ಗ್ರಾಮ ಲೆಕ್ಕಿಗ ನೇಮಕಾತಿ; ಸಮಿತಿ ರಚನೆ ತೀರ್ಮಾನ ಸ್ವಾಗತಿಸಿದ ಶಾಸಕ
ಬೆಂಗಳೂರು, ಅಕ್ಟೋಬರ್ 10; ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಗ್ರಾಮ ಲೆಕ್ಕಿಗರ ನೇಮಕಾತಿ ಮಾಡುವ ಕುರಿತು ಸಲಹೆ ನೀಡಲು ಕರ್ನಾಟಕ ಸರ್ಕಾರ ಸಲಹಾ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಿದೆ. ಸೊರಬದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಸರ್ಕಾರದ ತೀರ್ಮಾನ ಸ್ವಾಗತಿಸಿದ್ದಾರೆ.
ಈ ಕುರಿತು ಫೇಸ್ಬುಕ್ ಪೋಸ್ಟ್ ಹಾಕಿರುವ ಅವರು, ಕಳೆದ ನಾಲ್ಕು ವರ್ಷಗಳ ನಮ್ಮ ಸತತ ಪ್ರಯತ್ನದಿಂದ ಹಾಗೂ ಪ್ರಸ್ತುತವಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಗಮನಿಸಿ, ಸರ್ಕಾರದ ಅನೇಕ ಇಲಾಖೆಗಳಿಗೆ ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಬದಲಾವಣೆ, ಸ್ಪರ್ಧಾತ್ಮಕ ಪರೀಕ್ಷೆ?
ಗ್ರಾಮೀಣ, ಪಟ್ಟಣ, ನಗರ ಪ್ರದೇಶದ ಸಮಗ್ರ ಅಭಿವೃದ್ಧಿಯ ಜವಾಬ್ದಾರಿ ಹುದ್ದೆಯಾದ ಗ್ರಾಮ ಲೆಕ್ಕಿಗರ ಹುದ್ದೆಯ ಆಯ್ಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಲು, ಸಲಹಾ ಸಮಿತಿಯನ್ನು ರಚಿಸಿರುವುದನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಕೆಪಿಎಸ್ಸಿ ನೇಮಕಾತಿ; ಕಾರ್ಮಿಕ ನಿರೀಕ್ಷಕರ ಹುದ್ದೆಗಳು
ಈ ಕುರಿತು ಪ್ರತಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ನಮ್ಮ ಸಮಿತಿಯ ಸಭೆಯಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಲಾಗಿದೆ ಎಂದು ಕುಮಾರ್ ಬಂಗಾರಪ್ಪ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ.
KPSC Recruitment 2022 : ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು
ಕರ್ನಾಟಕ ಸರ್ಕಾರದ ಇನ್ನಿತರ ಎಲ್ಲ ಇಲಾಖೆಯ ನೌಕರರನ್ನು, ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇನ್ನಿತರ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತಿದೆ.
ಆದರೆ ಗ್ರಾಮ ಲೆಕ್ಕಿಗರು ಮಾತ್ರ ಈ ಹಿಂದೆ ಎಸ್ಎಸ್ಎಲ್ಸಿ ತದನಂತರ ಪಿಯುಸಿಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆಯಾಗುತ್ತಿದ್ದಾರೆ. ಇವರುಗಳೇ ಮುಂದೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಹುದ್ದೆಯವರೆಗೆ ಪದೋನ್ನತಿ ಪಡೆಯುತ್ತಾರೆ. ಇಂತಹ ಗಂಭೀರ ವಿಷಯವನ್ನು ಗಮನಿಸಿ, ಸರ್ಕಾರ ಸಲಹಾ ಸಮಿತಿಯ ಶಿಪಾರಸ್ಸು ಪಡೆಯಲು ತಿರ್ಮಾನಿಸಿರುವುದು ಸ್ವಾಗತಾರ್ಹ, ಅಭಿನಂದನೆಗಳು ಎಂದು ಹೇಳಿದ್ದಾರೆ.
ಹೇಗೆ ನಡೆಯುತ್ತಿದೆ ನೇಮಕಾತಿ?; ಪ್ರಸ್ತುತ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಹುದ್ದೆಯನ್ನು ಕರ್ನಾಟಕ ಜನರಲ್ ಸರ್ವೀಸಸ್ (Revenue Subordinate Branch) (Cadre & Recruitment)(ತಿದ್ದುಪಡಿ) ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಮಾಡಲಾಗುತ್ತಿದೆ.
ಅಭ್ಯರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಕ ಅಂಕಗಳ (On merit)ಆಧಾರದ ಮೇಲೆ ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುತ್ತಿದೆ ಮತ್ತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಆಯ್ಕೆ/ ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ.
ಈಗ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವ ಸ್ಮರ್ಧಾತ್ಮಕ ಪರೀಕ್ಷೆಯ ಮೂಲಕ ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಲು ಸರ್ಕಾರ ಸಲಹಾ ಸಮಿತಿಯನ್ನು ರಚನೆ ಮಾಡಿದೆ.
ಈ ಸಮಿತಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುತ್ತಾರೆ. ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರು ಸದಸ್ಯರಾಗಿರುತ್ತಾರೆ.
ಉಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ, ಮೈಸೂರು ಜಿಲ್ಲಾಧಿಕಾರಿ, ಯಾದಗಿರಿ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲಾಧಿಕಾರಿಗಳು ಸದಸ್ಯರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯದರ್ಶಿಗಳು ವಿಶೇಷ ಆಹ್ವಾನಿತರಾಗಿದ್ದಾರೆ.
ಶುಕ್ರವಾರ ಕರ್ನಾಟಕ ಸರ್ಕಾರ ಸಮಿತಿ ರಚನೆ ಮಾಡುವಂತೆ ಆದೇಶ ಹೊರಡಿಸಿದೆ. ಸಮಿತಿ ರಚನೆಯಾದ ಬಳಿಕ 15 ದಿನಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.