ಕೊಡಗು; ಆಶ್ರಮ ಶಾಲೆಗಳಲ್ಲಿ 11 ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ಮಡಿಕೇರಿ, ಡಿಸೆಂಬರ್ 03; ಕೊಡಗು ಜಿಲ್ಲೆಯಲ್ಲಿರುವ 11 ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಶ್ ಕಲಿಕೆಗಾಗಿ ಗೌರವಧನದ ಆಧಾರದ ಮೇಲೆ ಪ್ರತಿ ಶಾಲೆಗೆ ಒಬ್ಬರಂತೆ 11 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ.
ಈ ಹಿಂದೆ ಸಹ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ನಿಗದಿಪಡಿಸಿದ ಗುರಿಗೆ ಅರ್ಜಿ ಸ್ವೀಕೃತಗೊಂಡಿರುವುದಿಲ್ಲ. ಆದ್ದರಿಂದ ಅರ್ಜಿ ಸಲ್ಲಿಸಲು ಡಿಸೆಂಬರ್ 15ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವಂತೆ ಮಾಸಿಕ ಗೌರವಧನ 7,500 ರೂ. ನಿಗದಿಪಡಿಸಿದೆ. ಇಂಗ್ಲೀಶ್ ಬೋಧನಾ ಸಾಮರ್ಥ್ಯ ಹಾಗೂ ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಬೋಧನೆ ಮಾಡಿದ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇಂಗ್ಲೀಶ್ ಐಚ್ಛಿಕ ವಿಷಯದಲ್ಲಿ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಪಟ್ಟಿ ಮಂಡಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿರವರ ಕಚೇರಿ, ಜಿಲ್ಲಾ ಪಂಚಾಯತ್ ಕಟ್ಟಡ ಇಲ್ಲಿಗೆ ಸಲ್ಲಿಸುವುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-200500 ಮತ್ತು 9945986995 ಅನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ಸ್ವ ಉದ್ಯೋಕ್ಕೆ ಸಾಲ ಸೌಲಭ್ಯ; ಕರ್ನಾಟಕ ಉಪ್ಪಾರ ಅಭಿವೃಧ್ಧಿ ನಿಗಮದಿಂದ 2021-22 ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕೆ ನೇರಸಾಲ ಪಡೆಯಲು ಇಚ್ಚಿಸುವವರು ಅಗತ್ಯ ದಾಖಲೆಗಳೊಂದಿಗೆ ಆಯಾಯ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಜನವರಿ 10ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಹತೆಗಳು; ಉಪ್ಪಾರ ಸಮುದಾಯ ಪ್ರವರ್ಗ-1 ರ 53 (ಎ) ಯಿಂದ 53 (ವಿ)ವರೆಗಿನ ಉಪ್ಪಾರ, ಬೆಲ್ದರ್, ಚುನಾರ್, ಗಾವಡಿ, ಗೌಂದಿ, ಕಲ್ಲುಕುಟಿಗ ಉಪ್ಪಾರ, ಲೋನಾರಿ, ಮೇಲು ಸಕ್ಕರೆಯವರು, ಮೇಲು ಸಕ್ಕರೆ, ನಾಮದ ಉಪ್ಪಾರ, ಪಡಿತ್, ಪಡ್ತಿ, ಪಡಿತಿ, ಪಾಡಿ, ಸಗರ, ಸುಣ್ಣಗಾರ, ಸುಣ್ಣ ಉಪ್ಪಾರ, ಉಪ್ಪಳಿಗ, ಉಪ್ಪಾಳಿಗ ಶೆಟ್ಟಿ, ಉಪ್ಪಾಳಿಯನ್, ಉಪ್ಪೇರ, ಯಕಲಾರ, ಎಕ್ಕಲಿ ಜಾತಿಗೆ ಸೇರಿದವರಾಗಿರಬೇಕು.
ಅರ್ಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು), ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು, ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರಕ್ಕೆ ರೂ 98 ಸಾವಿರಗಳು ಮತ್ತು ನಗರ ಪ್ರದೇಶದವರಿಗೆ ರೂ.1,20.000ಗಳ ಮಿತಿ ಒಳಗಿರಬೇಕು.
ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು, ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ, ಈಗಾಗಲೇ ಬೇರೆ ಯಾವುದೇ ನಿಗಮಗಳ ಯೋಜನೆಗಳಲ್ಲಿ ಸಾಲ ಪಡೆದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರಿಗೆ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
ಅರಿವು ಶೈಕ್ಷಣಿಕ ಸಾಲ ಯೋಜನೆ; ಕಳೆದ ಸಾಲುಗಳಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆ ಪಡೆದ ಉಪ್ಪಾರ ಸಮುದಾಯದ ವಿದ್ಯಾರ್ಥಿಗಳು 2021 -22 ನೇ ಸಾಲಿನಲ್ಲಿ ನವೀಕರಣಕ್ಕಾಗಿ ಸುವಿಧ ತಂತ್ರಾಂಶದ ಮೂಲಕ suvidha.karnataka.gov.in ನಲ್ಲಿ ಜನವರಿ 10, 2022 ರ ಸಂಜೆ 5.30 ರೊಳಗೆ ಅರ್ಜಿ ಸಲ್ಲಿಸಬೇಕು.
ಕಡ್ಡಾಯವಾಗಿ ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿದಾರರು ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ಜಾತಿ ಆದಾಯ ಪ್ರಮಾಣ ಪತ್ರ ಹೊಂದಿರಬೇಕು ಆನ್ಲೈನ್ನಲ್ಲಿ ಕಳೆದ ಸಾಲಿನ ಅಂಕಪಟ್ಟಿ, ಪ್ರಸ್ತುತ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಸಾಲ ಮಂಜೂರಾತಿ ಆದೇಶ, ಹಣ ಸಂದಾಯ ರಶೀದಿ, ಪೋಷಕರ ಒಪ್ಪಿಗೆ ಪತ್ರ, ಜಾಮೀನುದಾರರ ಒಪ್ಪಿಗೆ ಪತ್ರಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ 7026288888 ಅನ್ನು ಸಂಪರ್ಕಿಸಬಹುದು. ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳು ಜಿಲ್ಲಾ ವ್ಯವಸ್ಥಾಪಕರ ಕಚೇರಿ ವಿಳಾಸಗಳನ್ನು ಹಾಗೂ ಎಲ್ಲಾ ವಿವರಗಳನ್ನು uppardevelopment.karnataka.gov.in ನಲ್ಲಿ ತಿಳಿಯಬಹುದಾಗಿದೆ ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.












Click it and Unblock the Notifications