''ಕರ್ನಾಟಕದ ಇಲ್ಲಿ ಕೈಗಾರಿಕಾ ಹೊಸ ಉತ್ಪಾದನಾ ಘಟಕ ಆರಂಭ: 3000 ಉದ್ಯೋಗ ಸೃಷ್ಟಿ''
ಬೆಂಗಳೂರು, ಜೂನ್ 03: ದಕ್ಷಿಣ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆ ಬೆಳವಣಿಗೆ ಸಾಧಿಸಲು ರಾಜ್ಯ ಕೈಗಾರಿಕೆ ಇಲಾಖೆ ಮುಂದಾಗಿದೆ. ಅದರ ಫಲವಾಗಿ ಕೈಗಾರಿಕೆ ಕಾರಿಡಾರ್, ಇತರ ಯೋಜನೆಗಳು, ಬಂಡವಾಳ ಹೂಡಿಕೆ ಉತ್ತರದತ್ತ ನಿಧಾನವಾಗಿ ಹರಿದು ಬರುತ್ತಿದೆ. ಇದೀಗ ನೂರಾರು ಕೋಟಿ ರೂಪಾಯಿ ಹೂಡಿಕೆ ಅವಳಿ ನಗರದಲ್ಲಿ ಆಗಿದ್ದು, ಹೊಸ ಕೈಗಾರಿಕ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡುತ್ತಿರುವುದರ ಭಾಗವಾಗಿ ಸೋಮವಾರ ಸಚಿವರು
ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ನೈಡೆಕ್ ಕಂಪನಿಯು 600 ಕೋಟಿ ರೂಪಾಯಿ ಹೂಡಿಕೆ ಸಹಿತ ಅಭಿವೃದ್ಧಿ ಪಡಿಸಿರುವ ನೂತನ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

3,000 ಉದ್ಯೋಗ ಸೃಷ್ಟಿ: ಸಚಿವರ
ಜಪಾನ್ ಮತ್ತು ಫ್ರೆಂಚ್ ತಂತ್ರಜ್ಞಾನದ ಸಂಯೋಗದಲ್ಲಿ ನೈಡೆಕ್ ಕಂಪನಿಯು ಜಿಲ್ಲೆ ವ್ಯಾಪ್ತಿಯಲ್ಲಿ ಈ ಹೊಸ ಘಟಕವು 800 ಜನರಿಗೆ ನೇರ ಉದ್ಯೋಗ ನೀಡಲಿದೆ. ಕಂಪನಿಯ ಬ್ಯಾಟರಿ ಸೊಲ್ಯೂಷನ್ ಸ್ಥಾವರಕ್ಕೆ 20 ಎಕರೆ ಭೂಮಿ ಕೊಡಲಾಗಿದೆ. ಇಲ್ಲಿ ತಯಾರಾಗುವ 2, 3 ಮತ್ತು 4 ಮೆಗಾವ್ಯಾಟ್ ಸಾಮರ್ಥ್ಯದ ಹೆವಿ ಡ್ಯೂಟಿ ಮಶೀನ್ ಗಳು ಡೇಟಾ ಸೆಂಟರ್ ಉದ್ಯಮದ ಅಗತ್ಯ ಪೂರೈಕೆ ಆಗಲಿವೆ. ಈ ಸಾಧನಗಳನ್ನು ಅಮೆರಿಕ ಮತ್ತು ಯೂರೋಪ್ ಗೆ ರಫ್ತು ಮಾಡಲಾಗುವುದು. ಘಟಕವು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಿದರೆ 3,000 ಉದ್ಯೋಗಸೃಷ್ಟಿ ಆಗಲಿದೆ ಎಂದು ಅವರು ವಿವರಿಸಿದರು.
ಹೊಸ ಘಟಕೆ ಕಾರ್ಯವೇನು?
ಈ ಹೊಸ ಘಟಕೆ ಧಾರವಾಡ ಜಿಲ್ಲೆಯ ಬೇಲೂರು ಭಾಗದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಈ ಕಾರ್ಖಾನೆ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಡೇಟಾ ಸೆಂಟರ್ ಉದ್ಯಮಕ್ಕೆ ಬೇಕಾದ ಪವರ್ ಬ್ಯಾಕಪ್ ಜನರೇಟರ್, ವಿಂಡ್ ಜನರೇಟರ್, ಬ್ಯಾಟರಿ ಸ್ಟೋರೇಜ್, ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಬಸ್ ಇವುಗಳಿಗೆ ಬೇಕಾದ ಸಾಧನಗಳನ್ನು ಉತ್ಪಾದಿಸಿ ಪೂರೈಸುತ್ತದೆ ಎಂದು ಅವರು ತಿಳಿಸಿದರು.

ಉತ್ತರ ಕರ್ನಾಟಕದ ಭಾಗಗಳಲ್ಲೂ ಉದ್ದಿಮೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಸಂಬಂಧ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ತಂದಿದ್ದು, ಹಲವು ರಿಯಾಯಿತಿ ಮತ್ತು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನೈಡೆಕ್ ಕಂಪನಿಯ ಈ ಯೋಜನೆಗೆ ಕೇವಲ ಎರಡು ವರ್ಷಗಳಲ್ಲಿ ಭೂಮಿ ಮಂಜೂರು ಮಾಡಿ, ತ್ವರಿತವಾಗಿ ಅನುಷ್ಠಾನಕ್ಕೆ ಬರುವಂತೆ ಮಾಡಲಾಗಿದೆ ಎಂದರು.
ಕೃಷ್ಣೆಯಿಂದ ಟಿಎಂಸಿ ನೀರು ಪೂರೈಕೆ
ಕೃಷ್ಣಾ ನ್ಯಾಯಾಧಿಕರಣವು ಕೈಗಾರಿಕಾ ಅಗತ್ಯಗಳ ಬಳಕೆಗೆ 4 ಟಿಎಂಸಿ ನೀರನ್ನು ಮೀಸಲಿಟ್ಟಿದೆ. ಇದರಲ್ಲಿ ನಾವು ಇದುವರೆಗೆ ಕೇವಲ ಅರ್ಧ ಟಿಎಂಸಿ ನೀರನ್ನು ಮಾತ್ರ ಬಳಸಿಕೊಂಡಿದ್ದೇವೆ. ಇದರಲ್ಲಿ ಇನ್ನೂ 3.5 ಟಿಎಂಸಿ ನೀರು ಬಳಕೆ ಆಗದೇ ಹಾಗೇ ಉಳಿದಿದೆ.ಇದರಲ್ಲಿ ನಾವು ರೈತರ ಪಾಲಿನ ನೀರನ್ನೇನೂ ಮುಟ್ಟಿಲ್ಲ. ಹಿಡಕಲ್ ಜಲಾಶಯದ ಕೆಳಭಾಗದ ನೀರನ್ನಷ್ಟೇ ಬಳಸಿಕೊಂಡಿದ್ದೇವೆ. ಕೈಗಾರಿಕೆಗಳು ಬೆಳೆಯಬೇಕು ಎಂದರೆ ನೀರು ಅತ್ಯಗತ್ಯ.
ಕೈಗಾರಿಕೋದ್ಯಮಗಳು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ರೈತರಿಗೆ ತಕ್ಕ ಪರಿಹಾರ ನೀಡಬೇಕಾಗುತ್ತದೆ. ಹಾಗಂತ ಎಲ್ಲವನ್ನು ಕೈಗಾರಿಕೆ ದೃಷ್ಟಿಯಿಂದ ನೋಡದೇ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಿರುತ್ತದೆ ಎಂದು ಅವರು ಅಭಿಪ್ರಾಯ ಹೊರ ಹಾಕಿದರು.
ಕಾರ್ಯಕ್ರಮದಲ್ಲಿ ಜಪಾನ್ ಕಾನ್ಸುಲ್ ಜನರಲ್ ನಕಾನೆ ಸುಟೋಮು, ಫ್ರಾನ್ಸ್ ಕಾನ್ಸುಲ್ ಜನರಲ್ ಮಾರ್ಕ್ ಲಾಮಿ, ಕಂಪನಿಯ ಹಿರಿಯ ಅಧಿಕಾರಿಗಳಾದ ಮೈಕೆಲ್ ಬ್ರಿಗ್ಸ್, ಗ್ರೆಗ್ ಗಾರ್ಮನ್, ಗಿರೀಶ್ ಕುಲಕರ್ಣಿ ಇನ್ನಿತರರು ಘಟಕ ಚಾಲನೆಗೆ ಸಕ್ಷಿಯಾದರು.












Click it and Unblock the Notifications