಳಲಿಕ್ಕಾಗದ ಸಂತೋಷವನ್ನು ಆಕೆಯೊಂದಿಗಾದರೂ ಹಂಚಿಕೊಳ್ಳೋಣವೆಂದು ದ್ರೌಪದಿಯ ಅರಮನೆಗೆ ಧೃತರಾಷ್ಟ್ರ ಓಟಕಿತ್ತ. ಲಲ್ಲಲಲಾ ಲಲ್ಲಲಲಾ ಅಂತ ಹಾಡಿಕೊಳ್ಳುತ್ತ, ಕುಣಿದಾಡುತ್ತ ತಾನೇತಾನಾಗಿ ದ್ರೌಪದಿಯ ಅರಮನೆಯತ್ತ ಧೃತರಾಷ್ಟ್ರ ಧಾವಿಸಿ ಬಂದ.
ಆತನನ್ನು ನೋಡಿದ ಸಖಿಯರಿಗೆ, ಸೇವಕರಿಗೆ ಅದೇನೋ ಆಶ್ಚರ್ಯ. ಧೃತರಾಷ್ಟ್ರ ತನ್ನ ಮಗ ದುರ್ಯೋಧನ ಯುದ್ಧ ಗೆದ್ದು ಬಂದಾಗಲೆಲ್ಲ ಈ ರೀತಿ ಸಂತಸಪಡುವುದನ್ನು ಕೂಡ ಸೇವಕರು, ಸಖಿಯರು ನೋಡಿರಲಿಲ್ಲ. ದ್ರೌಪದಿಯ ಶಯ್ಯಾಗೃಹದತ್ತ ಬಂದ ಧೃತರಾಷ್ಟ್ರ, "ಎಲ್ಲಿ ದ್ರೌಪದಿ?" ಅಂತ ಆಕೆಯ ಸಖಿಯನ್ನು ಕೇಳಿದ.
ಶಯ್ಯಾಗೃಹದಲ್ಲಿ ಇರದಿದ್ದ ದ್ರೌಪದಿ ಅಲ್ಲಿದ್ದಾಳೆ ಎಂದು ಒಂದು ಕೋಣೆಯ ದಾರಿಯನ್ನು ಸಖಿಯರು ಧೃತರಾಷ್ಟ್ರನಿಗೆ ತೋರಿಸಿದರು. ಮತ್ತೆ ತನ್ನ ಲಹರಿಗೆ ಜಾರಿದ ಧೃತರಾಷ್ಟ್ರ, ಆ ಕೋಣೆಯ ಬಾಗಿಲನ್ನು ಧಬಧಬನೆ ಬಡಿಯಲು ಪ್ರಾರಂಭಿಸಿದ. ಹುಟ್ಟಾ ಕುರುಡನಾಗಿದ್ದ ಧೃತರಾಷ್ಟ್ರನಿಗೆ ಎಲ್ಲ ಕೋಣೆಗಳೂ ಒಂದೇ ಆಗಿದ್ದವು.
ಆ ಬಡಿತಕ್ಕೆ ಒಮ್ಮೆಲೇ ಬೆಚ್ಚಿಬಿದ್ದ ದ್ರೌಪದಿ, "ಯಾರದು?" ಅಂತ ಕೂಗಿದಳು.
"ನಾನು ದ್ರೌಪದಿ, ನಿನ್ನ ದೊಡ್ಡ ಮಾವಯ್ಯ. ಬೇಗನೆ ಬಾಗಿಲು ತೆಗಿ. ನಿನ್ನೊಂದಿಗೆ ಒಂದು ಹೇಳಿಕೊಳ್ಳಲಾಗದ ಸಂತಸದ ಸುದ್ದಿಯನ್ನು ಹಂಚಿಕೊಳ್ಳಬೇಕು. ಬೇಗನೆ ಬಾಗಿಲು ತೆಗಿ" ಅಂತ ಧೃತರಾಷ್ಟ್ರ ಕೂಗಿದ.
ದ್ರೌಪದಿಗೂ ಆಶ್ಚರ್ಯವೋ ಆಶ್ಚರ್ಯ. ಯಾವಾಗಲೂ ದ್ವೇಷವನ್ನೇ ಕಾರುತ್ತಿದ್ದ ಧೃತರಾಷ್ಟ್ರ ಇಷ್ಟೊಂದು ಖುಷಿಯಲ್ಲಿ ಇದ್ದುದನ್ನು ಆಕೆ ಎಂದೂ ನೋಡಿರಲಿಲ್ಲ.
ಹೇಗಿದ್ರೂ ಕುರುಡ ಧೃತರಾಷ್ಟ್ರ ಮಾವಯ್ಯನಿಗೆ ಕಣ್ಣು ಕಾಣುವುದಿಲ್ಲ, ಪರವಾಗಿಲ್ಲ ಅಂದ್ಕೊಂಡು 'ಟೊಯ್' ಅಂತ ಬಾಗಿಲು ತೆರೆದಳು ದ್ರೌಪದಿ. ಆಕೆಯನ್ನು ನೋಡುತ್ತಲೇ ಧೃತರಾಷ್ಟ್ರನ ಮುಖದ ವರ್ಣವೇ ಬದಲಾಗಿ ಹೋಯಿತು. ಏನು ಹೇಳಬೇಕೆಂದು ತಿಳಿಯದೆ ತಡವರಿಸಲು ಪ್ರಾರಂಭಿಸಿದ.
ಆಗ ತಾನೆ ಸ್ನಾನ ಮುಗಿಸಿದ್ದ ದ್ರೌಪದಿ, ಕೂದಲನ್ನು ಹಿಂಡಿಕೊಳ್ಳುತ್ತ, "ಏನದು ಮಾವಯ್ಯ, ಏನು ಸಮಾಚಾರ, ಏಕಿಷ್ಟು ಸಂತಸದಿಂದಿದ್ದೀರಿ" ಅಂತ ವೈಯಾರದಿಂದ ಕೇಳಿದಳು.
ಬಿಟ್ಟ ಕಣ್ಣು ಬಿಟ್ಟಂತೆ ಆಕೆಯನ್ನೇ ನೋಡುತ್ತಿದ್ದ ಧೃತರಾಷ್ಟ್ರ, "ಈಗ ತಾನೆ ಕಣ್ಣಿನ ಆಪರೇಷನ್ ಮಾಡಿಕೊಂಡು ಬಂದಿದ್ದೇನೆ. ಕಣ್ಣು ಚೆನ್ನಾಗಿ ಕಾಣುತ್ತಿದೆ" ಅಂತ ಚಳಿಯಲ್ಲಿ ತುಟಿಗಳು ನಡುಗುವಂತೆ ಗಡಗಡಿಸುತ್ತ ಬಂದ ಕಾರಣವನ್ನು ಹೇಳಿದ.
ನಡೆದ ಅಚಾತುರ್ಯಕ್ಕೆ ದಂಗಾಗಿ ಹೋಗಿದ್ದ ದ್ರೌಪದಿ, ಧೃತರಾಷ್ಟ್ರ ಇನ್ನೊಂದು ಅಕ್ಷರ ಹೇಳುವ ಮೊದಲೇ, ಧಡಾರ್ ಅಂತ ಬಾಗಿಲು ಹಾಕಿಕೊಂಡಳು. ಬಾಗಿಲು ಹಾಕಿದ ರಭಸಕ್ಕೆ ಮೂಗು ಜಜ್ಜಿ, ಮುಖಕ್ಕೆ ಬಲವಾದ ಪೆಟ್ಟುಬಿದ್ದು ಪಡೆದುಕೊಂಡಿದ್ದ ದೃಷ್ಟಿಯನ್ನು ಧೃತರಾಷ್ಟ್ರ ಮತ್ತೆ ಕಳೆದುಕೊಂಡ!