Get Updates
Get notified of breaking news, exclusive insights, and must-see stories!

ಸಿಧು ಪಂಜಾಬ್‌ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು 5 ಕಾರಣವೇನು?

ಚಂಡೀಗಢ, ಸೆಪ್ಟೆಂಬರ್‌, 28: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ಸಲ್ಲಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯು ಪಂಜಾಬ್‌ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ನವಜೋತ್ ಸಿಂಗ್ ಸಿಧು ಈ ರೀತಿ ದಿಢೀರ್‌ ಆಗಿ ರಾಜೀನಾಮೆ ನೀಡಿರುವುದಕ್ಕೆ ಹಲವಾರು ನಾಯಕರು ಟೀಕೆ ಕೂಡಾ ಮಾಡಿದ್ದಾರೆ.

"ನವಜೋತ್ ಸಿಂಗ್ ಸಿಧು ದಲಿತ ವಿರೋಧಿ ಎಂದು ಈ ಮೂಲಕ ತಿಳಿದು ಬಂದಿದೆ. ಪಂಜಾಬ್‌ ಮುಖ್ಯಮಂತ್ರಿಯಾಗಿ ಬಡ ದಲಿತ ನಾಯಕರನ್ನು ಮಾಡಲಾಗಿದೆ. ಇದು ನವಜ್ಯೋತ್ ಸಿಂಗ್ ಸಿಧುಗೆ ಸಹಿಸಲು ಸಾಧ್ಯವಾಗಲಿಲ್ಲ. ಇದು ಅತ್ಯಂತ ದುಖಃದ ವಿಚಾರ," ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಸೌಹಬ್‌ ಭಾರಧ್ವಾಜ್‌ ಹೇಳಿದ್ದಾರೆ. ಈ ನಡುವೆ ಈ ಹಿಂದೆಯಿಂದಲ್ಲೇ ನವಜೋತ್ ಸಿಂಗ್ ಸಿಧು ವಿರುದ್ದ ವೈಮನಸ್ಸು ಹೊಂದಿರುವ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, "ನಾನು ನಿಮಗೆ ಹೇಳಿದ್ದೆ. ಪಂಬಾಜ್‌ನಂತಹ ಗಡಿ ರಾಜ್ಯಕ್ಕೆ ಅವರು ತಕ್ಕ ವ್ಯಕ್ತಿಯಲ್ಲ," ಎಂದು ಹೇಳುವ ಮೂಲಕ ನವಜೋತ್ ಸಿಂಗ್ ಸಿಧುಗೆ ತಿರುಗೇಟು ನೀಡಿದ್ದಾರೆ.

ನವಜೋತ್ ಸಿಂಗ್ ಸಿಧು ತಾನು ಏಕಾಏಕಿ ರಾಜೀನಾಮೆ ನೀಡಿದ್ದಾರೆ. ಇದು ಪಂಜಾಬ್‌ ಸರ್ಕಾರಕ್ಕೂ ಪರಿಣಾಮ ಬೀರಿದೆ. ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡಿರುವ ಮೂವರು ಕಾಂಗ್ರೆಸ್‌ ನಾಯಕರು ಹಾಗೂ ಪಂಜಾಬ್‌ ಸಚಿವೆಯೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ನ ಸಚಿವ ಸಂಪುಟ ಸ್ಥಾನಕ್ಕೆ ರಝೀಯಾ ಸುಲ್ತಾನ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರದಲ್ಲಿ "ನವಜೋತ್ ಸಿಂಗ್ ಸಿಧು ಜೊತೆ ಒಗ್ಗಟ್ಟಿನಲ್ಲಿ ಈ ರಾಜೀನಾಮೆ ನೀಡುತ್ತಿದ್ದೇನೆ," ಎಂದು ತಿಳಿಸಿದ್ದಾರೆ. ಇನ್ನು ಪಂಜಾಬ್‌ ಕಾಂಗ್ರೆಸ್‌ ಕೋಶಾಧಿಕಾರಿ ಗುಲ್ಜಾರ್‌ ಇಂದರ್‌ ಚಹಾಲ್‌ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ಯೋಗಿಂದರ್‌ ಡಿಂಗ್ರಾ ಹಾಗೂ ಗೌತಮ್‌ ಸೇಟ್‌ ಕೂಡಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮುಖ್ಯವಾಗಿ ಐದು ಕಾರಣಗಳು ಇದೆ ಎಂದು ಹೇಳಲಾಗಿದೆ. ಅವು ಯಾವುದು ಎಂದು ತಿಳಿಯಲು ಮುಂದೆ ಓದಿ.

 ವಿವಾದಿತ ಶಾಸಕ ಗುರ್ಜಿತ್ ಸಿಂಗ್ ರಾಣಾಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ವಿರೋಧ

ವಿವಾದಿತ ಶಾಸಕ ಗುರ್ಜಿತ್ ಸಿಂಗ್ ರಾಣಾಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ವಿರೋಧ

ವಿವಾದಿತ ಶಾಸಕ ಗುರ್ಜಿತ್ ಸಿಂಗ್ ರಾಣಾ ಕೂಡ ಪಂಜಾಬ್ ಕ್ಯಾಬಿನೆಟ್ ಮಂತ್ರಿಯಾಗಿ ಇತ್ತೀಚೆಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕಪುರ್ತಲಾ ಪ್ರತಿನಿಧಿಸುವ ಶಾಸಕ ಗುರ್ಜಿತ್ ಸಿಂಗ್, ಪಂಜಾಬ್‌ ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೆ ಹಲವಾರು ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕ ಗುರ್ಜಿತ್ ಸಿಂಗ್ ಈ ಹಿಂದಿನ ಅಮರೀಂದರ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ 2018 ರಲ್ಲಿ ಅವರ ವಿರುದ್ದ ಮರಳು ಗಣಿಗಾರಿಕೆಯ ಹರಾಜಿನಲ್ಲಿ ಹಗರಣದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಈಗ ಮತ್ತೆ ಹಗರಣದ ಆರೋಪವಿರು ಗುರ್ಜಿತ್ ಸಿಂಗ್‌ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವ ವಿವಾದಕ್ಕೆ ಕಾರಣವಾಗಿದೆ. ಗುರ್ಜಿತ್ ಸಿಂಗ್‌ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ಆರು ಪಂಜಾಬ್‌ ಶಾಸಕರು ತೀವ್ರವಾಗಿ ವಿರೋಧಿಸಿದ್ದಾರೆ. ಆರು ಶಾಸಕರು ಹಾಗೂ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಹೀಂದರ್‌ ಸಿಂಗ್‌ ಭಾನುವಾರ ಗುರ್ಜಿತ್ ಸಿಂಗ್‌ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧ ಮಾಡಿ ಕಾಂಗ್ರೆಸ್‌ ಪಂಜಾಬ್‌ ರಾಜ್ಯ ಮುಖ್ಯಸ್ಥ ನವ್‌ಜೋತ್‌ ಸಿಂಗ್‌ ಸಿಧು ಹಾಗೂ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿಗೆ ಪತ್ರ ಬರೆದಿದ್ದಾರೆ. ಇನ್ನು ಈ ನಡುವೆ ನವಜೋತ್ ಸಿಂಗ್ ಸಿಧು ಕೂಡಾ ಈ ಗುರ್ಜಿತ್ ಸಿಂಗ್ ರಾಣಾರನ್ನು ಸಚಿವ ಸಂಪುಟಕ್ಕೆ ಸೇರುಸುವುದಕ್ಕೆ ವಿರೋಧವಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆ ಅಸಮಾಧಾನದಿಂದ ತನ್ನ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ.

 ನೂತನ ಸಂಪುಟ ರಚನೆ ವಿಚಾರದಲ್ಲಿ ಅಸಮಾಧಾನ?

ನೂತನ ಸಂಪುಟ ರಚನೆ ವಿಚಾರದಲ್ಲಿ ಅಸಮಾಧಾನ?

ಅತೀ ಮುಖ್ಯವಾದ ಗೃಹ ಖಾತೆಯನ್ನು ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಗೆ ನೀಡಿರುವ ವಿಚಾರದಲ್ಲಿ ನವಜೋತ್ ಸಿಂಗ್ ಸಿಧುಗೆ ಅಸಮಾಧಾನವಿದೆ ಎಂದು ಹೇಳಲಾಗಿದೆ. ಗೃಹ ಖಾತೆಯನ್ನು ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ನೀಡುವುದಕ್ಕೆ ನವಜೋತ್ ಸಿಂಗ್ ಸಿಧು ಒಪ್ಪಿಗೆ ಇರಲಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿಯೇ ಈ ಖಾತೆಯನ್ನು ನೋಡಿಕೊಳ್ಳಬೇಕು ಎಂಬುವುದು ನವಜೋತ್ ಸಿಂಗ್ ಸಿಧು ಅಭಿಪ್ರಾಯವಾಗಿತ್ತು, ಆದರೆ ಸುಖಜಿಂದರ್ ಸಿಂಗ್ ರಾಂಧವಗೆ ಖಾತೆಯನ್ನು ನೀಡಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ. ಈ ಹಿಂದೆ ನವಜೋತ್ ಸಿಂಗ್ ಸಿಧು, ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ಸುಖಜಿಂದರ್ ಸಿಂಗ್ ರಾಂಧವರ ಹೆಸರು ಕೇಳಿ ಬಂದಾಗ ಅದನ್ನು ತಿರಸ್ಕರಿಸಿದ್ದರು.

 ನೂತನ ಅಡ್ವೋಕೇಟ್ ಜನರಲ್ ಕೂಡಾ ಕಾರಣವಾಗ್ತಾರ?

ನೂತನ ಅಡ್ವೋಕೇಟ್ ಜನರಲ್ ಕೂಡಾ ಕಾರಣವಾಗ್ತಾರ?

ಸೋಮವಾರ ಸಂಜೆ ಕಾಂಗ್ರೆಸ್‌ ಪಂಜಾಬ್ ಸರ್ಕಾರವು ನೂತನ ಅಡ್ವೋಕೇಟ್ ಜನರಲ್ ನೇಮಕ ಮಾಡಿದೆ. ಎಪಿಎಸ್‌ ಡಿಯೋಲ್‌ರನ್ನು ಪಂಜಾಬ್‌ ನೂತನ ಸರ್ಕಾರವು, ತನ್ನ ನೂತನ ಅಡ್ವೋಕೇಟ್ ಜನರಲ್ ಆಗಿ ನೇಮಿಸಿದೆ. ಇದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಲು ಕಾರಣವಾಗಿತ್ತು. ಡಿಯೋಲ್ ಇತ್ತೀಚಿನವರೆಗೂ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮತ್ತು ಪೊಲೀಸ್ ಗುಂಡಿನ ದಾಳಿಯ ಸಂದರ್ಭದಲ್ಲಿ ಪೊಲೀಸ್ ಮುಖ್ಯಸ್ಥರಾಗಿದ್ದ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಅವರ ಸಲಹೆಗಾರರಾಗಿದ್ದರು. ಈ ಹಿನ್ನೆಲೆಯಿಂದಾಗಿ ವಿರೋಧ ಪಕ್ಷಗಳು ಸರ್ಕಾರದ ಅಡ್ವೋಕೇಟ್ ಜನರಲ್ ಆಗಿ ಎಪಿಎಸ್‌ ಡಿಯೋಲ್‌ರನ್ನು ಆಯ್ಕೆ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪಂಜಾಬ್‌ ಪೊಲೀಸರು ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಮೇಲೆ ಹಾಕಿದ್ದ ನಾಲ್ಕು ಕೇಸ್‌ಗಳಲ್ಲಿ ಡಿಯೋಲ್‌ ಜಾಮೀನು ಸಿಕ್ಕುವಂತೆ ಮಾಡಿದ್ದರು. ಈ ಮೂಲಕ ಬೆಹಬಲ್ ಕಲಾನ್ ನಲ್ಲಿ ಪ್ರತಿಭಟನಾಕಾರರ ಮೇಲೆ ಪೋಲೀಸರು ಗುಂಡು ಹಾರಿಸಿ, ಇಬ್ಬರ ಸಾವಿಗೆ ಕಾರಣರಾದ ಜನರಿಗೆ ಬೆಂಬಲ ಮಾಡಿದವರಿಗೆ ಈಗ ಸರ್ಕಾರ ಸ್ಥಾನ ನೀಡುವುದು ಸರಿಯಲ್ಲ ಎಂಬುವುದು ನವಜೋತ್ ಸಿಂಗ್ ಸಿಧು ವಾದವಾಗಿದೆ. ಇದು ಕೂಡಾ ನವಜೋತ್ ಸಿಂಗ್ ಸಿಧು ಕಾಂಗ್ರೆಸ್‌ ಮುಖಂಡತ್ವಕ್ಕೆ ರಾಜೀನಾಮೆ ನೀಡಲು ಕಾರಣ ಎಂದು ಹೇಳಲಾಗಿದೆ.

 ತನ್ನ ನಿರ್ಧಾರಕ್ಕೆ ಅಸ್ತು ದೊರೆಯದ ಕಾರಣ ಅಸಮಾಧಾನ

ತನ್ನ ನಿರ್ಧಾರಕ್ಕೆ ಅಸ್ತು ದೊರೆಯದ ಕಾರಣ ಅಸಮಾಧಾನ

ಜುಲೈ 19 ರಂದು ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರೂ ಕೂಡಾ ಪಂಜಾಬ್ ಪೊಲೀಸ್ ಮುಖ್ಯಸ್ಥರು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ತಮ್ಮ ಆಯ್ಕೆಯ ಯಾವುದೇ ಅಧಿಕಾರಿಯನ್ನು ನೇಮಕ ಮಾಡಿಸಿಕೊಳ್ಳಲು ನವಜೋತ್ ಸಿಂಗ್ ಸಿಧುಗೆ ಸಾಧ್ಯವಾಗಿಲ್ಲ. ತನ್ನ ನಿರ್ಧಾರಕ್ಕೆ ಯಾವುದೇ ಬೆಂಬಲ ದೊರೆತಿಲ್ಲ. ಈ ನಡುವೆ ನವಜೋತ್ ಸಿಂಗ್ ಸಿಧು ಸಲಹೆಗಾರ, ಮಾಜಿ ಐಪಿಎಸ್ ಅಧಿಕಾರಿ ಮೊಹಮ್ಮದ್ ಮುಸ್ತಫಾರ ಪತ್ನಿ ರಾಝೀಯಾ ಸುಲ್ತಾನಾ, ಸಿಧು ರಾಜೀನಾಮೆ ನೀಡಿದ ಕೆಲವು ಗಂಟೆಗಳ ನಂತರ ಚನ್ನಿ ಸಚಿವಾಲಯವನ್ನು ತೊರೆದಿದ್ದಾರೆ. ಆದರೆ ಪಂಜಾಬ್‌ ಕಾಂಗ್ರೆಸ್‌ ಸರ್ಕಾರ ಕೂಡಲೇ ಆ ಸ್ಥಾನಕ್ಕೆ ಎಸ್ ಚಟ್ಟೋಪಾಧ್ಯಾಯರನ್ನು ನೇಮಕ ಮಾಡಲು ಮುಂದಾಗಿದೆ.

 ಚನ್ನಿ ಎದುರು ತಾನು ದುರ್ಬಲ ಅನಿಸಿತೆ ಸಿಧುಗೆ

ಚನ್ನಿ ಎದುರು ತಾನು ದುರ್ಬಲ ಅನಿಸಿತೆ ಸಿಧುಗೆ

ಚರಣ್‌ಜೀತ್‌ ಸಿಂಗ್‌ ಚನ್ನಿ ಎದುರು ತಾನು ದುರ್ಬಲ ಎಂದು ನವಜೋತ್ ಸಿಂಗ್ ಸಿಧುಗೆ ಎನಿಸಿದೆ ಎಂದು ಕೂಡಾ ಹೇಳಲಾಗುತ್ತಿದೆ. ನವಜೋತ್ ಸಿಂಗ್ ಸಿಧು ಕಾಂಗ್ರೆಸ್‌ನ ಉನ್ನತ ಹುದ್ದೆಯನ್ನು ಪಡೆದಿದ್ದಾರೆ. ಆದರೆ ಪಕ್ಷವು 2022 ರ ಚುನಾವಣೆಯಲ್ಲಿ ಸಿಧು ನೇತೃತ್ವದಲ್ಲಿ ಹೋರಾಡುತ್ತದೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರ ಹೇಳಿಕೆಗೆ ಪಂಜಾಬ್ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಸಿಧು ಪರವಾದ ಮಾತನ್ನು ಹತೋಟಿ ಮಾಡಬೇಕಾಯಿತು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನವಜೋತ್ ಸಿಂಗ್ ಸಿಧುಗೆ ಸ್ಥಾನವನ್ನು ನೀಡಬೇಕು ಎಂಬ ಕಾರಣಕ್ಕೆ ಸಿಎಂ ಕುರ್ಚಿಯನ್ನು ಕಾದು ಕೂರುವ ಕಾವಾಲುಗಾರ ಪ್ರಸ್ತುತ ಸಿಎಂ ಅಲ್ಲ ಎಂದು ಕೂಡಾ ಕೆಲವ ತಜ್ಞರು ಹೇಳಲು ಆರಂಭ ಮಾಡಿದರು. ಇವೆಲ್ಲವೂ ಚನ್ನಿ ಎದುರು ತಾನು ದುರ್ಬಲ ಎಂದು ಸಿಧುಗೆ ಅನಿಸಲು ಆರಂಭ ಮಾಡಿತು ಎಂದು ಹೇಳಲಾಗಿದೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+