Breaking; ಬೆಳಗಾವಿ ಭಾಗದ ಜನರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
ಬೆಳಗಾವಿ, ಜೂನ್ 18; ಕರ್ನಾಟಕ ಸರ್ಕಾರ ಬೆಳಗಾವಿ ಭಾಗದ ಜನರಿಗೆ ಸಿಹಿಸುದ್ದಿ ನೀಡಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೆಎಸ್ಸಿಡಿಆರ್ಸಿ ಖಾಯಂ ಸಂಚಾರಿ ಪೀಠವನ್ನು ಸ್ಥಾಪಿಸಲು ಒಪ್ಪಿಗೆ ನೀಡಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಬಿ. ಕೆ. ದೇವಯ್ಯ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಕೆಎಸ್ಸಿಡಿಆರ್ಸಿ) ಖಾಯಂ ಸಂಚಾರಿ ಪೀಠ ಸ್ಥಾಪನೆಗೆ ಆದೇಶಿಸಿದ್ದಾರೆ.
ಖಾಯಂ ಸಂಚಾರಿ ಪೀಠವನ್ನು ಸ್ಥಾಪನೆ ಮಾಡಿ ಅದಕ್ಕೆ ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಒಟ್ಟು 22 ಹುದ್ದೆಗಳ ಭರ್ತಿಗೆ ಆದೇಶ ಪ್ರತಿಯಲ್ಲಿ ಅನುಮೋದನೆ ನೀಡಲಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಈ ಕುರಿತು ಮಾತುಕತೆ ನಡೆಸಿದ್ದರು. ಕೆಎಸ್ಸಿಡಿಆರ್ಸಿ ಖಾಯಂ ಸಂಚಾರಿ ಪೀಠ ಸ್ಥಾಪನೆ ಮಾಡಬೇಕು ಎಂದು ವಕೀಲರು ಸಹ ಪ್ರತಿಭಟನೆ ನಡೆಸಿದ್ದರು.
ಜೂನ್ 14ರಂದು ನೂರಾರು ವಕೀಲರು ಕೋರ್ಟ್ ಕಲಾಪ ಬಹಿಷ್ಕಾರ ಮಾಡಿ ಹನುಮಾನ್ ಸರ್ಕಲ್, ಚೆನ್ನಮ್ಮ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಕೊನೆಗೂ ಒತ್ತಡಕ್ಕೆ ಮಣಿಸಿದ್ದು, ಖಾಯಂ ಸಂಚಾರಿ ಪೀಠ ಸ್ಥಾಪನೆಗೆ ಅನುಮತಿ ನೀಡಿದೆ.
ಹುದ್ದೆಗಳ ವಿವರ; ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಕೆಎಸ್ಸಿಡಿಆರ್ಸಿ) ಖಾಯಂ ಸಂಚಾರಿ ಪೀಠಕ್ಕೆ 22 ಸಿಬ್ಬಂದಿಗಳ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ.

ನ್ಯಾಯಾಂಗ ಸದಸ್ಯರು 1, ಮಹಿಳಾ ಸದಸ್ಯರು 1, ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ 1, ಶಿರಸ್ತೇದಾರ್ 1, ಶೀಘ್ರಲಿಪಿಗಾರರು 4, ಪ್ರಥಮ ದರ್ಜೆ ಸಹಾಯಕರು 3, ದ್ವಿತೀಯ ದರ್ಜೆ ಸಹಾಯಕರು 3, ದತ್ತಾಂಶ ನಮೂದು ಸಹಾಯಕರು 2, ಗ್ರೂಪ್ ಡಿ ನೌಕರರು 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.












Click it and Unblock the Notifications