ಕೊಪ್ಪಳದಲ್ಲಿ ಮಾರ್ಚ್ 4ರಂದು ಕ್ಯಾಂಪಸ್ ಸಂದರ್ಶನ
ಕೊಪ್ಪಳ, ಮಾರ್ಚ್ 01: ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಅಪ್ರೆಂಟಿಸ್ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕ್ಯಾಂಪಸ್ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 13,000ಗಳ ಸ್ಟೈಫಂಡ್ ನೀಡಲಾಗುತ್ತದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದು.
ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಮಾರ್ಚ್ 4ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕುಕನೂರಿನ (ಗುದ್ನೆಪ್ಪನ ಮಠ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜನೆ ಮಾಡಲಾಗಿದೆ. ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಈ ಕುರಿತು ಮಾಹಿತಿ ನೀಡಿದ್ದಾರೆ.

ಈ ಕ್ಯಾಂಪಸ್ ಸಂದರ್ಶನದಲ್ಲಿ ಮೆ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್, ಬೇವಿನಹಳ್ಳಿ ಭಾಗವಹಿಸಲಿದ್ದಾರೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳನ್ನು ಶಿಶುಕ್ಷು ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 13,000ಗಳ ಸ್ಟೈಫಂಡ್ ಇರುತ್ತದೆ. ಈ ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳಲು ವಯೋಮಿತಿ 18 ರಿಂದ 24 ವರ್ಷಗಳು. ಐಟಿಐನ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಟರ್ನರ್, ಡಿಸೆಲ್ ಮೆಕಾನಿಕ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಯಲ್ಲಿ ಉತ್ತೀರ್ಣರಾದ ಅಥವಾ ಅಂತಿಮ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಮೂಲ ದಾಖಲಾತಿ ಹಾಗೂ 1 ಸೆಟ್ ಅಂಕಪಟ್ಟಿ ಜೆರಾಕ್ಸ್ ಪ್ರತಿಗಳು ಹಾಗೂ ರೆಸ್ಯೂಮ್ನೊಂದಿಗೆ 2 ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಮತ್ತು ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9164198246, 8618952961, 9945789400 ಮತ್ತು 9964247098 ಸಂಪರ್ಕಿಸಬಹುದು.
ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ: ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2025ರ ಮೇ 2 ರಿಂದ 2026ರ ಫೆಬ್ರವರಿ 28ರವರೆಗೆ ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
ಈ ತರಬೇತಿಯನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಕೆ ಮಾಡಲು ಮಾರ್ಚ್ 31ರ ಸಂಜೆ 5.30 ಕೊನೆಯ ದಿನವಾಗಿದೆ.
ಅರ್ಜಿಯನ್ನು ತೋಟಗಾರಿಕಾ ಇಲಾಖೆ ಕಛೇರಿಯಿಂದ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಕಛೇರಿಗೆ ಬೆಳಗ್ಗೆ 10 ರಿಂದ ಸಂಜೆ 5.30ರೊಳಗೆ ಭೇಟಿ ನೀಡಿ ಪಡೆಯಬಹುದು ಅಥವ https://horticulturedir.karnataka.gov.in ವೆಬ್ಸೈಟ್ಗೆ ನೀಡಿ ನೀಡಬಹುದು.
ಮೂಲ ಅಗತ್ಯ ದಾಖಲಾತಿಗಳೊಡನೆ (ಎಸ್ಎಸ್ಎಲ್ಸಿ ಅಂಕಪಟ್ಟಿ, ಛಾಪಾ ಕಾಗದ, ತಂದೆ/ ತಾಯಿ/ ಪೋಷಕರ ಹೆಸರಿನಲ್ಲಿರುವ ಜಮೀನಿನ ಆರ್ಟಿಸಿ, ಜಾತಿ ಪ್ರಮಾಣ ಪತ್ರ, ಫೋಟೋ, ತಂದೆ/ ತಾಯಿಯವರ ಒಪ್ಪಿಗೆ ಪತ್ರ ಇತ್ಯಾದಿ) ಅರ್ಹ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮಾಡಲು ವಿಳಾಸ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ.












Click it and Unblock the Notifications