1,727 ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರದ ಒಪ್ಪಿಗೆ
ಬೆಂಗಳೂರು, ಜನವರಿ 16; ಕರ್ನಾಟಕ ಸರ್ಕಾರ 1,727 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಸದರಿ ಪ್ರಕ್ರಿಯೆ ತುರ್ತಾಗಿರುವ ಪ್ರಯುಕ್ತ ಪ್ರಥಮ ಆದ್ಯತೆ ಮೇರೆಗೆ ಕ್ರಮ ಜರುಗಿಸಬೇಕು ಎಂದು ಜಿಲ್ಲೆಯ ಉಪ ನಿರ್ದೇಶಕರು (ಆಡಳಿತ) ಅವರಿಗೆ ಪತ್ರದಲ್ಲಿ ಸೂಚನೆ ನೀಡಿದೆ.
ಸಹಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ 1,727 ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಮಾಹಿತಿ ಒದಗಿಸುವ ಕುರಿತು ಪತ್ರ ಬರೆಯಲಾಗಿದೆ. ಸಂಬಂಧಿಸಿದ ಜಿಲ್ಲೆಗಳ ಉಪ ನಿರ್ದೇಶಕರು (ಆಡಳಿತ) ಇವರು ನೇಮಕಾತಿ ಪ್ರಾಧಿಕಾರಿಗಳಾಗಿದ್ದು, ವಿಭಾಗೀಯ ಸಹ ನಿರ್ದೇಶಕರು ಆಯ್ಕೆ ಪ್ರಾಧಿಕಾರಿಗಳಾಗಿರುತ್ತಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಅತೀ ತುರ್ತು ಎಂದು ಈ ಕುರಿತು ಆದೇಶ ಹೊರಡಿಸಿದೆ. ಸರ್ಕಾರಿ ಪ್ರೌಢಶಾಲೆಗಳು, ಆದರ್ಶ ವಿದ್ಯಾಲಯ ಮತ್ತು ಆರ್. ಎಂ. ಎಸ್. ಎ ಶಾಲೆಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಒಟ್ಟು 1727 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮದ ಅನುಸಾರ ಆಯ್ಕೆ ಪ್ರಾಧಿಕಾರಗಳು ಸದರಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಆಧರಿಸಿ ಶಿಕ್ಷಕರುಗಳ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿ ಕೇದ್ರಿಕೃತ ದಾಖಲಾತಿ ಘಟಕ, ಬೆಂಗಳೂರು ಇವರ ಸಹಯೋಗದೊಂದಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿರುತ್ತದೆ.
ಪ್ರಸ್ತುತ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿರುತ್ತದೆ. ಈ ಸಂಬಂಧ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಪ್ರಸ್ತುತ ನಡೆಯುತ್ತಿರುವ ವರ್ಗಾವಣೆ ಪ್ರಕ್ರಿಯೆಯ ನಂತರದ ಜಿಲ್ಲೆಯೊಳಗಿನ ಖಾಲಿ ಹುದ್ದೆಗಳ ವಿಷಯವಾರು ನಿಖರ ಮಾಹಿತಿಯನ್ನು ಪಡೆದು ಹಾಗೂ ವೃಂದ ಮತ್ತು ನೇಮಕಾತಿ ನಿಯಮ ಆಧರಿಸಿ ನಿಗದಿತ ನಮೂನೆಯಲ್ಲಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ವಿಷಯವಾರು ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಮಾಡಿರುವ ಕೊನೆಯ ಮೀಸಲಾತಿ ಬಿಂದುವಿನ ನಂತರದಿಂದ ಪ್ರಾರಂಭಿಸಿ ಆಯಾ ವಿಷಯವಾರು ಬಿಂದುವಿನಿಂದ ಮೀಸಲಾತಿ ನಿಗದಿಪಡಿಸಿ ಸೀಟ್ ಮ್ಯಾಟ್ರಿಕ್ಸ್ ತಯಾರಿಸಿ ನಾಲ್ಕೂ ವಿಭಾಗಗಳ ಆಯ್ಕೆ ಪ್ರಾಧಿಕಾರಿಗಳು ಹಾಗೂ ವಿಭಾಗೀಯ ಸಹ ನಿರ್ದೇಶಕರು ಸದರಿ ಮಾಹಿತಿಯನ್ನು ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಸ್ವಯಂ ಉದ್ಯೋಗ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ; ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ದೀನ್ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ ಅರ್ಹ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಕಾರ್ಯಕ್ರಮ (ವೈಯಕ್ತಿಕ) ಘಟಕದಡಿ ವೈಯಕ್ತಿಕ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ 2 ಲಕ್ಷದವರೆಗೆ ಸೇವಾ ವಲಯ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಹಾಗೂ ಸಾಲದ ಮೇಲೆ ಬಡ್ಡಿ ದರ ಶೇ 7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.
ಅಭ್ಯರ್ಥಿಗಳು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು ಅಥವಾ ಅವರ ಮನೆಯಲ್ಲಿ ಯಾರಾದರೂ ಒಬ್ಬರು ಸಂಘದ ಸದಸ್ಯರಾಗಿರಬೇಕು ಮತ್ತು ಅರ್ಜಿ ಸಲ್ಲಿಸುವವರು 18 ವರ್ಷ ವಯಸ್ಸು ಪೂರೈಸಿರಬೇಕು.
ಯೋಜನೆಯ ಮಾರ್ಗಸೂಚಿಯ ಅನ್ವಯ ಆಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಜನವರಿ 21 ರೊಳಗಾಗಿ ಮಹಾನಗರ ಪಾಲಿಕೆ ವಲಯ ಕಛೇರಿ-1 (ಹಳೇ ಕಟ್ಟಡದ) ಡೇ-ನಲ್ಮ್ ಶಾಖೆಗೆ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications