ಅಗ್ನಿಪಥ್ ಅಡಿ ನೌಕಾಪಡೆಯ 2800 ಅಗ್ನಿವೀರ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?
ನವದೆಹಲಿ, ಜುಲೈ 02: ಭಾರತೀಯ ನೌಕಾಪಡೆಯು ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ 2800 ಅಗ್ನಿವೀರ್ ಹುದ್ದೆಯ ಹಿರಿಯ ಮಾಧ್ಯಮಿಕ ನೇಮಕಾತಿಯ (SSR) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 22, 2022 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್, joinindiannavy.gov.in ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.
ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?, ಈ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಏನೆಲ್ಲಾ ಅರ್ಹತೆಗಳು ಬೇಕು? ಹುದ್ದೆಯ ವೇತನ ಶ್ರೇಣಿ ಎಷ್ಟಿದೆ ಎಂಬುದರ ಕುರಿತು ಇತರೆ ಮಾಹಿತಿಯನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಭಾರತೀಯ ನೌಕಾಪಡೆಯ ನೇಮಕಾತಿ 2022:
* ಹುದ್ದೆ: ಹಿರಿಯ ಮಾಧ್ಯಮಿಕ ನೇಮಕಾತಿಗಾಗಿ ಅಗ್ನಿವೀರ್ (SSR) - ನವೆಂಬರ್ 2022 ಬ್ಯಾಚ್.
* ಹುದ್ದೆಯ ಸಂಖ್ಯೆ: 2800 (560 ಸ್ತ್ರೀ)
* ವೇತನ ಶ್ರೇಣಿ: 30000/- (ಪ್ರತಿ ತಿಂಗಳಿಗೆ)
ಭಾರತೀಯ ನೌಕಾಪಡೆಯ ನೇಮಕಾತಿ 2022 ಅರ್ಹತಾ ಮಾನದಂಡಗಳು:
* ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರದೊಂದಿಗೆ 10+2 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು. ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಶಾಲಾ ಶಿಕ್ಷಣ ಮಂಡಳಿಗಳಿಂದ ರಸಾಯನಶಾಸ್ತ್ರ / ಜೀವಶಾಸ್ತ್ರ / ಕಂಪ್ಯೂಟರ್ ಸೈನ್ಸ್ ಪೈಕಿ ಕನಿಷ್ಠ ಒಂದು ವಿಷಯಗಳನ್ನು ಒಳಗೊಂಡಂತೆ ಪದವಿ ಪಡೆದಿರಬೇಕು.
* ವಯಸ್ಸಿನ ಮಿತಿ: 01 ನವೆಂಬರ್ 1999 ರಿಂದ 30 ಏಪ್ರಿಲ್ 2005ರ ನಡುವೆ ಜನಿಸಿದರು
ಅರ್ಜಿ ಸಲ್ಲಿಸುವುದು ಹೇಗೆ?:
* ಆಸಕ್ತ ಅಭ್ಯರ್ಥಿಗಳು joinindiannavy.gov.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
* ಆನ್ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ಜುಲೈ 15, 2022
* ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜುಲೈ 22, 2022
* ಲಿಖಿತ ಪರೀಕ್ಷೆಯ ದಿನಾಂಕ: ಅಕ್ಟೋಬರ್ 2022
ಆಯ್ಕೆ ಪ್ರಕ್ರಿಯೆ:
ಆಯ್ಕೆಯು ಶಾರ್ಟ್ಲಿಸ್ಟಿಂಗ್, ಲಿಖಿತ ಪರೀಕ್ಷೆ, ಅರ್ಹತಾ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಫಿಟ್ನೆಸ್ಗೆ ಒಳಪಟ್ಟಿರುತ್ತದೆ.
ಅಗ್ನಿಪಥ್ ನೇಮಕಾತಿ ಯೋಜನೆ:
ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯು ದೇಶದ ಮೂರು ಸೇನೆಗಳಿಗೆ ಯೋಧರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ. 17.5 ರಿಂದ 23 ವಯೋಮಾನ ಯುವಕರನ್ನು ಒಪ್ಪಂದದ ಮೇರೆಗೆ ನಾಲ್ಕು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ 6 ತಿಂಗಳು ತರಬೇತಿಯೂ ಸೇರಿರುತ್ತದೆ. ನಾಲ್ಕು ವರ್ಷದ ಸೇವಾವಧಿಯಲ್ಲಿ ಮಾಸಿಕ 30 ರಿಂದ 40 ಸಾವಿರ ರೂಪಾಯಿ ವೇತನದ ಜೊತೆಗೆ ವೈದ್ಯಕೀಯ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವನ್ನು ನೀಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಶೇ.75ರಷ್ಟು ಯೋಧರನ್ನು ಸೇನೆಯಿಂದ ವಿಮುಕ್ತಿಗೊಳಿಸಲಾಗುವುದು. ತದನಂತರದಲ್ಲಿ ಈ ಯೋಧರಿಗೆ ಯಾವುದೇ ರೀತಿ ಪಿಂಚಣಿ ಸೌಲಭ್ಯವನ್ನು ನೀಡಲಾಗುವುದಿಲ್ಲ.
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗವನ್ನು ಕಲ್ಪಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.












Click it and Unblock the Notifications