KPSC: ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ, ಕಟ್ ಆಫ್ ಅಂಕ ಇಳಿಕೆ?
ಬೆಂಗಳೂರು, ಆಗಸ್ಟ್ 31: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆಗಸ್ಟ್ 27ರಂದು ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿದೆ. ಆದರೆ ವಿವಿಧ ಕಾರಣಕ್ಕೆ ಈ ಪರೀಕ್ಷೆಯು ಸುದ್ದಿಯಲ್ಲಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಕೆಎಎಸ್ ನೇಮಕಾತಿ ಪರೀಕ್ಷೆಗಳನ್ನು ಬರೆದಿದ್ದಾರೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೀ-ಉತ್ತರಗಳನ್ನು ಪ್ರಕಟಿಸಲಾಗಿದೆ. ಪರೀಕ್ಷೆಯ ಕಟ್ ಆಫ್ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಎಂಬ ಸುದ್ದಿ ಈಗ ಹಬ್ಬಿದೆ.
ಆಗಸ್ಟ್ 27ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ಮುಂದೂಡಬೇಕು ಎಂಬ ಒತ್ತಾಯದ ನಡುವೆಯೇ ಪರೀಕ್ಷೆಯನ್ನು ನಡೆಸಲಾಗಿತ್ತು. ಆದರೆ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪು ಕನ್ನಡದ ಕಾರಣಕ್ಕೆ ಅಭ್ಯರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಕುರಿತು ಸಮರ್ಥನೆಯನ್ನು ನೀಡಿತ್ತು. ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು 4-09-2024ರ ಒಳಗಾಗಿ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಕಟ್ ಆಫ್ ಅಂಕ ಇಳಿಕೆ?: ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಬೇಕಾದ ಕಟ್ ಆಫ್ ಅಂಕಗಳನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಸದ್ಯ 160 ಕಟ್ ಆಫ್ ಅಂಕಗಳನ್ನು ನಿಗದಿ ಮಾಡಲಾಗಿದೆ. ಆದರೆ ಪ್ರಶ್ನೆ ಪತ್ರಿಕೆ ದೋಷದ ಹಿನ್ನಲೆಯಲ್ಲಿ ಕಟ್ ಆಫ್ ಅಂಕಗಳನ್ನು 150ಕ್ಕೆ ಇಳಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಇದ್ದು, ಅಧಿಕೃತವಾದ ಆದೇಶ ಪ್ರಕಟವಾಗಿಲ್ಲ.
2017-18ರ ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗೆ ಕಟ್ ಆಫ್ ಅಂಕ 200 ಇತ್ತು. 2015ರಲ್ಲಿ 184 ಇತ್ತು. ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿನ ಕನ್ನಡ ದೋಷದ ಹಿನ್ನಲೆಯಲ್ಲಿ ಕಟ್ ಆಫ್ ಅಂಕ ಕಡಿಮೆ ಮಾಡುವ ನಿರೀಕ್ಷೆ ಇದೆ.
ಭಾಷಾಂತರದ ವೇಳೆ ಆಗಿರುವ ಕನ್ನಡ ತಪ್ಪುಗಳ ಕುರಿತು ಈಗಾಗಲೇ ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಕೆಪಿಎಸ್ಸಿ ಎಲ್ಲಾ ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಕಟ್ ಆಫ್ ಅಂಕ ಕಡಿತ ಮಾಡುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕೆಪಿಎಸ್ಸಿ ಸ್ಪಷ್ಟನೆ: ಇನ್ನು ಮಂಗಳವಾರ ನಡೆದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕನ್ನಡ ತಪ್ಪುಗಳ ಬಗ್ಗೆ ಕೆಪಿಎಸ್ಸಿ ಸ್ಪಷ್ಟನೆಯನ್ನು ನೀಡಿದೆ.
ಆಯೋಗದಿಂದ ನಡೆಸಲಾಗುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಆಯೋಗದ ಪ್ರಶ್ನೆ ಪತ್ರಿಕೆಗಳ ಭಾಷಾಂತರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲಾಗುತ್ತಿದ್ದು, ಪ್ರಶ್ನೆಗಳ ಭಾಷಾಂತರ ಕಾರ್ಯವು ಆಯೋಗದ ಕಛೇರಿಯಲ್ಲಿಯೇ ಭಾಷಾಂತರ ಇಲಾಖೆಯಿಂದ ನಿಯೋಜಿಸಲ್ಪಡುವ ಭಾಷಾಂತರಕಾರರಿಂದ ನೆರವೇರಿಸಲಾಗುತ್ತಿದೆಯೇ ಹೊರತು ಯಾವುದೇ ಗೂಗಲ್ ಭಾಷಾಂತರ ಹಾಗೂ ಕೃತಕ ಬುದ್ಧಿಮತ್ತೆಗಳನ್ನಾಗಲಿ ಬಳಸಲಾಗುತ್ತಿರುವುದಿಲ್ಲ ಎಂದು ಹೇಳಿದೆ.
ಸದರಿ ತಂತ್ರಾಂಶಗಳನ್ನು ಪ್ರಶ್ನೆಗಳ ಭಾಷಾಂತರ ಕಾರ್ಯದಲ್ಲಿ ಬಳಸಲು ಸಹ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಲ್ಲಿ ಅಥವಾ ಪ್ರಶ್ನೆಗಳ ಭಾಷಾಂತರದಲ್ಲಿ ತೀರಾ ಗೊಂದಲವುಂಟಾದಲ್ಲಿ, ಆಯೋಗದಿಂದ ಪ್ರಕಟಿಸಲಾಗುವ ಕೀ-ಉತ್ತರಗಳಿಗೆ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ವಿಷಯ ತಜ್ಞರುಗಳ ಸಮಿತಿಯ ಅಭಿಪ್ರಾಯವನ್ನು ಪಡೆದು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಎಲ್ಲಾ ಅಭ್ಯರ್ಥಿಗಳ ಗಮನಕ್ಕೆ/ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕೆಪಿಎಸ್ಸಿ ತಿಳಿಸಿದೆ.












Click it and Unblock the Notifications