ರಾಜ್ಯದಲ್ಲಿ ಪ್ರತ್ಯೇಕ ಉದ್ಯೋಗ ನೀತಿ; ಬಸವರಾಜ ಬೊಮ್ಮಾಯಿ
ಬೆಂಗಳೂರು, ಮೇ 03; "ಯುವಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ನಮ್ಮ ಸರ್ಕಾರ ಮೂಲಮಂತ್ರವಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯ ಉದ್ಘಾಟನೆ ಬಳಿಕ ಮಾತನಾಡಿದ ಅವರು, "ಇದು ಪರಿವರ್ತನೆಯ ಪರ್ವಕಾಲವಾಗಿದೆ. ಜನಸಂಖ್ಯೆಯಲ್ಲಿ ಶೇ 46ರಷ್ಟಿರುವ ಯುವಜನರನ್ನು ದೇಶದ ಆಸ್ತಿಯೆಂದು ಭಾವಿಸಲಾಗಿದೆ. ಕ್ಯಾಂಪಸ್ ಸಂದರ್ಶನ, ಸ್ವ-ಉದ್ಯೋಗಕ್ಕೆ ಒತ್ತು ಕೊಡುವುದರ ಜತೆಗೆ ಪ್ರತೈಕ ಉದ್ಯೋಗ ನೀತಿಯನ್ನೇ ರಾಜ್ಯದಲ್ಲಿ ರೂಪಿಸಲಾಗಿದೆ" ಎಂದರು.
"ಕಾಲದ ಜೊತೆಯಲ್ಲಿ ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪಿ ಹೋಗಲಿವೆ. ಹೀಗಾಗಿ, ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುತ್ತಿದ್ದು, ನೃಪತುಂಗ ವಿಶ್ವವಿದ್ಯಾಲಯಕ್ಕೆ ಕೇಂದ್ರ ಸರ್ಕಾರವು ಈಗಾಗಲೇ 55 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದಕ್ಕೆ ಅಗತ್ಯವಿರುವ ಬಾಕಿ ಹಣವನ್ನು ರಾಜ್ಯ ಸರಕಾರ ಒದಗಿಸಲಿದೆ" ಎಂದು ತಿಳಿಸಿದರು.

"ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಮಟ್ಟದವರೆಗೂ ಇನ್ನುಮುಂದೆ ಸಮಗ್ರ ಪರಿವರ್ತನೆ ಕಾಣಿಸಿಕೊಳ್ಳಲಿದೆ. ನೃಪತುಂಗ ವಿವಿಯು ಎನ್ಇಪಿ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ" ಎಂದರು.
ಉನ್ನತ ಶಿಕ್ಷಣ ಸಚಿವ ಸಿ. ಎನ್. ಅಶ್ವತ್ಥ ನಾರಾಯಣ ಮಾತನಾಡಿ, "ಅವರು ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ 6 ವಿವಿಗಳನ್ನು ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಇನ್ನೂ 7 ವಿವಿಗಳು ಅಸ್ತಿತ್ವಕ್ಕೆ ಬರಲಿವೆ. ಒಟ್ಟಿನಲ್ಲಿ ಒಂದು ಜಿಲ್ಲೆಗೆ ಒಂದು ವಿವಿಯಾದರೂ ಇರುವಂತೆ ಮುಂದಡಿ ಇಡಲಾಗುವುದು" ಎಂದು ಹೇಳಿದರು.

ವಿವಿ ಉದ್ಘಾಟನೆ ಮಾಡಿದ ಅಮಿತ್ ಶಾ; ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ನೂತನವಾಗಿ ಸ್ಥಾಪಿಸಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯವನ್ನು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, "ಭಾರತವನ್ನು ಸಶಕ್ತವಾಗಿ ಕಟ್ಟಿ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಾಪಿಸುವುದು ಮತ್ತು ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸಬೇಕೆನ್ನುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಂಕಲ್ಪವಾಗಿದೆ. ಈ ಕ್ರಾಂತಿಕಾರಕ ಬದಲಾವಣೆಗಳನ್ನು ತರಲೆಂದೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ" ಎಂದರು.
"ದೇಶದಲ್ಲಿ ಸಂಭವಿಸುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಮಹತ್ವದ ಸ್ಥಾನವಿದೆ. ಎನ್ಇಪಿಯನ್ನು ಕರ್ನಾಟಕವು ದೇಶದ ಮೊದಲ ರಾಜ್ಯವಾಗಿ ಜಾರಿಗೆ ತರುವ ಹೊಣೆಯನ್ನು ಸ್ವೀಕರಿಸಿರುವುದು ಶ್ಲಾಘನೀಯ ನಡೆಯಾಗಿದೆ. ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿ ದೇಶಭಕ್ತಿಯ ಸಂಸ್ಕಾರವನ್ನು ಬೆಳೆಸಬೇಕಾಗಿದೆ" ಎಂದು ಕರೆ ನೀಡಿದರು.
"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇದು ಕೇಂದ್ರ ಸರಕಾರದ ಪ್ರತಿಜ್ಞೆಯಾಗಿದೆ. ಒಂದು ದೇಶ ದೊಡ್ಡದೊಡ್ಡ ಸಾಧನೆಗಳನ್ನು ಮಾಡಲು ವ್ಯಕ್ತಿಗಳ ಚಿಕ್ಕಚಿಕ್ಕ ಸಂಕಲ್ಪಗಳು ನಿರ್ಣಾಯಕ ಕೊಡುಗೆ ಕೊಡುತ್ತವೆ. ಈ ನಿಟ್ಟಿನಲ್ಲಿ, ದೇಶವನ್ನು ಪ್ರೀತಿಸುವಂತಹ ಶಿಕ್ಷಣವನ್ನು ಎನ್ಇಪಿ ಅಡಿಯಲ್ಲಿ ಒದಗಿಸಲಾಗುವುದು. ಇದು ಸಂಪೂರ್ಣ ಭಾರತೀಯ ದೃಷ್ಟಿಕೋನವನ್ನು ಹೊಂದಿದೆ. ದೇಶದ ಪ್ರಗತಿಯ ದೃಷ್ಟಿಯಿಂದ ಮುಂದಿನ 25 ವರ್ಷಗಳಿಗೆ ಅತಿಶಯ ಮಹತ್ವವಿದ್ದು, ಭಾರತವು ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ" ಎಂದು ಭರವಸೆ ವ್ಯಕ್ತಪಡಿಸಿದರು.
"ಕಳೆದ 8 ವರ್ಷಗಳಿಂದ ಇತ್ತೀಚಿಗೆ ದೇಶದ ಗ್ರಾಮೀಣ ಭಾಗದಲ್ಲಿ 410 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜತೆಗೆ ಜಮ್ಮು-ಕಾಶ್ಮೀರದ ಲಡಾಖ್ ಮತ್ತು ಈಶಾನ್ಯ ಭಾರತ ಸೇರಿದಂತೆ ಉದ್ದಗಲಕ್ಕೂ ಕೇಂದ್ರೀಯ ವಿವಿ, ಏಮ್ಸ್, ಐಐಟಿಗಳು, ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ಜ್ಞಾನಶಾಖೆಗಳ ವಿ.ವಿ.ಗಳನ್ನು ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ಭಾಗಗಳನ್ನೂ ಸಮಾನವಾಗಿ ಕಾಣಲಾಗುತ್ತಿದೆ" ಎಂದು ಅಮಿತ್ ಶಾ ತಿಳಿಸಿದರು.












Click it and Unblock the Notifications