KSRTC: ಕೆಎಸ್ಆರ್ಟಿಸಿ ಅಪ್ರೆಂಟಿಸ್ ತರಬೇತಿ: ಶಿಷ್ಯ ವೇತನ, ಹುದ್ದೆಗಳ ವಿವರ
ಹಾಸನ, ಅಕ್ಟೋಬರ್ 10: ಹಾಸನದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿಯೊಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಪ್ರಾದೇಶಿಕ ಕಾರ್ಯಗಾರ ಹಾಸನ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 23 ರಂದು ಬೆಳಗ್ಗೆ ಅರ್ಜಿಗಳನ್ನು ಸಲ್ಲಿಕೆ ಮಾಡಿ, ಆಯ್ಕೆ ಸಮಿತಿ ಮುಂದೆ ಸಂದರ್ಶನಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಕೆಎಸ್ಆರ್ಟಿಸಿ ಎಸ್ಎಸ್ಎಲ್ಸಿ ಯೊಂದಿಗೆ ಐಟಿಐ ವಿಭಾಗದಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಸೀಟ್ ಮೆಟಲ್ ವರ್ಕ್ ಮತ್ತು ಪಾಸಾ ಟ್ರೇಡ್ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಕರೆದಿದೆ.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 40 ವರ್ಷಗಳು ಎಂದು ನಿಗದಿ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಸರ್ಕಾರಿ ನಿಯಮಾನುಸಾರ ಶಿಷ್ಯ ವೇತನವನ್ನು ನೀಡಲಾಗುತ್ತದೆ.
ತರಬೇತಿ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಕ.ರಾ.ರ.ಸಾ.ನಿ, ಪ್ರಾದೇಶಿಕ ಕಾರ್ಯಗಾರ ಹಾಸನ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 23ರಂದು ಬೆಳಗ್ಗೆ 11 ಗಂಟೆಗೆ ಕ.ರಾ.ರ.ಸಾ.ನಿ, ಪ್ರಾದೇಶಿಕ ಕಾರ್ಯಗಾರ ಹಾಸನ ಇಲ್ಲಿ ಆಯ್ಕೆ ಸಮಿತಿ ಮುಂದೆ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿ ನಮೂನೆಯೊಂದಿಗೆ ಎಸ್ಎಸ್ಎಲ್ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಪ.ಜಾತಿ/ ಪ.ಪಂಗಡ/ ಓ.ಬಿ.ಸಿ/ ಅಂಗವಿಕಲ ಸರ್ಟಿಫೀಕೆಟ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್ ಪೋರ್ಟ್ ಅಳತೆಯಭಾವಚಿತ್ರಗಳೊಂದಿಗೆ ಮೂಲ ದಾಖಲೆಗಳು ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ನಿಗದಿತ ದಿನಾಂಕದಂದು ಹಾಜರಾಗಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08172-296374.
ಖಾಸಗಿ ಕಂಪನಿಗಳ ನೇರ ಸಂದರ್ಶನ: ಹಾಸನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ನಿರುದ್ಯೋಗಿ ಯುವಕ/ ಯುವತಿಯರಿಗೆ ಅಕ್ಟೋಬರ್ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿವಿಧ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಿದೆ.
ಅಭ್ಯರ್ಥಿಗಳ ವಿದ್ಯಾರ್ಹತೆ ಎಸ್ಎಸ್ಎಲ್ಸಿ/ ಐಟಿಐ/ ಪಿಯುಸಿ/ ಡಿಪ್ಲೋಮಾ/ ಪದವಿ ತೇರ್ಗಡೆ ಹೊಂದಿದ ವಯೋಮಿತಿ 18-30 ವರ್ಷದೊಳಗಿನ ಆಸಕ್ತಿಯುಳ್ಳ ಪುರುಷ/ ಮಹಿಳಾ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08172-296374, 9449692691, 9743144950 ಹಾಗೂ 8722606874.
ಅಕ್ಟೋಬರ್ 20ರಂದು ಉದ್ಯೋಗ ಮೇಳ: ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಷನಲ್ ಕೆರಿಯರ್ ಸರ್ವಿಸ್, ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಕಾರದೊಂದಿಗೆ ಬೆಂಗಳೂರಿನ ರಾಜಾಜಿನಗರದಲ್ಲಿ ಅಕ್ಟೋಬರ್ 20ರಂದು ಉದ್ಯೋಗ ಮೇಳ ಆಯೋಜಿಸಿದೆ.
ಜಿಲ್ಲೆಯಲ್ಲಿನ ಎಲ್ಲಾ ವಿದ್ಯಾರ್ಹತೆಯ ಉದ್ಯೋಗಾಂಕ್ಷಿಗಳು ಹಾಗೂ ಖಾಸಗಿ ಕಂಪನಿ/ ಪ್ರತಿಷ್ಠಿತ ಬೃಹತ್, ಮಧ್ಯಮ, ಸಣ್ಣ ಉದ್ಯೋಗದಾತರು ಬೃಹತ್ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು https://jobfair.calicut.nielit.in/ ಗೆ ಭೇಟಿ ನೀಡಿ ತಮ್ಮ ಸ್ವ-ವಿವರವನ್ನು ನೋಂದಣಿ ಮಾಡುವ ಮೂಲಕ ಉದ್ಯೋಗ ಮೇಳಕ್ಕೆ ನೋಂದಾಯಿಸಿಕೊಳ್ಳಬೇಕು.












Click it and Unblock the Notifications