ಎಲವೋ ಕಳ್ಳ, ಕದಿಯುವ ಮುನ್ನ ಆಧಾರ್ ತೋರ್ಸಯ್ಯ!
ಮಗು ಹುಟ್ಟಿ ಇನ್ನೂ ಅಮ್ಮನ ಎದೆಹಾಲು ಕೂಡ ಕುಡಿದಿರುವುದಿಲ್ಲ ಅಷ್ಟರಲ್ಲಾಗಲೇ ಮಗುವಿನ ಆಧಾರ್ ಕಾರ್ಡಿಗೆ ಅಪ್ಪ ಅರ್ಜಿ ಹಾಕಿರುತ್ತಾನೆ. ಇದು ಉತ್ಪ್ರೇಕ್ಷೆ ಅಲ್ಲ. ಮಹಾರಾಷ್ಟ್ರದ ಓಸ್ಮಾನಾಬಾದ್ ಜಿಲ್ಲೆಯಲ್ಲಿ ಅಪ್ಪನೊಬ್ಬ ಮಗಳು ಹುಟ್ಟಿ 6 ನಿಮಿಷದಲ್ಲಿ ಮಗುವಿಗೆ ಆಧಾರ್ ಪಡೆದಿದ್ದ.
ಇದು ಆಧಾರ್ ಮಹತ್ವವನ್ನು ಸಾರುತ್ತದೆ. ಬ್ಯಾಂಕ್ ಖಾತೆ ತೆರೆಯಲಾಗಲಿ, ಬ್ಯಾಂಕ್ ಜೊತೆ ಎಲ್ಪಿಜಿ ಲಿಂಕ್ ಮಾಡಲಾಗಲಿ, ಏರ್ಪೋರ್ಟಲ್ಲಿ ಪ್ರವೇಶ ಪಡೆಯಲಿಕ್ಕಾಗಲಿ, ಪ್ಯಾನ್ ಕಾರ್ಡ್ ಪಡೆಯಲು, ವಿಮೆ ಪಾಲಿಸಿ ಹೊಂದಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಲು, ಮೊಬೈಲ್ ಕೊಳ್ಳಲು... ಹೀಗೆ ಪ್ರತಿಯೊಂದಕ್ಕೂ ಆಧಾರ್ ಬೇಕೇಬೇಕು.
ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಮನಸೆಳೆವ ಕಾರ್ಟೂನ್
ಆಧಾರ್ ಕಾರ್ಡ್ ಇರುವುದೇ ಜನರ ಅನುಕೂಲಕ್ಕಾಗಿ. ಇದರಿಂದ ಹಲವಾರು ವಂಚನೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಆಧಾರ್ ಇಂದು ದೇಶದ ಪ್ರತಿಯೊಬ್ಬರ ಐಡೆಂಟಿಟಿಯಾಗಿದೆ. ದುರಾದೃಷ್ಟವೆಂದರೆ, ಹಲವಾರು ಜನರು ಆಧಾರ್ ಕಾರ್ಡ್ ಇಲ್ಲದ್ದರಿಂದ ಹಲವಾರು ಯೋಜನೆಗಳಿಂದಲೂ ವಂಚಿತರಾಗಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಅಸುನೀಗಿದ್ದ ಧೀರ ಯೋಧರೊಬ್ಬರ ಪತ್ನಿಯೊಬ್ಬರು ಆಧಾರ್ ಕಾರ್ಡ್ ಇಲ್ಲದ್ದರಿಂದ ಆಸ್ಪತ್ರೆಗೆ ಸಕಾಲದಲ್ಲಿ ದಾಖಲಾಗದೆ ಕೆಲ ದಿನಗಳ ಹಿಂದೆ ಅಸುನೀಗಿದ್ದರು. ಒಂದು ರೀತಿ ಆಧಾರ್ ಉಪಯೋಗಿಯಾಗಿದ್ದರೆ, ಮತ್ತೊಂದು ರೀತಿಯಲ್ಲಿ ಶ್ರೀಸಾಮಾನ್ಯನಿಗೆ ತೊಂದರೆಯೂ ಆಗುತ್ತಿದೆ.
ಇವೆಲ್ಲ ಗಂಭೀರ ಸಂಗತಿಗಳಾದರೆ, ಸೋಷಿಯಲ್ ಮೀಡಿಯಾದಲ್ಲಿ ಆಧಾರ್ ಹಾಸ್ಯದ ವಸ್ತುವಾಗಿದೆ. ಆಧಾರ್ ಕುರಿತಂತೆ ಹಲವಾರು ಮೀಮ್ಸ್ ಗಳು, ವ್ಯಂಗ್ಯಚಿತ್ರಗಳು, ಟ್ರೋಲ್ ಗಳು, ಜೋಕುಗಳು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಸಖತ್ ಮಜಾ ಕೊಡುತ್ತಿದೆ. ಇಲ್ಲಿ ಎಮ್ಮೆಗೂ ಆಧಾರ್ ನೀಡಲಾಗುತ್ತದೆ, ಕತ್ತೆಗೂ ಆಧಾರ್ ಸಿಗುತ್ತದೆ.
ಇನ್ನು ವ್ಯಂಗ್ಯ ಚಿತ್ರಕಾರು ಕೇಳಬೇಕೆ? ಖ್ಯಾತ ವ್ಯಂಗ್ಯ ಚಿತ್ರಕಾರರಾದ ಸತೀಶ್ ಆಚಾರ್ಯ ಅವರು ಆಧಾರ್ ಮೇಲೆ ವ್ಯಂಗ್ಯಚಿತ್ರ ಬಿಡಿಸಿದ್ದು, ಇದರಲ್ಲಿ ವಿಡಂಬನೆ ಹಾಸುಕೊಕ್ಕಾಗಿರುವುದು ಮಾತ್ರವಲ್ಲ, ಆಧಾರ್ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ. ಇದಕ್ಕೆ ಹೆಚ್ಚಿನ ವಿವರಣೆಯೇ ಬೇಕಾಗಿಲ್ಲ, ವ್ಯಂಗ್ಯ ಚಿತ್ರವೇ ಎಲ್ಲವನ್ನೂ ಹೇಳಿಬಿಡುತ್ತದೆ.
ನಿಮಗೆ ಗೊತ್ತಿರಲಿಕ್ಕಿಲ್ಲ. ಇತ್ತೀಚೆಗೆ ಇವಾಂಕಾ ಟ್ರಂಪ್ ಭಾರತಕ್ಕೆ ಏಕೆ ಬಂದಿದ್ದು ಗೊತ್ತಾ? ಆಧಾರ್ ಕಾರ್ಡ್ ಮಾಡಿಸಲು!