ಯುಗಾದಿಯ ಆಚರಣೆ ಹೇಗೆ? ಎಂತು?
*ಟಿ.ಎಂ. ಸತೀಶ್
ಯುಗಾದಿ ಅತಿ ದೊಡ್ಡ ಹಬ್ಬ. ಅಂದು ಸಾರ್ವತ್ರಿಕ ರಜೆಯ ದಿನ. ಹಿಂದೂಗಳು ಯುಗಾದಿಯಂದು ಅಭ್ಯಂಜನ ಮಾಡುತ್ತಾರೆ. ಎಂದಿನಂತೆ ದೇವರ ಪೂಜೆ ಮಾಡುತ್ತಾರೆ. ಹೊಸ ಬಟ್ಟೆ ತೊಡುತ್ತಾರೆ. ಬೇವು - ಬೆಲ್ಲ ತಿನ್ನುತ್ತಾರೆ. ಹೋಳಿಗೆ, ಮಾವಿನ ಕಾಯಿ ಚಿತ್ರಾನ್ನದ ಸೊಗಸಾದ ಊಟ ಮಾಡುತ್ತಾರೆ.
ಯುಗಾದಿಯ ದಿನ ಜೂಜಾಡುವುದೂ ಒಂದು ವಾಡಿಕೆಯಾಗಿ ಹೋಗಿದೆ. ಹಬ್ಬದ ಮಾರನೇ ದಿನ ವರ್ಷತೊಡಕು ಎಂದು ಆಚರಿಸುವ ಆ ದಿನ, ಮದ್ಯ ಸೇವನೆಯೂ ಒಂದು ಸಂಪ್ರದಾಯವಾಗಿದೆ. ಮನೆಯಲ್ಲಿ ಮಾಂಸಾಹಾರಿಗಳು ವಿಶೇಷವಾಗಿ ಹಾಗೂ ಕಡ್ಡಾಯವಾಗಿ ಮಾಂಸದ ಅಡುಗೆ ಮಾಡುತ್ತಾರೆ.
ಯುಗಾದಿ ಇಷ್ಟು ದೊಡ್ಡ ಹಬ್ಬವಾದರೂ ಇದಕ್ಕೊಂದು ನಿರ್ದಿಷ್ಟ ಆಚರಣೆ ಎಂಬುದಿಲ್ಲ ಗಣೇಶ ಚೌತಿಯ ದಿನ, ಪೂಜೆಗೊಂದು ನಿಯಮವಿದೆ, ವ್ರತವೂ ಇದೆ, ಕಥೆಯೂ ಇದೆ. ಅಂದು ಚಿನ್ನ, ಬೆಳ್ಳಿಯ ಗಣೇಶನ ಕೆಲವರು ಪೂಜಿಸಿ, ವಿಪ್ರೋತ್ತಮನಿಗೆ ದಾನ ನೀಡಿದರೆ, ಸಾಮಾನ್ಯವಾಗಿ ಎಲ್ಲರೂ ಮಣ್ಣಿನ ಗಣಪನ ತಂದು ಪೂಜಿಸಿ, ವಿಸರ್ಜನೆ ಮಾಡುತ್ತಾರೆ. ನೆರೆ ಹೊರೆಯವರ ಮನೆಗೆ ಹೋಗಿ ಗಣೇಶನ ನೋಡುವ ಸಂಪ್ರದಾಯವೂ ಇದೆ.
ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಆನಂದ ಪಡುತ್ತಾರೆ, ಮೂರು ದಿನ ವಿಶೇಷ ಪೂಜೆ ಮಾಡುತ್ತಾರೆ. ತಿಂಗಳಿಡೀ ಮನೆಯ ಮುಂದೆ ದೀಪ ಹಚ್ಚಿಡುತ್ತಾರೆ, ನವರಾತ್ರಿಯಲ್ಲಿ ಬೊಂಬೆ ಕೂರಿಸುವ, ರಾಮಲೀಲಾ, ದುರ್ಗಾ ಪೂಜೆ ಮಾಡುವ, ಜಂಭೂಸವಾರಿ, ಬನ್ನಿ ಹಂಚುವ, ವಾಹನಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಪರಿಪಾಠ ಇದೆ. ಸಂಕ್ರಾಂತಿಯಲ್ಲಿ ಎಳ್ಳು ಬೀರುತ್ತಾರೆ, ಹೀಗೆಯೇ ಎಲ್ಲ ಹಬ್ಬಗಳಿಗೂ ಒಂದೊಂದು ವಿಶೇಷ ಆಚರಣೆ ಇದೆ. ಆದರೇ, ಯುಗಾದಿಯಲ್ಲಿ ಇಂತಹ ಸಾರ್ವತ್ರಿಕವಾದ ಯಾವ ಆಚರಣೆಯೂ ಇಲ್ಲ.
ಊರಿನ ಪುರೋಹಿತರು, ಪಂಡಿತರು ಮಾತ್ರ ಅಂದು ಸ್ನಾನ ಸಂಧ್ಯಾದಿ ಮುಗಿದ ಬಳಿಕ, ಪಂಚಾಗವನ್ನು ಪೂಜಿಸುತ್ತಾರೆ. ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ಆನಂತರ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಸರ್ವದೋಷ ಪರಿಹಾರ ಆಗತ್ತೆ ಎಂದು ವಯಸ್ಸಾದ ಕೆಲವರು ದೃಢವಾಗಿ ಹೇಳುತ್ತಾರೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಸೇರಿ, ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ನಮ್ಮ ಹಳ್ಳಿಕಡೆ ಇನ್ನೂ ಇದೆ. ಆದರೆ, ನಗರ, ಪಟ್ಟಣಗಳಲ್ಲಿ ಈ ಸಂಪ್ರದಾಯಕ್ಕೆ ತಿಲಾಂಜಲಿ ಕೊಡಲಾಗಿದೆ. ಎಣ್ಣೆಯ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಊಟ ಮಾಡಿ ಯಾವುದೋ ಒಂದು ಚಾನಲ್ಗೆ ಜೋತು ಬೀಳುವುದನ್ನು ಬಿಟ್ಟರೆ ಮತ್ತಾವ ವಿಶೇಷವೂ ಇಲ್ಲ. ಕೆಲವರು ದೇವಾಲಯಗಳಿಗೆ ಹೋಗಿ ಸಂಜೆ, ಪಂಜಾಗ ಶ್ರವಣ ಮಾಡುತ್ತಾರೆ.