ಹುಣಸೂರು ಜಿಟಿಟಿಸಿ ಕೇಂದ್ರಕ್ಕೆ ಚಾಲನೆ, ವರ್ಷಕ್ಕೆ 500 ಯುವಜನರಿಗೆ ತರಬೇತಿ
ಮೈಸೂರು, ಸೆ.29: ಹುಣಸೂರಿನ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಸಂಸ್ಥೆಯನ್ನು (ಜಿಟಿಟಿಸಿ) ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಉದ್ಘಾಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಜಿಟಿಟಿಸಿ ಕೇಂದ್ರದಲ್ಲಿ ಪ್ರತಿ ವರ್ಷವೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಆಧುನಿಕ ಕೌಶಲ್ಯಗಳಿರುವ ತರಬೇತಿ ನೀಡಿ, ಅವರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಲಾಗುವುದು. ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಲಿತವರು ಕೂಡ ತರಬೇತಿ ಪಡೆದುಕೊಳ್ಳಬಹುದು. ಇದ್ಯಾವುದಕ್ಕೂ ವಿದ್ಯಾರ್ಥಿಗಳ ಬಳಿ ಸರ್ಕಾರವು ನಯಾಪೈಸೆ ಶುಲ್ಕವನ್ನೂ ತೆಗೆದುಕೊಳ್ಳದೆ, ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಡೈಯಿಂಗ್, ಫಿಟ್ಟರ್, ಮೆಟಲರ್ಜಿ ಸೇರಿದಂತೆ 10 ಕ್ಕೂ ಹೆಚ್ಚು ಆಧುನಿಕ ಕೋರ್ಸುಗಳಿವೆ. ಇವುಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗಳೆರಡೂ ಇವೆ. ಮುಂಬರುವ ದಿನಗಳಲ್ಲಿ ಈ ಜಿಟಿಟಿಸಿಯಲ್ಲಿ ಮತ್ತಷ್ಟು ಕೋರ್ಸುಗಳನ್ನು ಆರಂಭಿಸಲಾಗುವುದು. ಕರ್ನಾಟಕದ ಈ ಮಾದರಿಯನ್ನು ತಮಿಳುನಾಡು, ಅಸ್ಸಾಂ ಮುಂತಾದ ರಾಜ್ಯಗಳೂ ಅನುಕರಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯ ಸರಕಾರವು ಯುವಜನರಲ್ಲಿ ಕೌಶಲ್ಯ ತರಬೇತಿಗೆ ಆದ್ಯತೆ ಕೊಟ್ಟಿದೆ. ಹಿಂದೆಲ್ಲ ವರ್ಷಕ್ಕೆ ಕೇವಲ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಕೌಶಲ್ಯ ತರಬೇತಿ ಕೊಡಲಾಗುತ್ತಿತ್ತು. ಈಗ ಈ ಸಂಖ್ಯೆ ಹಲವು ಲಕ್ಷಗಳಿಗೆ ಏರಿದೆ. ಇದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿದ್ದು, ಯುವಜನರಲ್ಲಿರುವ ಕೊರತೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಸರಕಾರವೇ ಉಚಿತ ತರಬೇತಿಗೆ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಹದೇವಪುರದಲ್ಲಿ ಪ್ರವಾಹ ಬರದಂತೆ ವ್ಯವಸ್ಥೆಗೆ ಐಟಿ ಪರಿಣತಿ, ಹಣದ ವಿನಿಯೋಗಕ್ಕೆ ನಿರ್ಧಾರ
4,500 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ 150 ಐಟಿಐಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಉಳಿದಿರುವ 30 ಐಟಿಐಗಳನ್ನು ಈ ವರ್ಷ ಉನ್ನತೀಕರಿಸಲಾಗುವುದು. ಇದಕ್ಕಾಗಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಹಾಗೆಯೇ ಪಾಲಿಟೆಕ್ನಿಕ್ಗಳಲ್ಲಿ ಶೇಕಡಾ 100 ರಷ್ಟು ದಾಖಲಾತಿ ಆಗುವಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಲಾಗುತ್ತಿದೆ. ಜಿಟಿಟಿಸಿಗಳಿಗಂತೂ ಈಚಿನ ವರ್ಷಗಳಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ ಎಂದು ಅಶ್ವತ್ಥನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ನಿರುದ್ಯೋಗ ಹೊಂದಿರುವ ರಾಜ್ಯವೆಂದರೆ ಕರ್ನಾಟಕ ಮಾತ್ರ. ಆಯಾ ಕಾಲಕ್ಕೆ ತಕ್ಕ ನೀತಿಗಳನ್ನು ರೂಪಿಸಿಕೊಂಡು, ಹೊಸತನಕ್ಕೆ ತೆರೆದುಕೊಳ್ಳುತ್ತಿರುವುದರಿಂದ ಇದು ಸಾಧ್ಯವಾಗಿದೆ. ಇದರ ಜತೆಗೆ ತಂತ್ರಜ್ಞಾನದ ಅನ್ವಯಿಕತೆಯು ರಾಜ್ಯದ ಶಕ್ತಿಯಾಗಿದೆ. ಹೀಗಾಗಿ ಇಡೀ ದೇಶದ ಎಲ್ಲಾ ಭಾಗಗಳಿಂದಲೂ ನಮ್ಮಲ್ಲಿಗೆ ಉದ್ಯೋಗ ಅರಸಿಕೊಂಡು ಬರುವವರ ಸಂಖ್ಯೆ ಜಾಸ್ತಿ ಇದೆ ಎಂದು ಸಚಿವರು ಹೇಳಿದ್ದಾರೆ.