ಕಲಬುರಗಿ; ಜೂನ್ 3ರಂದು ವಿವಿಧ ಹುದ್ದೆಗೆ ನೇರ ಸಂದರ್ಶನ
ಕಲಬುರಗಿ, ಜೂನ್ 01; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಜೂನ್ 3ರಂದು ನೇರ ಸಂದರ್ಶನ ಆಯೋಜನೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೊತೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಜೂನ್ 3ರ ಶುಕ್ರವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.
ಕಲಬುರಗಿಯ ಪ್ರತಿಷ್ಠಿತ ಅನ್ನಪೂರ್ಣ ಫೈನಾನ್ಸ್ ಕಂಪನಿ ಈ ನೇರ ಸಂದರ್ಶನ ನಡೆಸುತ್ತಿದೆ. ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.
ಫಿಲ್ಡ್ ಕ್ರೆಡಿಟ್ ಆಫೀಸರ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರುವ, 21 ರಿಂದ 26 ವರ್ಷ ವಯೋಮಿತಿಯ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ.
ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿ ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ಮೈಕ್ರೋ ಫೈನಾನ್ಸ್/ ಬ್ಯಾಂಕ್ನಲ್ಲಿ ಕನಿಷ್ಠ 1 ವರ್ಷ ಕೆಲಸದ ಅನುಭವ ಹೊಂದಿರಬೇಕು. ವಯೋಮಿತಿ 22 ರಿಂದ 28 ವರ್ಷ.

ಬ್ರ್ಯಾಂಚ್ ಮ್ಯಾನೇಜರ್ ಹುದ್ದೆ ಸಹ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿ ಪದವಿ ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಮೈಕ್ರೋ ಫೈನಾನ್ಸ್/ ಬ್ಯಾಂಕ್ನಲ್ಲಿ ಕನಿಷ್ಠ 3 ವರ್ಷದ ಅನುಭವ ಮತ್ತು ಬ್ರ್ಯಾಂಚ್ ಮ್ಯಾನೇಜರ್ ಆಗಿ 1 ವರ್ಷದ ಅನುಭವ ಹೊಂದಿರಬೇಕು. ವಯೋಮಿತಿ 25 ರಿಂದ 35.
ಆಸಕ್ತ ಮತ್ತು ಅರ್ಹ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್ ಜೊತೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 08472-274846 ಅಥವಾ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಆಕ್ಷೇಪಣೆ ಆಹ್ವಾನ; ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 35 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು.
ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
https://kodagu.nic.in ವೆಬ್ಸೈಟ್ನಲ್ಲಿ ತಾತ್ಕಾಲಿಕ ಆಯ್ಕೆ ಲಭ್ಯವಿದ್ದು, ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಲಿಖಿತವಾಗಿ ಪೂರಕ ದಾಖಲೆಗಳೊಂದಿಗೆ ಸಲ್ಲಿಕೆ ಮಾಡಲು ಮನವಿ ಮಾಡಲಾಗಿದೆ.
ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಜೂನ್ 15 ರೊಳಗೆ (ಕಚೇರಿ ವೇಳೆಯಲ್ಲಿ) ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ; ಭಾಗ್ಯನಗರ ಪಟ್ಟಣ ಪಂಚಾಯಿತಿ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ ಅಭಿಯಾನದಡಿ ಸ್ವಂತ ಉದ್ಯೋಗ ಸಾಲ ಸೌಲಭ್ಯಕ್ಕಾಗಿ 4 ಜನ ಫಲಾನುಭವಿಗಳಿಗೆ ಹಾಗೂ ಸ್ವ-ಸಹಾಯ ಗುಂಪಿನ ರಚನೆ ಮಾಡಲು 9, ಕಾರ್ಯಾಲಯದಿಂದ ಈಗಾಗಲೇ ರಚಿತವಾಗಿರುವ ಗುಂಪುಗಳಿಗೆ ಸಾಲ ಸೌಲಭ್ಯಕ್ಕಾಗಿ 4 ಹಾಗೂ ಬೀದಿ-ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ನೀಡಲು 18 ಗುರಿಯನ್ನು ಹೊಂದಲಾಗಿದೆ.
ಆಸಕ್ತಿಯುಳ್ಳ ಅರ್ಹ ಫಲಾನುಭವಿಗಳು ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ತಮ್ಮ ವಿದ್ಯಾರ್ಹತೆ ಪ್ರಮಾಣ ಪತ್ರ, ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, 2 ಭಾವಚಿತ್ರಗಳು, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ದ್ವಿಪತ್ರಿಯಲ್ಲಿ ಸಲ್ಲಿಸಬೇಕು.
ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಜೂನ್ 15ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಭಾಗ್ಯನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.












Click it and Unblock the Notifications