ದೇಶದೆಲ್ಲೆಡೆ ಸಂಭ್ರಮ, ಸಡಗರದಿಂದ ವರಮಹಾಲಕ್ಷ್ಮೀ ಹಬ್ಬ ಆಚರಣೆ
ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದಿಂದಲೇ ಹಬ್ಬಗಳ ಸೀಸನ್ ಶುರು. ರಕ್ಷಾಬಂಧನ, ಗಣೇಶ ಚತುರ್ಥಿ, ದೀಪಾವಳಿ ಎಲ್ಲವೂ ಇದಾದ ಮೇಲೆಯೇ ಬರಲಿದೆ.
ಶ್ರಾವಣಮಾಸವೆಂದರೆ ಹೆಣ್ಣುಮಕ್ಕಳಿಗೆ ಪ್ರೀತಿ, ಅಲಂಕಾರ ಮಾಡಿಕೊಂಡು ಖುಷಿ ಪಡಲು ಒಂದು ಸುಸಂದರ್ಭ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬವೆಂದರೆ ಎಲ್ಲಾ ಹೆಣ್ಣುಮಕ್ಕಳಿಗೂ ಅಚ್ಚುಮೆಚ್ಚು.
ವಿವಾಹಿತ ಮುತ್ತೈದೆಯರು ವರ ಮಹಾಲಕ್ಷ್ಮಿ ಪೂಜೆ ಮಾಡುತ್ತಾರೆ. ಇನ್ನು ವರ ಎಂದರೆ ದೇವರ ಆಶೀರ್ವಾದ ಎಂದರ್ಥ. ಹೀಗೆ ವರವನ್ನು ನೀಡುವ ದೇವತೆಯ ಹಬ್ಬವನ್ನು ವರಮಹಾಲಕ್ಷ್ಮಿ ಹಬ್ಬ ಎಂದು ಆಚರಿಸಲಾಗುತ್ತದೆ.ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಹಾಗೂ ಶಕ್ತಿ ನೀಡುವ ದೇವತೆಗಳನ್ನು ಪೂಜಿಸುವುದರಿಂದ ಸಿಗುವ ಅನುಗ್ರಹ, ವರಮಹಾಲಕ್ಷ್ಮಿ ದೇವತೆಯನ್ನು ಪೂಜಿಸುವುದರಿಂದ ಸಿಗುತ್ತದೆ ಎನ್ನಲಾಗುತ್ತದೆ.

ಪೂಜೆಯ ವಿಧಾನ ಹೇಗೆ?:ಒಂದು ಶುದ್ಧವಾದ ಸ್ಥಳದಲ್ಲಿ ಮಂಟಪವನ್ನು ಕಟ್ಟಿ ಅದರ ನಡುವೆ 5 ಬಣ್ಣಗಳಳಿಂದ ಕೂಡಿದ ಎಂಟು ದಳದ ಪದ್ಮವನ್ನು ಬರೆದು ಕಲಶವನ್ನು ಶುದ್ಧಗೊಳಿಸಬೇಕು. ಕಲಶದೊಳಗೆ ನೀರನ್ನು ತುಂಬಿಸಿ, ಅದರೊಳಗೆ ಒಂದು ನಾಣ್ಯ ಹಾಗೂ ಪಂಚಾಮೃತ ಹಾಕಿ ಹೂವುಗಳಿಂದ ಅಲಂಕರಿಸಬೇಕು.
12 ಎಳೆಗಳ ಅರಶಿನ ದಾಳ, 12 ಎಳೆಗಳ ಗೆಜ್ಜೆವಸ್ತ್ರ ಮತ್ತು ವಿವಿಧ ಹೂವು, ಪತ್ರೆ ಹಾಗೂ ಅಕ್ಷತೆಗಳಿಂದ ಲಕ್ಷಮಿಯನ್ನು ಪೂಜಿಸಬೇಕು. ಅಂಗಪೂಜೆ, ಗ್ರಂಥಿ ಪೂಜೆ ಕುಸುಮ ಪೂಜೆ, ಪತ್ರ ಪೂಜೆ, ಅಷ್ಟೋತ್ತರ ಶತನಾಮ ಪೂಜೆ ಹಾಗೂ ಪಂಚಾಮೃತಾಭಿಚಷೇಕ ಮಾಡುವುದರಿಂದ ಲಕ್ಷ್ಮೀ ಸಂತುಷ್ಳಾಗಿ ಬೇಡಿದ ವರ ನೀಡುತ್ತಾಳೆ.
ಈ ಹಬ್ಬದಂದು ದೇವಿಗೆ ಗೋಧಿ ಹಿಟ್ಟಿನ ಹೂರಣದ ಹೋಳಿಗೆ ಸಮರ್ಪಿಸಲಾಗುತ್ತದೆ. ಅಡುಗೆಯಲ್ಲಿ ಗೋಧಿ ಪಾಯಸ, ಕೋಸಂಬರಿ, ಚಿತ್ರಾನ್ನ, ಮೊಸರನ್ನ, ಮಜ್ಜಿಗೆಹುಳಿ ಹಾಗೂ ತುಪ್ಪದಿಂದ ಮಾಡಿದ ಭಕ್ಷ್ಯಗಳನ್ನು ನೈವೇದ್ಯ ಮಾಡಬೇಕು. ಅಲ್ಲದೇ ಏಳು ಮಂದಿಗೆ 12 ಭಕ್ಷ್ಯಗಳನ್ನು ದಕ್ಷಿಣೆ- ತಾಂಬೂಲಗಳೊಡನೆ ಬಾಗಿನವಾಗಿ ನೀಡಿ ಅವರ ಆಶೀರ್ವಾದ ಪಡೆಯಬೇಕು.
ವಿವಾಹಿತ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತವನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ.
ಕುಟುಂಬ ಶಾಂತಿ ಸಮಾಧಾನ, ಏಳಿಗೆಗೆ ಮತ್ತು ಯೋಗ ಕ್ಷೇಮಕ್ಕೆ ಈ ವ್ರತವನ್ನು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ ತಿಂಗಳಿನ ಯಾವುದಾದರೊಂದು ಶುಕ್ರವಾರ ಬರುತ್ತದೆ ಮತ್ತು ಪೂಜೆಯ ತಯಾರಿ ಹಿಂದಿನ ದಿನ ಅಂದರೆ ಗುರುವಾರವೇ ಆರಂಭಿಸುತ್ತಾರೆ.
ದೇವಸ್ಥಾನಗಳಲ್ಲಿ ಭಕ್ತರಿಲ್ಲ: ಕೊರೊನಾ ಬರುವುದಕ್ಕೂ ಮುನ್ನ ಹಬ್ಬ ಎಂದರೆ ದೇವಸ್ಥಾನದ ಹೊರಗೆ ದೊಡ್ಡ ಭಕ್ತರ ಸಾಲು ಇರುತ್ತಿತ್ತು. ಆದರೆ, ಕೊರೊನಾ ಬಂದ ಮೇಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಈ ಬಿಸಿ ವರಮಹಾಲಕ್ಷ್ಮಿ ಹಬ್ಬಕ್ಕೂ ತಟ್ಟಿದೆ.
ಬೆಂಗಳೂರಿನ ಬನಶಂಕರಿ ದೇವಸ್ಥಾನ ಸಂಪೂರ್ಣ ಖಾಲಿ ಖಾಲಿ ಕಾಣುತ್ತಿದೆ. ದೇವಸ್ಥಾನ ಸದಾ ಭಕ್ತಾಧಿಗಳಿಂದ ಕೂಡಿರುತ್ತಿತ್ತು. ಕೊರೊನಾ ಭಯದ ಹಿನ್ನಲೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಬೆರಳೆಣಿಕೆಯಷ್ಟು ಭಕ್ತಾಧಿಗಳಿಂದ ಮಾತ್ರ ದೇವರ ದರ್ಶನ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮಾಸ್ಕ್ ಧರಿಸಿದರೆ ಮಾತ್ರ ದೇವಾಲಯದ ಒಳಗಡೆ ತೆರಳಲು ಅವಕಾಶ ನೀಡಲಾಗುತ್ತಿದೆ.












Click it and Unblock the Notifications