ಚಿತ್ರಗಳಲ್ಲಿ : ಯುಗಾದಿ ವರ್ಷ ತೊಡಕು ಮೆಲುಕು
ಲೋಕಸಭೆ ಚುನಾವಣೆ ಕಾವು, ಬೆಲೆ ಏರಿಕೆ ಬಿಸಿ ನಡುವೆ ಹೊಸ ಹರುಷ ತರುವ ಯುಗಾದಿ ಹಬ್ಬವನ್ನು ಜನತೆ ಸಂಭ್ರಮದಿಂದ ಆಚರಿಸಿದ್ದಾರೆ. ಜಯನಾಮ ಸಂವತ್ಸರವು ನಾಡಿನ ಸಕಲ ಪ್ರಜೆಗಳ ಬದುಕಿನಲ್ಲಿ ಜಯ ತರಲಿ, ಸುಖ-ಸಮೃದ್ಧಿ ನೆಲೆಸಲಿ ಎಂಬುದು ಒನ್ ಇಂಡಿಯಾ ಕನ್ನಡ ತಂಡದ ಶುಭ ಹಾರೈಕೆ.
ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಸೇವಿಸಲಾಗುತ್ತಿದೆ.
ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿ ಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ.
ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನ ವಿವಿಧ ಬಗೆಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವ ಮೂಲಕ ಮನರಂಜನೆಯನ್ನು ಪಡೆಯುತ್ತಾರೆ. ಅಂದು ಯಾವುದೇ ವ್ಯಕ್ತಿ ಒಳ್ಳೆಯ ಕೆಲಸ ಮಾಡಿದರೆ ಅದನ್ನು ವರ್ಷಪೂರ್ತಿ ಮಾಡುತ್ತಾನೆ ಹಾಗೂ ಅಂದು ದೊರೆತ ಸಂಪತ್ತು ವರ್ಷ ಪೂರ್ತಿ ದೊರೆಯುತ್ತಲೇ ಇರುತ್ತದೆ ಎಂಬ ನಂಬಿಕೆ ಇದೆ.

ಆನ್ ಲೈನ್ ನಲ್ಲೂ ಮಾಡಿ ಪಂಚಾಂಗ
ಅಂತರ್ಜಾಲದ ಮುಖಾಂತರ ಮನೆಮನೆ ತಲುಪುತ್ತಿರುವ ಒನ್ಇಂಡಿಯಾ ಕನ್ನಡಕ್ಕೂ ಯುಗಾದಿ ಅತ್ಯಂತ ಮಹತ್ವದ ದಿನ. ಸರಿಯಾಗಿ 14 ವರ್ಷಗಳ ಹಿಂದೆ, ಬೇವು ಬೆಲ್ಲ ಹಂಚಿಕೊಳ್ಳುವ ದಿನದಂದು ನಿಮ್ಮ ನೆಚ್ಚಿನ ಕನ್ನಡ ಪೋರ್ಟಲ್ ಅಂತರ್ಜಾಲದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿತ್ತು.
ಜಯನಾಮ ಪಂಚಾಂಗದಿಂದ ಹೆಕ್ಕಿದ ಉಪಯುಕ್ತ ಮಾಹಿತಿಯನ್ನು ನಿಮ್ಮ ಮುಂದೆ ಹರವಿಡಲಿದ್ದೇವೆ. ವಿವರ ಮುಂದೆ ಓದಿ
ಯುಗಾದಿ ಹಬ್ಬ ಆಚರಣೆ ವ್ಯತ್ಯಾಸ
ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಚೈತ್ರಮಾಸ ಶುದ್ಧಪಾಡ್ಯಮಿಯಂದು ಆಚರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ.

ಸೌರಮಾನ ಯುಗಾದಿ ಕೂಡಾ ಉಂಟು
ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುವುದನ್ನು ನಾವು ಕಾಣಬಹುದು.

ವೇದಗಳ ಕಾಲದಿಂದಲೂ ಯುಗಾದಿ ಹಬ್ಬವಿದೆ
ವೇದಗಳ ಕಾಲದಿಂದಲೂ ನಡೆದು ಬಂದಿದ್ದು, ಈ ಕುರಿತಂತೆ ಅಥರ್ವಣ ವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಬಗ್ಗೆ ಉಲ್ಲೇಖವಿದೆ.

ಯುಗಾದಿಯಂದು ಭೂಮಂಡಲ ಸೃಷ್ಟಿ
ಹೇಮಾದ್ರಿ ಪಂಡಿತನ ಚತುರ್ವರ್ಗ ಚಿಂತಾಮಣ ಎಂಬ ಪುರಾಣ ಗ್ರಂಥದಲ್ಲಿ ಬ್ರಹ್ಮ ದೇವನು ಚೈತ್ರಮಾಸದ ಶುಕ್ಲಪಕ್ಷದ ಮೊದಲನೆಯ ದಿನದ ಸೂರ್ಯೋದಯ ಕಾಲ ಅರ್ಥಾತ್ ಯುಗಾದಿಯಂದು ಭೂಮಂಡಲವನ್ನು ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದನೆಂದು ಉಲ್ಲೇಖಿಸಲಾಗಿದೆ.

ಅಭ್ಯಂಜನ, ಹೊಸ ಬಟ್ಟೆ ಸೊಗಸು
ಅಭ್ಯಂಜನ ಸ್ನಾನ, ಹೊಸ ಬಟ್ಟೆ ಸೊಗಸು ಎಲ್ಲೆಡೆ ಮನೆ ಮಾಡಿದ್ದು, ಚಿಕ್ಕಮಗಳೂರಿನಲ್ಲಿ ಎಣ್ಣೆ ಬಳಿದುಕೊಂಡ ಯುವಕರು ಬೈಕ್ ಸವಾರಿ ಮಾಡಿ ತಿರುಗಿದ್ದು ಪಿಟಿಐ ಛಾಯಾಗ್ರಾಹಕರಿಗೆ ಸೆರೆಸಿಕ್ಕಿದ್ದು ಹೀಗೆ












Click it and Unblock the Notifications