ಶ್ರೀರಂಗಪಟ್ಟಣಕ್ಕೂ ಮೈಸೂರು ದಸರಾಕ್ಕೂ ಇರುವ ನಂಟೇನು?

ಮೈಸೂರಿನಲ್ಲಿ ನಡೆಯುವ ದಸರಾ ಇಡೀ ವಿಶ್ವದ ಗಮನಸೆಳೆಯುತ್ತಾ ವರ್ಷದಿಂದ ವರ್ಷಕ್ಕೆ ಹೊಸ ಕಾರ್ಯಕ್ರಮಗಳ ಸೇರ್ಪಡೆಯೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ಈ ದಸರಾ ಆರಂಭ ಆಗಿದ್ದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಮೈಸೂರು ದಸರಾಕ್ಕೆ ಮುನ್ನುಡಿ ಬರೆದ ಶ್ರೀರಂಗಪಟ್ಟಣದಲ್ಲಿ ಇವತ್ತಿಗೂ ದಸರಾವನ್ನು ನಡೆಸಲಾಗುತ್ತದೆ. ಈ ಬಾರಿ ಮಂಡ್ಯ ಜಿಲ್ಲಾಡಳಿತ ಶ್ರೀರಂಗಪಟ್ಟಣದಲ್ಲಿ ಐದು ದಿನಗಳ ಕಾಲ (ಸೆ.28 ರಿಂದ ಅ.2) ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಸೆ.28 ರಂದು ಮಧ್ಯಾಹ್ನ 3 ಗಂಟೆ ಕಿರಂಗೂರಿನ ಬನ್ನಿಮಂಟಪದ ಬಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆಯೊಂದಿಗೆ ದಸರಾ ಆರಂಭವಾಗಲಿದೆ.

ಇದೇ ವೇಳೆ ದೇವಿಗೆ ಪುಷ್ಪಾರ್ಚನೆ, 108 ಕಳಸ ಪೂಜೆ, ಪೊಲೀಸ್ ಬ್ಯಾಂಡ್, ಅಶ್ವ ಪಡೆ, ಕಲಾತಂಡ ಹಾಗೂ ಸ್ಥಬ್ದಚಿತ್ರಗಳ ಮೆರವಣಿಗೆ ನಡೆಯಲಿದೆ. ಬಳಿಕ ಸಂಜೆ 6.30 ಕ್ಕೆ ಶ್ರೀರಂಗನಾಥ ಸ್ವಾಮಿ ದೇವಾಲಯದ ಮುಂಭಾಗದ ಶ್ರೀರಂಗ ವೇದಿಕೆಯಲ್ಲಿ ದಸರಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಅ.2ರಂದು ದಸರಾಕ್ಕೆ ತೆರೆಬೀಳಲಿದೆ.

 ಮಂಡ್ಯ ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮ

ಮಂಡ್ಯ ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮ

ಮೈಸೂರಿನಂತೆಯೇ ಶ್ರೀರಂಗಪಟ್ಟಣ ದಸರಾದಲ್ಲಿ ಯೋಗ ದಸರಾ, ಕ್ರೀಡಾ ದಸರಾ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಸ್ಟಾರ್ ನೈಟ್, ಜಲ ಸಾಹಸಸ ಕ್ರೀಡೆಗಳು, ಗಂಗಾರತಿ, ಕವಿ ಗೋಷ್ಠಿ, ಚರ್ಚಾ ಗೋಷ್ಠಿ, ಉದ್ಯೋಗ ಮೇಳಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಂಡ್ಯ ಜಿಲ್ಲಾಡಳಿತ ನಡೆಸಲು ತೀರ್ಮಾನ ಕೈಗೊಂಡಿದೆ.

 ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ 'ಆದಿರಂಗ'

ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ 'ಆದಿರಂಗ'

ಶ್ರೀರಂಗಪಟ್ಟಣದ ಬಗ್ಗೆ ಹೇಳುವುದಾದರೆ ಮೈಸೂರಿಗೆ ಹದಿನಾರು ಕಿ.ಮೀ.ದೂರದಲ್ಲಿದ್ದು, ಮಂಡ್ಯ ಜಿಲ್ಲೆಗೆ ಸೇರಿದ್ದು ತಾಲೂಕು ಕೇಂದ್ರವಾಗಿದೆ. ಮಂಡ್ಯದಿಂದ 30 ಕಿ.ಮೀ. ಬೆಂಗಳೂರಿನಿಂದ 122 ಕಿ.ಮೀ. ದೂರದಲ್ಲಿದೆ. ಕೊಡಗಿನಿಂದ ಹರಿದು ಬರುವ ಕಾವೇರಿ ನದಿ ಇಲ್ಲಿ ಎರಡು ಕವಲಾಗಿ ಹರಿಯುವುದರೊಂದಿಗೆ ಶ್ರೀರಂಗಪಟ್ಟಣವನ್ನು ದ್ವೀಪವಾಗಿಸಿದ್ದು ವಿಶೇಷ. ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ 'ಆದಿರಂಗ'ವಾಗಿ ಚಾರಿತ್ರಿಕವಾಗಿ 'ಅಷ್ಟಗ್ರಾಮ'ವಾಗಿ ಕರೆಯಲ್ಪಡುತ್ತಿತ್ತು ಎನ್ನಲಾಗಿದೆ. ಕಾವೇರಿ ನದಿ ಸುತ್ತುವರಿದು ಸೃಷ್ಠಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿದೆ.

 ಶ್ರೀರಂಗರಾಯನ ಆಡಳಿತ ಅಂತ್ಯ

ಶ್ರೀರಂಗರಾಯನ ಆಡಳಿತ ಅಂತ್ಯ

ಇತಿಹಾಸದ ಪ್ರಕಾರ ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆಯನ್ನು ಕಟ್ಟಿಸಿದ್ದಾನೆ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಪರಿಗಣಿತವಾಗಿದೆ.

ಇದು ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿತ್ತು. ಆಗ ಅವರ ಸಾಮಂತ ಶ್ರೀರಂಗರಾಯನ ಇಲ್ಲಿ ಆಡಳಿತ ನಡೆಸುತ್ತಿದ್ದನು. ಆತನ ಕಾಲದಲ್ಲಿಯೇ ನವರಾತ್ರಿ ಆಚರಣೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ 1610ರಲ್ಲಿ ಶ್ರೀರಂಗಪಟ್ಟಣಕ್ಕೆ ದಂಡೆತ್ತಿ ಹೋದ ಮೈಸೂರು ರಾಜರಾದ ಯದುವಂಶದ ರಾಜಒಡೆಯರ್ ಶ್ರೀರಂಗಪಟ್ಟಣವನ್ನು ವಶಕ್ಕೆ ಪಡೆದುಕೊಂಡರು. ಆ ನಂತರ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುವ ವೇಳೆ ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆ ಮಾಡಲು ಆರಂಭಿಸಿದರು ಎಂಬುದು ಇತಿಹಾಸ.

 ರಾಜಧಾನಿ ಬದಲಾದ ನಂತರ ಕಳೆಗುಂದಿದ ಇಲ್ಲಿನ ದಸರಾ

ರಾಜಧಾನಿ ಬದಲಾದ ನಂತರ ಕಳೆಗುಂದಿದ ಇಲ್ಲಿನ ದಸರಾ

1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸುವ ಮೂಲಕ ದಸರಾ ಆಚರಣೆಗೆ ಮುನ್ನುಡಿ ಬರೆದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದರಲ್ಲದೆ, ಮೈಸೂರಿನಲ್ಲಿ ದಸರಾವನ್ನು ಆಚರಣೆ ಮಾಡಲಾರಂಭಿಸಿದರು. ಬಳಿಕ ಮೈಸೂರು ದಸರಾವಾಗಿ ಖ್ಯಾತಿ ಪಡೆಯಿತು.

ಅತ್ತ ಶ್ರೀರಂಗಪಟ್ಟಣದಲ್ಲಿ ದಸರಾ ಮಂಕಾಯಿತು. ಸಾಂಪ್ರದಾಯಿಕ ಪೂಜೆಯಷ್ಟೇ ನಡೆಸಲಾಗುತ್ತಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಮಂಡ್ಯದ ಜನರ ಬಯಕೆಯಂತೆ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ಜಿಲ್ಲಾಡಳಿತ ಮುಂದಾಯಿತು. ಈ ಹಿಂದೆ ಮೂರು ದಿನಗಳ ಕಾಲ ದಸರಾ ಆಚರಣೆ ಮಾಡಿದರೆ ಈ ಬಾರಿ ಐದು ದಿನಗಳ ಕಾಲ ದಸರಾ ಆಚರಣೆ ನಡೆಯಲಿದೆ.

 ನಂದಿ ಕಂಬಕ್ಕೆ ಪೂಜೆ

ನಂದಿ ಕಂಬಕ್ಕೆ ಪೂಜೆ

ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ವೈದಿಕರ ತಂಡ ಪ್ರಥಮವಾಗಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ಹಲವು ಪೂಜಾಕೈಂಕರ್ಯಗಳು ನಡೆಯುವ ಮೂಲಕ ದಸರಾ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಇದೇ ವೇಳೆ ಗಣಪತಿ ಹೋಮ, ನವಗ್ರಹ ಪೂಜೆ, ಪುಣ್ಯಾಹ, ಶಮಿಪೂಜೆ, ಚಾಮುಂಡಿ ಪೂಜೆ ಹಾಗೂ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡ ಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ.

 ವಿವಿಧ ಕಲಾತಂಡಗಳ ಮೆರವಣಿಗೆ

ವಿವಿಧ ಕಲಾತಂಡಗಳ ಮೆರವಣಿಗೆ

ಇದೇ ಸಂದರ್ಭ ಶ್ರೀ ಚಾಮುಂಡೇಶ್ವರಿ ಮೂರ್ತಿ ಹೊತ್ತ ರಥದೊಂದಿಗೆ ಆರಂಭಗೊಳ್ಳುವ ದಸರಾ ಉತ್ಸವದಲ್ಲಿ ಕಳಶಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮುಂದುವರೆಯುತ್ತಾ ಸಾಗಿ ರಂಗನಾಥ ಸನ್ನಿಧಿಯನ್ನು ತಲುಪುತ್ತದೆ. ಅಂಬಾರಿ ಹೊತ್ತ ಆನೆಯ ಮೆರವಣಿಯನ್ನು ಕೂಡ ನಡೆಸಲಾಗುತ್ತದೆ.

ಎರಡು ವರ್ಷಗಳ ಕಾಲ ಕೊರೊನಾದಿಂದಾಗಿ ದಸರಾ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಜ್ಜಾಗಿದೆ. ಹೀಗಾಗಿ ಐದು ದಿನಗಳ ಕಾಲ ಆಚರಣೆ ನಡೆಸಲಾಗುತ್ತಿದೆ. ಮೈಸೂರು ದಸರಾಕ್ಕೆ ಬರಲು ಸಾಧ್ಯವಾಗದವರು ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲಿ ಪಾಲ್ಗೊಂಡು ಖುಷಿಪಡುತ್ತಾರೆ. ಅದು ಏನೇ ಇರಲಿ ಇವತ್ತಿನ ಜಗಮಗಿಸುವ ಮೈಸೂರು ದಸರಾದ ಬೇರು ಶ್ರೀರಂಗಪಟ್ಟಣದಿಂದಲೇ ಶುರುವಾಗಿದ್ದು ಎನ್ನುವುದೇ ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+