ವಿಜಯಪುರ ವಿಮಾನ ನಿಲ್ದಾಣ ನೇಮಕಾತಿ; ಹುದ್ದೆ, ವೇತನ ವಿವರಗಳು
ವಿಜಯಪುರ, ಅಕ್ಟೋಬರ್ 17: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವಿಜಯಪುರ ವಿಮಾನ ನಿಲ್ದಾಣದಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಅಕ್ಟೋಬರ್ 23 ಕೊನೆಯ ದಿನವಾಗಿದೆ.
ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತವು (ಕೆಎಸ್ಐಐಡಿಸಿ) ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾಚರಣೆ ನಡೆಸುತ್ತಿದೆ. ನಿಗಮ 1 ವರ್ಷದ ಅವಿಧಿಗೆ ಕ್ರೋಢೀಕೃತ ವೇತನದೊಂದಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಸಿಬ್ಬಂದಿಯ ಗುತ್ತಿಗೆಯ ಅವಧಿಯನ್ನು ಅವಶ್ಯಕತೆಗೆ ಅನುಗುಣವಾಗಿ ಇನ್ನೊಂದು ವರ್ಷದ ಅವಧಿಗೆ ಅಥವ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಹುದಾಗಿದೆ. ಆಯ್ಕೆಯಾದ ಸಿಬ್ಬಂದಿಯನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ನಿಯೋಜನೆ ಮಾಡಲಾಗುತ್ತದೆ.
ಹುದ್ದೆಗಳ ವಿವರ; ಏರೋಡ್ರಂ ಸುರಕ್ಷತಾ/ ಭದ್ರತಾ ಅಧಿಕಾರಿ (1 ಹುದ್ದೆ). ವೇತನ 75,000 ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು.
ವಿಮಾನ ನಿಲ್ದಾಣದ ರಕ್ಷಣೆ ಮತ್ತು ಅಗ್ನಿಶಾಮಕ ಮುಖ್ಯಸ್ಥ (1 ಹುದ್ದೆ). ವೇತನ 60,000 ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು.
ಸಿವಿಲ್ ಮುಖ್ಯಸ್ಥ (1 ಹುದ್ದೆ). ವೇತನ 80,000 ರೂ.ಗಳು. ಕನಿಷ್ಠ ವೇತನ 35 ವರ್ಷಗಳು. ಎಲೆಕ್ಟ್ರಿಕಲ್ ಮುಖ್ಯಸ್ಥ (1 ಹುದ್ದೆ). ಕನಿಷ್ಠ ವೇತನ 80,000 ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು.
ಏರ್ಸೈಡ್ ಆಪರೇಷನಲ್ ಮ್ಯಾನೇಜರ್ (1 ಹುದ್ದೆ). ವೇತನ 75,000 ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು. ಟರ್ಮಿನಲ್ ಮ್ಯಾನೇಜರ್ (1 ಹುದ್ದೆ). ವೇತನ 1,00,000 ರೂ.ಗಳು. ಕನಿಷ್ಠ ವಯೋಮಿತಿ 35 ವರ್ಷಗಳು.
ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 23ರ ತನಕ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ವೇತನದ ಜೊತೆಗೆ ಕೆಎಸ್ಐಐಡಿಸಿ ಮಾನದಂಡಗಳ ಅನುಸಾರ ಇತರೆ ಭತ್ಯೆಗಳು, ಟಿಎ, ಡಿಎಗಳು ಅನ್ವಯಿಸುತ್ತವೆ. ಯಾವುದೇ ಸ್ಪಷ್ಟನೆಗಾಗಿ ದಯವಿಟ್ಟು ಎಜಿಎಂ ಮೊಬೈಲ್ ಸಂಖ್ಯೆ 9845580837/9848533566 ಅನ್ನು ಸಂಪರ್ಕಿಸಿ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್ಐಐಡಿಸಿ). ಖನಿಜ ಭವನ, 4ನೇ ಮಹಡಿ, ಪೂರ್ವ ವಿಭಾಗ, ನಂಬರ್ 49, ರೇಸ್ಕೋರ್ಸ್ ರಸ್ತೆ, ಬೆಂಗಳೂರು 01.
ವಿಜಯಪುರ ವಿಮಾನ ನಿಲ್ದಾಣ; 2021ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದ್ದರು. ಈಗ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಾ ಬಂದಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ.
"ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗವಕಾಶ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾಂದಿಯಾಗಲಿದೆ" ಎಂದು ಬಿ. ಎಸ್. ಯಡಿಯೂರಪ್ಪ ಹೇಳಿದ್ದರು.
ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಗಮದಲ್ಲಿರಿಸಿಕೊಂಡು ವಿಜಯಪುರ ಜಿಲ್ಲೆಯ ಭರಣಾಪುರ ಹಾಗೂ ಮದಭಾವಿ ಗ್ರಾಮಗಳಲ್ಲಿನ ಸುಮಾರು 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ 'ಜಗಜ್ಯೋತಿ ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ವಿಜಯಪುರ' ಎಂದು ನಾಮಕರಣ ಮಾಡಲು ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣ ಶೀಘ್ರದಲ್ಲೇ ಉದ್ಘಾಟನೆಗೊಂಡು ವಿಮಾನಗಳ ಹಾರಾಟ ಆರಂಭವಾಗಲಿದೆ.












Click it and Unblock the Notifications