ಓಮಿಕ್ರಾನ್: ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯದ್ದೇ ಚಿಂತೆ
ಬೆಂಗಳೂರು, ಡಿಸೆಂಬರ್ 08: ಓಮಿಕ್ರಾನ್ ಭಯ ಇದೀಗ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಪರೀಕ್ಷೆ ಬರೆಯಲು ತಮ್ಮ ಊರಿನಿಂದ ಬೇರೆ ಊರಿಗೆ ಪ್ರಯಾಣ ಮಾಡಬೇಕಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿದೆ. ಈ ಮಧ್ಯೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಸುಮಾರು 60 ಸಾವಿರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಡಿಸೆಂಬರ್ 13 ಮತ್ತು 14ರಂದು ಎರಡು ದಿನ ನಡೆಯುವ ಕೆಪಿಎಸ್ ಸಿ ಪರೀಕ್ಷೆ ಬರೆಯಲು ತಮ್ಮ ಊರಿಂದ 500-600 ಕಿಲೋ ಮೀಟರ್ ದೂರದ ಊರಿಗೆ ಹೋಗಿ ಪರೀಕ್ಷೆ ಬರೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬಹುತೇಕ ಅಭ್ಯರ್ಥಿಗಳಿಗೆ ಬೇರೆ ಊರುಗಳಲ್ಲಿ ಪರೀಕ್ಷಾ ಕೇಂದ್ರಗಳು ಸಿಕ್ಕಿವೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಈ ರೀತಿ ಮಾಡಲಾಗಿದೆ ಎಂದು ಕೆಪಿಎಸ್ಸಿ ಅಧಿಕಾರಿಗಳು ಹೇಳುತ್ತಾರೆ.

ಆದರೆ ಈ ಕೊರೊನಾ ಹೆಚ್ಚಾಗಿರುವ ಸಮಯದಲ್ಲಿ ಈ ರೀತಿ ದೀರ್ಘ ಪ್ರಯಾಣ ಮಾಡುವುದು ಕಷ್ಟವೆನ್ನುತ್ತಿದ್ದಾರೆ ಅಭ್ಯರ್ಥಿಗಳು. ಅಲ್ಲದೆ ಬಹಳ ಹೊತ್ತು ಪ್ರಯಾಣ ಮಾಡಿ ಬಂದು ಎರಡು ದಿನ ಉಳಿದುಕೊಂಡು ಪರೀಕ್ಷೆ ಬರೆಯಬೇಕು. ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಕಳೆದ ಸೋಮವಾರವಷ್ಟೆ.
ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 2019ರಲ್ಲಿ ಕೆಪಿಎಸ್ ಸಿ ಪರೀಕ್ಷೆ ನಡೆದಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ 870 ಎಂಜಿನಿಯರಿಂಗ್ ಹುದ್ದೆಗಳು, 570 ಸಹಾಯಕ ಎಂಜಿನಿಯರ್ ಮತ್ತು 300 ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಕರೆದು ಜೂನ್ 2019ರಲ್ಲಿ ಪರೀಕ್ಷೆ ನಡೆಸಲಾಯಿತು.ನಂತರ ಮರು ತಿಂಗಳು ಜುಲೈಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಗುತ್ತಿಗೆ ನೌಕರನಾಗಿ ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಸುಕೇಶ್ (ಹೆಸರು ಬದಲಿಸಲಾಗಿದೆ)ಗೆ ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಕೇಂದ್ರ ನೀಡಲಾಗಿದೆ. ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಬೇಕು, ಎರಡು ದಿನ ಹೋಗಿ, ಬರಲು ಮತ್ತು ಎರಡು ದಿನ ಪರೀಕ್ಷೆ ಬರೆಯಲು ಸಮಯ ಬೇಕು.
ಪರೀಕ್ಷೆ ಬರೆದು ಬಂದ ನಂತರ ಕೋವಿಡ್ ಟೆಸ್ಟ್ ರಿಪೋರ್ಟ್ ತರಬೇಕು ಎಂದು ನಮ್ಮ ಆಫೀಸ್ ನಲ್ಲಿ ಹೇಳುತ್ತಾರೆ ಎಂದು ತಮ್ಮ ಕಷ್ಟ ಹೇಳಿಕೊಂಡರು.
ಇದು ಕೆಪಿಎಸ್ ಸಿ ನಡೆಸುತ್ತಿರುವ ಪರೀಕ್ಷೆಯಾದ್ದರಿಂದ ಪರೀಕ್ಷಾ ಪ್ರಕ್ರಿಯೆ ತಮ್ಮ ಕೆಳಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಹೇಳುತ್ತಾರೆ. ಸ್ಥಳೀಯರು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಹಾಯ ಮಾಡುವುದರಿಂದ ನಾವು ಈ ಪರೀಕ್ಷಾ ಕೇಂದ್ರಗಳನ್ನು ಬದಲಿಸುವ ವಿಧಾನ ತಂದಿದ್ದೇವೆ ಎಂದು ಕೆಪಿಎಸ್ಸಿ ಅಧಿಕಾರಿಯೊಬ್ಬರು ಹೇಳುತ್ತಾರೆ.
ಹಿಂದಿನ ಮೈತ್ರಿ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಬಿಜೆಪಿ ಸರ್ಕಾರ ಹಿಂಪಡೆಯಿತು. ಅದರಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಗಳ ನೇಮಕಾತಿ ಕೂಡ ಒಂದು.
ಒಂದು ವರ್ಷ ಕಳೆದರೂ ಫಲಿತಾಂಶ ಪ್ರಕಟಿಸದಿದ್ದಾಗ ಕೆಲವು ಆಕಾಂಕ್ಷಿಗಳು ಕೋರ್ಟ್ ಮೊರೆ ಹೋದರು, ಆಗ ಸರ್ಕಾರ ಇಡೀ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸ ಅರ್ಜಿಯನ್ನು ಕರೆಯಿತು.
ಕಳೆದ ಆಗಸ್ಟ್ನಲ್ಲಿ ಆದೇಶದಲ್ಲಿ, ಸರ್ಕಾರ 660 ಸಹಾಯಕ ಎಂಜಿನಿಯರ್ ಮತ್ತು 330 ಜ್ಯೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದ್ದು 58 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications