ಹೊಡೆದಾಡುವರ ಮಧ್ಯೆ ಮುದ್ದಾಡುವ ಪ್ರೇಮಿ

* ಪ್ರಶಾಂತ್ ಬೀಚಿ, ತಾನ್ಜಾನಿಯ
ಹರಿಯುವ ನೀರಿಗೆ ಬಂಡೆಯ ಜಾತಿ ಗೊತ್ತಿಲ್ಲ, ತೇಲುತ್ತಿರುವ ಹೂವಿಗೆ ನೀರಿನ ದಾರಿ ತಿಳಿದಿಲ್ಲ, ಮಕರಂದ ಹೀರುವ ಜೇನಿಗೆ ಹೂವಿನ ಹುಟ್ಟು ಗೊತ್ತಿಲ್ಲ, ಮರದ ಕೊಂಬೆಗೆ ಗೂಡು ಕಟ್ಟುತ್ತಿರುವ ಜೇನಿನ ವಂಶ ತಿಳಿದಿಲ್ಲ, ಗೂಡು ಕಟ್ಟುವ ಹಕ್ಕಿಗೆ ಮರದ ಜಾತಿ ತಿಳಿದಿಲ್ಲ, ಗುರಿ ಇಡುವ ಶಿಕಾರಿಗೆ ಹಕ್ಕಿಯ ತಂದೆ-ತಾಯಿ ಗೊತ್ತಿಲ್ಲ. ಹಾಗೆ ಪ್ರೀತಿಸುವ ಹುಡುಗಿಗೆ ಶಿಕಾರಿಯ ಪರಿಚಯವೆ ಇಲ್ಲ. ಹೀಗೆ ಅನೇಕ ವಿಷಯಗಳಲ್ಲಿ ಒಂದಾಗುವ ಬಹಳಷ್ಟು ಜೀವಿಗಳಿಗೆ ಜಾತಿ, ಪಂಗಡ, ವಂಶ, ಪರಂಪರೆ ಮತ್ತಿನ್ಯಾವುದೇ ವಿಷಯದ ಅರಿವೆ ಇರುವುದಿಲ್ಲ. ಅಂತಹ ಜಾಗದಲ್ಲಿ ಕಾಣುವುದು ಪ್ರೀತಿ, ಪ್ರೇಮ ಮಾತ್ರ. ಶಿಕಾರಿಗೂ ಹಕ್ಕಿಯ (ಮಾಂಸದ) ಮೇಲಿನ ಪ್ರೀತಿಯೆ ಅದನ್ನು ಕೊಲ್ಲುವಂತೆ ಮಾಡುವುದು, ಆದರೆ ಅದನ್ನು ಕೊಲ್ಲುವುದಕ್ಕೆ ಮುಂಚೆ ಅದರ ಪೂರ್ವಾಪರದ ಬಗ್ಗೆ ಅವನು ಯೋಚಿಸುವುದಿಲ್ಲ. ಒಂದು ಹುಡುಗಿಗೆ ಹುಡುಗನ ಅಥವ ಹುಡುಗನಿಗೆ ಹುಡುಗಿಯ ಮೇಲೆ ಪ್ರೀತಿ ಹುಟ್ಟುವಾಗ ಅಲ್ಲಿ ಯಾವ ಜಾತಿಯ ಪ್ರಸ್ತಾಪವೂ ಆಗುವುದಿಲ್ಲ. ಇಂತಹ ಯಾವುದೇ ಪೂರ್ವಾಪರದ ಚಿಂತನೆ ಆಗದಿರುವುದು ಪ್ರೀತಿ - ಪ್ರೇಮಗಳಲ್ಲಿ ಮಾತ್ರ.
ಪ್ರೇಮಿಗಳ ದಿನವೆಂದು ನಿರ್ಧರಿಸಿರುವ ದಿನದಲ್ಲಿ ಪ್ರೇಮದ ಬಗ್ಗೆ ಒಮ್ಮೆ ಚಿಂತಿಸುವ. ಪ್ರೇಮ - ಪ್ರೀತಿಯನ್ನು ಮಾಡದೆ ಅಥವ ಅದರ ಪ್ರಯತ್ನವನ್ನೂ ಮಾಡದೆ ಯೌವನವನ್ನು ದಾಟಿದ ಜೀವವೆ ಇರದು ಎನ್ನುವುದು ಅನೇಕರು ಒಪ್ಪುವ ಮಾತು. ಪ್ರೇಮಕ್ಕೆ ಇರುವ ಶಕ್ತಿ ಮತ್ತಿನ್ಯಾವುದಕ್ಕೂ ಹೋಲಿಸಲಾಗದು. ಇದುವರೆಗೂ ತಾಯಿಗಾಗಿ, ತಂದೆಗಾಗಿ, ಅಕ್ಕ ತಂಗಿಗಾಗಿ ಅಥವ ಅಣ್ಣ ತಮ್ಮನಿಗಾಗಿ ಪ್ರಾಣ ಬಿಟ್ಟ ಒಂದೇ ಒಂದು ಪ್ರಸಂಗವನ್ನು ಕೇಳಿಲ್ಲ. ಆದರೆ ಪ್ರೇಮಿಗಾಗಿ ಸತ್ತ ಸಾವಿರಾರು ಸುದ್ದಿಯನ್ನು ಓದಿ ಮರೆತಿದ್ದೇವೆ. ಪ್ರೇಮಿಗಳ ದಿನದಂದು ಪ್ರೇಮಿಗಳಿಗೋಸ್ಕರ ಒಂದು ಸಣ್ಣ ಅಕ್ಷರ ಪ್ರೀತಿ.
ಪ್ರೀತಿಯ ಪ್ರೇಮಿಗೆ,
ನಿನ್ನನ್ನು ನನ್ನಷ್ಟು ಪ್ರೀತಿಸುವವರು ಜಗತ್ತಿನಲ್ಲಿ ಯಾರೂ ಇಲ್ಲ ಎಂದು ನಿನಗೆ ಗೊತ್ತಿರಲಿ. ನಿನಗಾಗಿ ನಾನು ಮಾಡದೆ ಇರುವ ಪ್ರಯತ್ನ ಇಲ್ಲ. ಆದರೂ, ನೀನು ನನ್ನನ್ನೊಮ್ಮೆ ವಿಚಾರಿಸದೆ, ಹೇಗಿದ್ದೀಯ ಎಂದೂ ಕೇಳದೆ ನಿನ್ನ ಪಾಡಿಗೆ ಇರುತ್ತೀಯಲ್ಲ ಅದು ಹೇಗೆ?
ಕಳೆದ ನಾಲ್ಕು ವರ್ಷಗಳಿಂದ ನಿನ್ನ ಪ್ರೀತಿಸಿ, ಇವತ್ತಿಗೂ ನಿನ್ನನ್ನೆ ಆರಾಧಿಸುತ್ತಿರುವ ನನ್ನನ್ನೆ ನೀನು ನಿರ್ಲಕ್ಷ ಮಾಡಿದರೆ ನಿನಗೆ ದೇವರು ಕೂಡ ಹೇಗೆ ತಾನೆ ಒಲಿದಾನು. ಯಾವುದೇ ಭಕ್ತ ದೇವರನ್ನೂ ಪೂಜಿಸದಷ್ಟು ನಾನು ನಿನ್ನನ್ನು ಪ್ರೀತಿಸಿದ್ದೇನೆ ನಮ್ಮ ಪ್ರೀತಿಯನ್ನು ಪೂಜಿಸಿದ್ದೇನೆ. ಇಷ್ಟೆಲ್ಲಾ ಆದರೂ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದರೆ ಕೊನೆ ಪಕ್ಷ ಹೇಳಬಹುದಿತ್ತಲ್ಲ!
ಇರಲಿ ನಿನ್ನಿಂದ ಉತ್ತರ ಬರದೆ ಇದ್ದರೂ ನಿನ್ನ ಪ್ರೀತಿ ನನ್ನ ಕಡೆ ಇರದೆ ಇದ್ದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ಮೊದಲನೆ ದಿನ ನಿನ್ನ ನೋಡಿದಾಗ, ನೀನು ಇಳಿದ ಬಸ್ ನಂಬರ್ 14 ಮತ್ತು ನೀನು ಎಸೆದು ಹೋದ ಟಿಕೆಟ್ ಬಣ್ಣ ಹಸಿರು ಅದರ ಮೇಲೆ ಬರೆದಿದ್ದ ಮೊತ್ತ ಮೂರು ರೂಪಾಯಿ. ನನ್ನ ಬಳಿ ಇರುವ ನೂರು ರೂಪಾಯಿಗಿಂತ ಜೋಪಾನವಾಗಿ ಇಂದಿಗೂ ಅದನ್ನು ಇಟ್ಟುಕೊಂಡಿದ್ದೇನೆ. ಅದೇ ಬಸ್ಗೆ ಮಾರನೆ ದಿನವೂ ಬರುತ್ತೀಯ ಎಂದು ಅದು ಹೊರಡುವ ಸ್ಥಳಕ್ಕೆ ಬೆಳಿಗ್ಗೆ ಆರುಗಂಟೆ ಹೋಗಿ, ಅದರಲ್ಲಿ ಕುಳಿತು ಬಂದಿದ್ದೆ. ನನ್ನ ದುರಾದೃಷ್ಟ ಅಲ್ಲಿಂದಲೆ ಶುರುವಾಯಿತು, ಆ ದಿನ ನೀನು ಆ ಬಸ್ಸಿಗೆ ಬರಲೆ ಇಲ್ಲ.
ಮೊದಲನೆ ದಿನ ಕ್ಲಾಸ್ಗೆ ಬಂದಾಗ ನಿನ್ನ ಉದ್ದನೆಯ ಕೂದಲಿಗೆ ಮನಸೋತು, ಅದಕ್ಕಾಗಿಯೆ ತೆಗೆದುಕೊಂಡು ಬಂದಿದ್ದ ಕ್ಲಿಪ್ ಇವತ್ತಿಗೂ ನನ್ನಲ್ಲಿಯೆ ಉಳಿದಿದೆ. ಕಾಲೇಜಿನಿಂದ ನೀ ಹೋದರೂ ನನ್ನ ಮನಸ್ಸಿನಿಂದ ನೀನು ಹೋಗೇ ಇಲ್ಲ. ಓದಿನಲ್ಲಿ ಮುಂದಿದ್ದ ನೀನು ನನ್ನ ಮನಸ್ಸಿನಿಂದ ಮುಂದಕ್ಕೆ ಹೋಗಲೇ ಇಲ್ಲ. ಪ್ರತೀ ನಿಮಿಷವೂ ಫೈಲ್ ಆಗಿ ಅಲ್ಲೆ ಕುಳಿತೆ. ನಿನ್ನನ್ನು ಮನಸ್ಸಿನಲ್ಲಿ ಕೂರಿಸಿಕೊಂಡ ನಾನು ಓದಿನಲ್ಲಿ ಹೇಗೆ ಪಾಸಾಗಲಿ?
ನಾನು ಮರೆಯಲಾಗದ ಆ ದಿನ, ಕಾಲೇಜಿನ ಕೊನೆಯ ದಿನ. ಪರೀಕ್ಷೆಯೆಲ್ಲ ಮುಗಿದು ರಿಸಲ್ಟ್ ನೋಡಲು ಎಲ್ಲರೂ ಬಂದಿದ್ದರು. ನುಗ್ಗಾಟದಲ್ಲಿ ನಾನು ನಿನ್ನ ಪಕ್ಕದಲ್ಲೆ ನಿಂತಿದ್ದೆ. ಮೊದಲ ದರ್ಜೆಯಲ್ಲಿ ಪಾಸಾದ ನಿನಗೆ ನಂಬರ್ ಬರೆದುಕೊಳ್ಳುವ ಅವಸರ, ಫೈಲ್ ಆದ ನನಗೆ ಪಕ್ಕದಲ್ಲಿ ನೀನಿದ್ದಿಯಲ್ಲ ಎನ್ನುವ ಸಡಗರ. ನಿನ್ನ ಒಂದು ಸಣ್ಣ ಸ್ಪರ್ಶಕ್ಕಾಗಿ ಕಾದಿದ್ದ ನನಗೆ ಅಂದು ಸಿಕ್ಕ ನಿನ್ನ ಸ್ಪರ್ಶ ಇಂದಿಗೂ ಹಾಗೆ ಹಸುರಾಗೆ ಉಳಿದಿದೆ. ಎಷ್ಟೊ ಗಂಟೆಗಳ ತನಕ ನಿನ್ನ ಸ್ಪರ್ಶವಾದ ಆ ಕೈಗೆ ನೀರೂ ತಾಗಿಸದೆ ಇಟ್ಟುಕೊಂಡಿದ್ದೆ. ಇಂತಹ ಹುಚ್ಚಾಟದ ನಡುವೆಯೂ ನೀನು ನನ್ನನ್ನು ಗುರುತಿಸದೆ ಹೋಗಿದ್ದೆ. ನನ್ನ ಮನಸ್ಸಿನ ಭಾವನೆಯನ್ನು ನಿನಗೆ ಹೇಳದೆ ತಪ್ಪು ಮಾಡಿದೆನೇನೊ ಎಂದು ಅನ್ನಿಸಿದರೂ ಅರ್ಹತೆ ಇಲ್ಲದೆ ಪ್ರೀತಿ ಮಾಡಬಾರದು ಎಂದು ಸುಮ್ಮನಾಗುತ್ತೇನೆ.
ಅಂದು ಹೇಳಿದ್ದರೆ ನೀನು ಸಿಗುತ್ತಿದ್ದೇನೊ, ಹೇಳದಿದ್ದರೂ ನಾಳೆ ನೀನೆ ಸಿಗಬಹುದೇನೊ. ಇಂದಿಗೂ ನಿನ್ನನ್ನು ಹೊತ್ತುಕೊಂಡಿರುವ ಈ ಮನಸ್ಸು ಬಹಳ ಧಣಿದಿದೆ. ಅಕ್ಷರಗಳ ಮೂಲಕ ನಿನ್ನನ್ನು ಇಳಿಸಿ ಭಾರ ಕಡಿಮೆ ಮಾಡಿಕೊಳ್ಳುವ ಸಣ್ಣ ಪ್ರಯತ್ನ. ಪ್ರೇಮಿಗಳ ದಿನಕ್ಕೆ ನಿನಗೆ ಶುಭಾಶಯಗಳು. ಮುಂದೆಲ್ಲಾದರೂ ಸಿಕ್ಕರೆ ಮತ್ತೆ ಕೂರಿಸಿಕೊಳ್ಳುತ್ತೇನೆ, ಅಲ್ಲಿಯವರೆಗೂ ಮುದ್ದಿನ ಅಕ್ಷರಗಳಲ್ಲಿ ಮುದ್ದು ಮಾಡಿ ಕೂರಿಸಿರುತ್ತೇನೆ.
ಇಂತಿ ನಿನ್ನ ಪ್ರೀತಿಯ
ಕಾಲೇಜು ಪ್ರೇಮಿ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications