ಅನುಕಂಪ ಆಧಾರದ ನೇಮಕಾತಿ; ಕರ್ನಾಟಕ ಸರ್ಕಾರದ ಸ್ಪಷ್ಟನೆಗಳು
ಕರ್ನಾಟಕ ಸರ್ಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಕುರಿತು ಸ್ಪಷ್ಟೀಕರಣವನ್ನು ನೀಡಿದೆ. ಅನುಕಂಪದ ಆಧಾರದ ನೇಮಕಾತಿಗೆ ಯಾರು ಅರ್ಹರಾಗುವುದಿಲ್ಲ ಎಂದು ಸಹ ಹೇಳಿದೆ.
ಬೆಂಗಳೂರು, ಜನವರಿ 25; ಕರ್ನಾಟಕ ಸರ್ಕಾರ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಕುರಿತು ಸ್ಪಷ್ಟನೆಗಳನ್ನು ನೀಡಿದೆ. ಈ ನೇಮಕಾತಿಗೆ ಯಾರು ಅರ್ಹರು ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ ಜನವರಿ 25ರ ಬುಧವಾರ ಈ ಕುರಿತು ಆದೇಶ ಹೊರಡಿಸಿದೆ. ಯಾರಿಗೆ ಈ ನೇಮಕಾತಿ ನಿಯಮಗಳ ಅಡಿ ಉದ್ಯೋಗ ನೀಡಲು ಬರುವುದಿಲ್ಲ ಎಂದು ಸಹ ವಿವರಿಸಲಾಗಿದೆ.
ವೀರಭದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರ ನೀಡಿರುವ ಸ್ಪಷ್ಟೀಕರಣ ಹೀಗಿದೆ.

ಸ್ಪಷ್ಟೀಕರಣ; ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಸೇವೆಯಲ್ಲಿರುವಾಗಲೇ ಮೃತಪಡುವ ಸರ್ಕಾರಿ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ನಿಯಮಗಳ ನಿಯಮ 2 (1) (ಎ) ಮತ್ತು (ಬಿ)ರಲ್ಲಿ 'ಮೃತ ಸರ್ಕಾರಿ ನೌಕರರ ಅವಲಂಬಿತರು' ಹಾಗೂ 'ಕುಟುಂಬ' ಪದಗಳನ್ನು ವ್ಯಾಖ್ಯಾನಿಸಲಾಗಿದೆ ಹಾಗೂ ನಿಯಮ 3ರಲ್ಲಿ ನೇಮಕಾತಿಗೆ ಅರ್ಹತೆ ಕುರಿತಂತೆ ನಿರ್ದಿಷ್ಟಪಡಿಸಲಾಗಿದೆ. ವಿವಾಹಿತ ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅನುಕಂಪದ ಆಧಾರದ ನೇಮಕಾತಿ ಪಡೆಯಲು ಅರ್ಹರಾದ ಅವಲಂಬಿತರ ಬಗ್ಗೆ ತಿಳಿಸಲಾಗಿದೆ.
ಇದರನ್ವಯ, ವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಪತ್ನಿ/ ಪತಿ, ಮಗ ಮತ್ತು ಮಗಳು ಹಾಗೂ ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭಗಳಲ್ಲಿ ಅವರ ಸಹೋದರ, ಸಹೋದರಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗಿರುತ್ತಾರೆ.
ಮುಂದುವರೆದು, ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ, ಅವರ ಪತ್ನಿ/ ಪತಿ ಕಾನೂನಾತ್ಮಕವಾಗಿ ಸದರಿ ನೌಕರರಿಂದ ಬೇರ್ಪಡುವುದರಿಂದ, ಅವರಿಗೆ ಅನುಕಂಪದ ಆಧಾರದ ನೇಮಕಾತಿ ನೀಡಲು ಅವಕಾಶವಿರುವುದಿಲ್ಲವಾದರೂ, ವಿಚ್ಚೇದಿತ ನೌಕರರ ಮಕ್ಕಳು ಅವರಿಗೆ ಅಲವಂಬಿತರಾಗಿದ್ದಲ್ಲಿ ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ, ಅವರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದಾಗಿದೆ.
ಆದರೆ, ವಿಚ್ಚೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದು, ಅವರಿಗೆ ಮಕ್ಕಳಿಲ್ಲದ ಸಂದರ್ಭಗಳಲ್ಲಿ, ಅವಿವಾಹಿತ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಅನ್ವಯವಾಗುವಂತೆ ಅವರ ಸಹೋದರ/ ಸಹೋದರಿಗೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಬಹುದೇ? ಎಂಬ ಬಗ್ಗೆ ಹಲವು ಇಲಾಖೆಗಳು ಸೃಷ್ಟಿಕರಣ ಕೋರುತ್ತಿವೆ.
ವಿಚ್ಛೇದಿತ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟು ಅವರಿಗೆ ಮಕ್ಕಳಿದ್ದಲ್ಲಿ, ಅಂತಹ ಮಕ್ಕಳು ನೌಕರರಿಗೆ ಅವಲಂಬಿತರಾಗಿದ್ದು ಹಾಗೂ ಅವರೊಂದಿಗೆ ವಾಸಿಸುತ್ತಿದ್ದಲ್ಲಿ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿಚ್ಛೇದಿತ ನೌಕರರ ಸಹೋದರ/ ಸಹೋದರಿಯು ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಾಗುವುದಿಲ್ಲ.
ವಿಚ್ಚೇದಿತ ಪುರುಷ/ ಮಹಿಳಾ ಸರ್ಕಾರಿ ನೌಕರರು ಸೇವೆಯಲ್ಲಿರುವಾಲೇ ಮೃತಪಟ್ಟ ಸಂದರ್ಭಗಳಲ್ಲಿ ಹಾಗೂ ಅವರಿಗೆ ಮಕ್ಕಳಿಲ್ಲದಿದ್ದಲ್ಲಿ, ಅಂತಹ ಸರ್ಕಾರಿ ನೌಕರರನ್ನು ಅವಿವಾಹಿತ ಸರ್ಕಾರಿ ನೌಕರರಿಗೆ ಸಮಾನವಾಗಿ ಪರಿಗಣಿಸಿ, ಮೃತ ನೌಕರರ ಮೇಲೆ ಅವಲಂಬಿತರಾಗಿದ್ದ ಹಾಗೂ ಅವರೊಂದಿಗೆ ವಾಸಿಸುತ್ತಿದ್ದ ಅವರ ಸಹೋದರ/ ಸಹೋದರಿಗೆ ನಿಯಮಗಳ ಇತರೆ ಷರತ್ತು/ ನಿಬಂಧನೆಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದೆಂದು ಈ ಮೂಲಕ ತಿಳಿಸಲಾಗಿದೆ.
ಈ ಅಂಶಗಳು ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿರುವ ದಿನಾಂಕ 9/4/2021ರಿಂದ ಅನ್ವಯವಾಗುತ್ತವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.












Click it and Unblock the Notifications