ಶ್ರಾವಣ ಪುತ್ರದ ಏಕಾದಶಿ: ಈ ದಿನದ ವಿಶೇಷತೆ, ಉಪವಾಸ ಯಾಕೆ, ಇತ್ಯಾದಿ ಮಾಹಿತಿ
ಆಗಸ್ಟ್ 8, ಸೋಮವಾರ ಶ್ರಾವಣ ಪುತ್ರದ ಏಕಾದಶಿ ಹಬ್ಬ ಇದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಆರಾಧನೆಗೆ ಇರುವ ದಿನ. ವರ್ಷಕ್ಕೆ ಎರಡು ಬಾರಿ ಪುತ್ರದ ಏಕಾದಶಿ ಬರುತ್ತದೆ. ಈಗ ಶ್ರಾವಣ ಮಾಸದ ಏಕಾದಶಿ ದಿನವಾಗಿದೆ. ಪುಷ್ಯ ಮಾಸದಲ್ಲೂ ಪುತ್ರದ ಏಕಾದಶಿ ಬರುತ್ತದೆ.
ಏಕಾದಶಿ ಎಂದರೆ ಸಂಸ್ಕೃತದಲ್ಲಿ ಹನ್ನೊಂದು. ತಿಂಗಳಲ್ಲಿ ಹನ್ನೊಂದನೇ ದಿನ. ಹಿಂದೂ ಪಂಚಾಂಗದ ಪ್ರಕಾರ ಒಂದು ಮಾಸದಲ್ಲಿ ಎರಡು ಪಕ್ಷ ಬರುತ್ತದೆ. ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ. ಪ್ರತೀ ಪಕ್ಷದಲ್ಲೂ 15 ದಿನ ಇರುತ್ತದೆ. ಹೀಗಾಗಿ, ವರ್ಷದಲ್ಲಿ 12 ಮಾಸಗಳಲ್ಲಿ 24 ಬಾರಿ ಏಕಾದಶಿ ಬರುತ್ತದೆ.
ಹಿಂದೂ ಧರ್ಮದಲ್ಲಿ ಪ್ರತೀ ಏಕಾದಶಿ ದಿನವೂ ಪವಿತ್ರವೆಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ಶ್ರಾವಣ ಪುತ್ರದ ಏಕಾದಶಿ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಸ್ಕಾನ್ ಮಂದಿರಗಳಲ್ಲಿ ವಿಶೇಷ ಪೂಜೆಗಳಿಗಳಿರುತ್ತದೆ. ಆ ದಿನದಂದು ಯಾವುದಾದರೂ ಇಸ್ಕಾನ್ ಮಂದಿರಕ್ಕೆ ಹೋದರೆ ಸಾವಿರಾರು ಭಕ್ತರು ಕೃಷ್ಣನ ದರ್ಶನಕ್ಕೆ ಎಡೆತಾಕುತ್ತಿರುವುದನ್ನು ಕಾಣಬಹುದು.
ಈ ವರ್ಷದ ಶ್ರಾವಣ ಪುತ್ರದ ಏಕಾದಶಿ ಆಗಸ್ಟ್ ೮ರಂದು ಬಿದ್ದಿದೆ. ಶ್ರಾವಣ ಪುತ್ರದ ಏಕಾದಶಿ ದಿನಕ್ಕೆ ಬಹಳ ಮಹತ್ವ ಇದೆ. ಈ ದಿನದಂದು ಉಪವಾಸ ಆಚರಿಸವುದು ಯಾಕೆ, ಆಚರಣೆ ಹೇಗೆ, ಮಂತ್ರೋಚ್ಚಾರಣೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ:

ಶ್ರಾವಣ ಪುತ್ರದ ಏಕಾದಶಿ ಮಹತ್ವ
ಪುತ್ರದ ಎಂಬುದು ಪುತ್ರ್ ಮತ್ತು ಅದ ಪದಗಳ ಸಂಯೋಗ. ಪುತ್ರ್ ಎಂದರೆ ಗಂಡು ಮಗ ಮತ್ತು ಅದ ಎಂದರೆ ನೀಡುವುದು ಎಂದರ್ಥ. ಪುತ್ರದ ಎಂದರೆ ಗಂಡು ಸಂತಾನ ಪ್ರಾಪ್ತಿ ಎಂದಾಗುತ್ತದೆ. ಈ ದಿನದಂದು ವಿಷ್ಣುವಿನ ಆರಾಧನೆ ಮಾಡಿದರೆ ಗಂಡು ಸಂತಾನದ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗಿ, ಸಂತಾನ ಇಲ್ಲದ ವಿವಾಹಿತ ದಂಪತಿ ಈ ದಿನದಂದು ಪುತ್ರಪ್ರಾಪ್ತಿಗಾಗಿ ಪೂಜೆ ಮಾಡುತ್ತಾರೆ.
ಸಂತಾನ ಪ್ರಾಪ್ತಿಗೆ ಮಾತ್ರವಲ್ಲ, ಒಳ್ಳೆಯ ಆಯುರ್ ಆರೋಗ್ಯ, ಸಂಪತ್ತು, ಐಶ್ವರ್ಯ ಇತ್ಯಾದಿ ಕೂಡ ಸಿಗುತ್ತದೆ ಎಂಬುದು ನಂಬಿಕೆ. ಹೀಗಾಗಿ, ವಿವಾಹಿತರು ಮಾತ್ರವಲ್ಲ ಎಲ್ಲರೂ ಈ ದಿನ ಭಕ್ತಿಯಿಂದ ವಿಷ್ಣುವಿನ ಪೂಜೆ ಮಾಡಿದರೆ ಒಳ್ಳೆಯದು ಎನ್ನಲಾಗುತ್ತದೆ. ಎಲ್ಲಾ ವಯಸ್ಸಿನವರೂ ಉಪವಾಸ, ವ್ರತ ಮತ್ತು ಪೂಜೆ ಕೈಗೊಳ್ಳಬಹುದು.

ಶ್ರಾವಣ ಪುತ್ರದ ಏಕಾದಶಿ ಘಳಿಗೆ
2022ರಲ್ಲಿ ಶ್ರಾವಣ ಪುತ್ರದ ಏಕಾದಶಿ ದಿನ ಯಾವತ್ತು, ತಿಥಿ ಆರಂಭ ಮತ್ತು ಅಂತ್ಯ ಇತ್ಯಾದಿ ವಿವರ ಇಲ್ಲಿದೆ:
ಶ್ರಾವಣಪುತ್ರದ ಏಕಾದಶಿ ದಿನ: 2022, ಆಗಸ್ಟ್ 8, ಸೋಮವಾರ
ಶ್ರಾವಣ ಏಕಾದಶಿ ತಿಥಿ ಆರಂಭ: ಆಗಸ್ಟ್ 7, ಭಾನುವಾರ ರಾತ್ರಿ 11:50ಕ್ಕೆ
ಶ್ರಾವಣ ಏಕಾದಶಿ ತಿಥಿ ಮುಗಿಯುವುದು: ಆಗಸ್ಟ್ 8, ಸೋಮವಾರ ರಾತ್ರಿ 9ಕ್ಕೆ
ಶ್ರಾವಣ ಏಕಾದಶಿ ಪಾರಣ ಸಮಯ: ಆಗಸ್ಟ್ 9, ಮಂಗಳವಾರ ಮುಂಜಾನೆ 5:47ರಿಂದ 8:27ರವರೆಗೆ.

ಶ್ರಾವಣ ಪುತ್ರದ ಏಕಾದಶಿ ಆಚರಣೆ ಹೀಗೆ
ಭಾನುವಾರ ಮಧ್ಯರಾತ್ರಿಯೇ ಏಕಾದಶಿ ತಿಥಿ ಆರಂಭವಾಗುತ್ತದೆ. ಭಕ್ತರು ಬೇಗನೇ ಎದ್ದು ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಿ ತಯಾರಾಗಬೇಕು. ಬಹಳ ಶ್ರದ್ಧೆಯಿಂದ ಪೂಜೆ ಮಾಡುವುದಾಗಿ, ಇಡೀ ದಿನ ಉಪವಾಸ ಮಾಡುವುದಾಗಿ, ಮತ್ತು ಯಾವುದೇ ಪ್ರಮಾದ ಎಸಗುವುದಿಲ್ಲ ಎಂಬ ಸಂಕಲ್ಪ ತೊಡಬೇಕು.
ಸಂಜೆ ಸೂರ್ಯಾಸ್ತಕ್ಕೆ ಸ್ವಲ್ಪ ಮುಂಚೆ ಪೂಜೆ ಮಾಡಬೇಕು. ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಇಟ್ಟು ಹೂ ಹಾರಗಳಿಂದ ಅಲಂಕರಿಸಬೇಕು. ದೀಪಗಳನ್ನು ಹಚ್ಚಬೇಕು. ಹಣ್ಣು ಹಂಪಲುಗಳನ್ನು ನೇವೇದ್ಯವಾಗಿ ಇಡಬೇಕು.
ವಿಷ್ಣು ಮತ್ತು ಕೃಷ್ಣನಿಗೆ ತುಳಸಿ ಎಂದರೆ ಬಲು ಪ್ರಿಯ. ತುಳಸಿ ಜೊತೆಗೆ ಪಂಚಾಮೃತದಿಂದ ವಿಷ್ಣುವಿನ ಪೂಜೆ ಮಾಡಬೇಕು. ಪಂಜಾಮೃತೆಂದರೆ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ಹಸುವಿನ ತುಪ್ಪ. ಅದರಲ್ಲೂ ತುಳಸಿ ಇಲ್ಲದೇ ಮಾಡುವ ವಿಷ್ಣುಪೂಜೆ ಪರಿಪೂರ್ಣ ಎನಿಸುವುದಿಲ್ಲ.
ವಿಷ್ಣು ಸಹಸ್ರನಾಮ, ಹರಿಸ್ತೋತ್ರ ಇತ್ಯಾದಿ ಮಂತ್ರೋಚ್ಛಾರಗಳನ್ನು ಮಾಡಿದರೆ ವಿಷ್ಣು ಪ್ರಸನ್ನನಾಗುತ್ತಾನೆ. ಉಪವಾಸ ಮಾಡುವುದು ಶ್ರೇಷ್ಠ. ಆದರೆ, ಈಗ ಬಹಳ ಮಂದಿಗೆ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ. ಅವರು ಬೇಕಾದರೆ ಬೆಳಗ್ಗೆಯಿಂದ ಉಪವಾಸ ಇದ್ದು ಸಂಜೆ ಪೂಜೆಯ ಬಳಿಕ ನೈವೇದ್ಯಕ್ಕಿಟ್ಟ ಪ್ರಸಾದವನ್ನೇ ಆಹಾರವಾಗಿ ಸೇವಿಸಬಹುದು.
ಒಂದು ಹೊತ್ತು ಉಪವಾಸವೂ ಇರಲಾಗದವರು ಸಾತ್ವಿಕ ಆಹಾರವನ್ನು ಸೇವಿಸಬಹುದು. ಹಣ್ಣು, ಹಾಲಿನ ಪದಾರ್ಥಗಳು, ಆಲೂಗಡ್ಡೆ ಇತ್ಯಾದಿಯನ್ನು ತಿನ್ನಬಹುದು.
ತಾಮಸ ಆಹಾರವೆನಿಸಿದ ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಇತ್ಯಾದಿಯನ್ನು ತಿನ್ನುವಂತಿಲ್ಲ. ಈ ದಿನದಂದು ಭಕ್ತರು ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ಕೃಷ್ಣ ಅಥವಾ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಪೂಜೆ ಮಾಡಿಸಿದರೆ ಶ್ರೇಯಸ್ಸು ಎಂದು ನಂಬಲಾಗುತ್ತದೆ.

ಶ್ರಾವಣ ಪುತ್ರದ ಏಕಾದಶಿ ದಿನದಂದು ಮಂತ್ರಗಳು
* ಓಂ ನಮೋ ಭಗವತೇ ವಾಸುದೇವಯೇ
* ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ, ರಾಮ ನಾರಾಯಣಂ ಜಾನಕಿ ವಲ್ಲಭಂ
* ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ, ಹೇ ನಾಥ ನಾರಾಯಣ ವಾಸುದೇವ
* ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ; ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ.
ಈ ಮೇಲಿನ ನಾಲ್ಕು ಮಂತ್ರಗಳನ್ನು ನೀವು ಸಾಧ್ಯವಾದಷ್ಟೂ ಮಂತ್ರೋಚ್ಚಾರಣೆ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಯೂಟ್ಯೂಬ್, ಸ್ಪಾಟಿಫೈ ಇತ್ಯಾದಿ ಆ್ಯಪ್ಗಳಲ್ಲಿ ವಿಷ್ಣು ಸಹಸ್ರನಾಮ, ಮಂತ್ರಗಳು ಸಿಗುತ್ತವೆ. ಅವುಗಳನ್ನು ನೀವು ಹಾಕಿ ಭಕ್ತಿಯ ಭಾವವನ್ನು ಹೆಚ್ಚಿಸಿಕೊಳ್ಳಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications