ನರೇಗಾ ಯೋಜನೆ ಬಡ, ಶ್ರಮಿಕರಿಗೆ ಒಂದು ವರದಾನ
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಬಡವರಿಗೆ, ಶ್ರಮಿಕರಿಗೆ ಸಹಾಯಕವಾಗುವ ಮಹತ್ತರವಾದ ಒಂದು ಕಾರ್ಯಕ್ರಮವಾಗಿದೆ.
ಕೊಪ್ಪಳ, ಫೆಬ್ರವರಿ 03; ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಬಡವರಿಗೆ, ಶ್ರಮಿಕರಿಗೆ ಮಹತ್ತರವಾದ ಒಂದು ಕಾರ್ಯಕ್ರಮವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನುಮ್ ಹೇಳಿದರು.
ಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪೂರ ಗ್ರಾಮದಲ್ಲಿ 17ನೇ ನರೇಗಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಯಕಮಕ್ಕೂ ಮುನ್ನ ಅವರು ಕೊಲಾರಿ ಎತ್ತಿನ ಬಂಡಿಯಲ್ಲಿ ಸಂಚರಿಸಿ ಯೋಜನೆ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಿದರು.
"ಗ್ರಾಮೀಣ ಪ್ರದೇಶದ ಬಡವರಿಗೆ, ಶ್ರಮಿಕರಿಗೆ ನರೇಗಾ ಯೋಜನೆಯು ಒಂದು ವರದಾನವಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿ, ಜೊತೆಗೆ ಸಮಾನ ಕೆಲಸ. ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ತೃತೀಯ ಲಿಂಗಿಗಳಿಗೂ ಕೆಲಸ ನೀಡಲಾಗುತ್ತಿದೆ" ಎಂದರು.

ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ಸಮಗ್ರ ಶಾಲಾ ಅಭಿವೃದ್ಧಿಯಡಿ ಬಾಲಕ, ಬಾಲಕಿಯರ ಹೈಟೆಕ್ ಶೌಚಾಲಯ ನಿರ್ಮಾಣ, ತಡೆಗೋಡೆ ನಿರ್ಮಾಣ, ಮಳೆ ನೀರಿನ ಕೊಯ್ಲು, ಪೌಷ್ಠಿಕ ಕೈತೋಟ, ಶಾಲಾ ಅಡುಗೆ ಕೋಣೆ ಮತ್ತು ಭೋಜನಾಲಯ, ಆಟದ ಅಂಕಣಗಳ ನಿರ್ಮಾಣ ಮಾಡಲಾಗುತ್ತಿದೆ.
ಯೋಜನೆಯ ಅನ್ವಯ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಪ್ರತಿಭೆಗಳು ಹೊರಬರಲು ಒತ್ತು ನೀಡಲಾಗಿದೆ. ಅಂತರ್ಜಲ ಮಟ್ಟ, ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳಾದ ಅಮೃತ ಸರೋವರ ಕೆರೆಗಳ ನಿರ್ಮಾಣ, ಕಂದಕ ಬದು ನಿರ್ಮಾಣ, ಕೃಷಿ ಹೊಂಡ, ನಾಲಾ ಅಭಿವೃದ್ಧಿಯಿಂದ ಜಿಲ್ಲೆಯ ರೈತರ ಹೊಲಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡಿವೆ.
ಹೊಲದಲ್ಲಿ ತೇವಾಂಶ ಮತ್ತು ಫಲವತ್ತತೆ ಹೆಚ್ಚಿಸಲಾಗಿದೆ. ನರೇಗಾ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ನೂರಾರು ಆಸ್ತಿಗಳು ಸೃಜನೆಯಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಗೆ ಪ್ರತಿಯೊಬ್ಬ ಕೂಲಿಕಾರರ ಶ್ರಮ ಮಹತ್ವದ್ದಾಗಿದ್ದು, ಎಲ್ಲಾ ಕೂಲಿ ಕಾರ್ಮಿಕರಿಗೆ ಅಭಿನಂಧನೆ ಸಲ್ಲಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದರು.

ಕೂಲಿಕಾರರ ಆರೋಗ್ಯ ಸಹ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಆರೋಗ್ಯವಂತರಾಗಿ ಕೆಲಸ ಮಾಡಲು ಸ್ಥಳದಲ್ಲಿಯೇ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಇಲಾಖೆಯ ವೈಧ್ಯಾಧಿಕಾರಿಗಳ ಸೇವೆಯು ಶ್ಲಾಘನೀಯವಾಗಿದೆ.
ನರೇಗಾ ದಿನದ ವಿಶೇಷತೆ; ನರೇಗಾ ದಿನಾಚರಣೆಗೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಾಂಪ್ರದಾಯಕ ಕೊಲಾರಿ ಎತ್ತಿನ ಬಂಡಿಯಲ್ಲಿ ಸಂಚರಿಸಿ ನರೇಗಾ ಬಗ್ಗೆ ಜಾಗೃತಿ ಮೂಡಿಸಿದರು. ಡೊಳ್ಳು ಕುಣಿತ ತಂಡವರು, ಗ್ರಾಮ ಕಾಯಕ ಮಿತ್ರರು, ಮಹಿಳಾ ಕೂಲಿಕಾರರು ಕುಂಭ ಹೊತ್ತು ನರೇಗಾ ದಿನಾಚರಣೆಗೆ ಮೆರಗು ತಂದರು. ಕಾರ್ಯಕ್ರಮದ ನಿಮಿತ್ತ 2022-23ನೇ ಸಾಲಿನಲ್ಲಿ 100 ದಿನ ಕೆಲಸ ಪೂರೈಸಿದ ಕೂಲಿಕಾರರಿಗೆ ಕಾಯಕ ಸಮ್ಮಾನ್ ಪ್ರಶಸ್ತಿ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೋಡ್ಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನ್ನಮ್ಮ ಬಸವರಾಜಪ್ಪ ತಿಪ್ಪರಸನಾಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಾರಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಕೊಪ್ಪಳದಲ್ಲಿ ಗುರಿ ಮೀರದ ಯೋಜನೆ; ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿದೆ. ನೀಡಿದ ಗುರಿಯನ್ನು ಮೀರಿದೆ.
ಕೇರಳದ ನರೇಗಾ ಅಧಿಕಾರಿಗಳ ತಂಡವು ಜಿಲ್ಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಠಾನಿಸಲಾದ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸಮುದಾಯ ಹಾಗೂ ವೈಯಕ್ತಿಕ ಇಂಗುಗುಂಡಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಈಗ ಅಪ್ಲಿಕೇಶನ್ ಗಮನ ಸೆಳೆದಿದೆ. ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಅಪ್ಲಿಕೇಶನ್ ಕಡ್ಡಾಯಗೊಳಿಸಿದೆ.
ನರೇಗಾ ಯೋಜನೆ ಕೂಲಿಕಾರರ ಹಾಜರಾತಿ ವೇಳೆ ನಕಲಿ ಹಾಜರಾತಿ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಯೋಜನೆಯಡಿ ನಿರ್ವಹಿಸುವ ಕಾಮಗಾರಿಗಲ್ಲಿ ಒಂದು ಕಾಮಗಾರಿ ಸ್ಥಳದಲ್ಲಿ 20 ಅದಕ್ಕಿಂತ ಹೆಚ್ಚು ಕೂಲಿಕಾರರು ಇರುವಲ್ಲಿ ಅಪ್ಲಿಕೇಶನ್ ಮೂಲಕವೇ ಹಾಜರಾತಿ ದಾಖಲು ಮಾಡಲಾಗುತ್ತಿದೆ.
ಈ ಮೊದಲು ಎನ್ಎಂಆರ್ ಶೀಟ್ನಲ್ಲಿ ನರೇಗಾ ಕೂಲಿಕಾರರ ಹಾಜರಾತಿಯನ್ನು ಪಡೆಯಲಾಗುತ್ತಿತ್ತು. ಕೆಲ ಕೂಲಿಕಾರರು ಕೆಲಸಕ್ಕೆ ಗೈರಾದರೂ ಹಾಜರಾತಿ ಬೀಳುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಈ ಅಪ್ಲಿಕೇಶನ್ ಜಾರಿಗೆ ತಂದಿದೆ. ಬೆಳಗ್ಗೆ 8 ರಿಂದ 11 ರಿಂದ ಹಾಜರಾತಿ ಹಾಕಲು ಅವಕಾಶ ಇದ್ದು ಕೂಲಿ ಕಾರ್ಮಿಕರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.












Click it and Unblock the Notifications