ಹೊಸವರ್ಷ ಹರ್ಷದಾಯಕವಾಗಿರಲಿ..ಬಾಳು ಬಂಗಾರವಾಗಲಿ
ಪ್ರತಿ ವರ್ಷ ಡಿಸೆಂಬರ್ ಬರುತ್ತಿದ್ದಂತೆಯೇ ಮುಂದಿನ ಹೊಸ ವರ್ಷದ ಕಲ್ಪನೆಯಲ್ಲಿ ನಾವು ವಿಹರಿಸುವುದು ಸಾಮಾನ್ಯ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ವರ್ಷಗಳ ಕಾಲ ನಾವು ಸವೆಸಿದ ಒಂದೊಂದು ದಿನವೂ ನಮ್ಮ ಪಾಲಿಗೆ ಹೊಸ ಅನುಭವ ನೀಡಿರುತ್ತದೆ. ಅದೆಷ್ಟೋ ಜನ ಏನನ್ನು ಪಡೆದುಕೊಂಡಿದ್ದೇವೆ ಎನ್ನುವುದಕ್ಕಿಂತ ಏನು ಕಳೆದುಕೊಂಡೆವು ಎಂಬುವುದರ ಲೆಕ್ಕಾಚಾರದಲ್ಲಿ ತನ್ಮಯರಾಗುತ್ತಾರೆ.
ಒಂದು ವರ್ಷದಲ್ಲಿ ನಡೆದ ಸಂಪೂರ್ಣ ಘಟನೆಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ದೇಶ, ವಿದೇಶಗಳಲ್ಲಿ ನಡೆದ ಹಲವು ವಿದ್ಯಮಾನಗಳು ಐತಿಹಾಸಿಕ ಘಟನೆಗಳಾಗಿ ಉಳಿದು ಬಿಡುತ್ತವೆ. ಕೆಲವೊಂದು ನಮಗೆ ಖುಷಿ ತಂದರೆ ಮತ್ತೆ ಕೆಲವು ದುಃಖ ತಂದಿವೆ. ಈ ವರ್ಷ ನನ್ನ ಬದುಕಿನಲ್ಲಿ ಒಳಿತು ಆಗಿಲ್ಲ ಬರೀ ಕಷ್ಟಗಳನ್ನೇ ಬಂದಿದೆ ಎಂದು ಹಲುಬುವವರನ್ನು ನಾವು ಅಲ್ಲಲ್ಲಿ ಕಾಣುತ್ತೇವೆ. ಅದು ತಪ್ಪು ಎನ್ನಲಾಗುವುದಿಲ್ಲ ಕಾರಣ ಹೊಸ ವರ್ಷಕ್ಕೆ ನಮ್ಮದೇ ಆದ ಹತ್ತು ಯೋಜನೆ, ಕಲ್ಪನೆಗಳನ್ನು ಇಟ್ಟುಕೊಂಡು ಹೆಜ್ಜೆ ಹಾಕಿರುತ್ತೇವೆ. ಅವುಗಳೆಲ್ಲಾ ಕಾರ್ಯಗತವಾಗದಿದ್ದಾಗ ನಮ್ಮಲ್ಲಿ ನಿರಾಶೆ ಮೂಡುವುದು ಸಹಜ.[ಹೊಸವರ್ಷ ಬಂಪರ್, ಸ್ಪೈಸ್ ಜೆಟ್ ಪ್ರಯಾಣ ದರ ಕಡಿತ]
ಹಾಗೆನೋಡಿದರೆ ಹೊಸ ವರ್ಷದಲ್ಲೇನಿದೆ? ಏನೂ ಇಲ್ಲ. ಎಲ್ಲಾ ದಿನಗಳಂತೆ ಅದೂ ಕೂಡ. ವರ್ಷದ ಮೊದಲ ದಿನವಷ್ಟೆ ಹೊಸತು. ನಂತರ ಅದು ಕೂಡ ಹಳೆದಾಗುತ್ತದೆ. ಮತ್ತೆ ಹೊಸ ವರ್ಷ ಬಂದಾಗ ನಾವು ಅದನ್ನು ಸ್ವಾಗತಿಸಲು ಸಿದ್ಧವಾಗಿ ಬಿಡುತ್ತೇವೆ. ಇದೆಲ್ಲವೂ ನೈಸರ್ಗಿಕ ನಿಯಮ. ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯಬೇಕು.
ಕಳೆದ ವರ್ಷದಲ್ಲಿ ನಮಗೆ ಏನು ಒಳ್ಳೆಯದಾಗಿದೆ ಎನ್ನುವುದಕ್ಕಿಂತ ನಾವು ನಮಗೆ, ನಮ್ಮ ಕುಟುಂಬಕ್ಕೆ, ಸಮಾಜಕ್ಕೆ ಒಳ್ಳೆಯದಾಗುವ ಯಾವುದಾದರೂ ಕೆಲಸ ಮಾಡಿದ್ದೇವೆಯೇ ಎಂಬುದನ್ನು ಕೂಡ ಯೋಚಿಸಬೇಕಾಗಿದೆ. ಕೇವಲ ನಮ್ಮ ಬಗ್ಗೆ ಯೋಚಿಸಿದರೆ ಏನು ಪ್ರಯೋಜನ ಇಡೀ ಸಮಾಜದ ಬಗ್ಗೆ ಯೋಚಿಸುವ ಮತ್ತು ನಮಗಿಂತ ಕಷ್ಟದಲ್ಲಿರುವವರಿಗೆ ನಮ್ಮಿಂದ ಏನಾದರು ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ಹುಟ್ಟಬೇಕು.[ಅವಿರತದಿಂದ ಜ.2ರಂದು ಸಂಸದಲ್ಲಿ ಸಂಗೀತ 'ರಂಗವಲ್ಲಿ']
ನಮ್ಮಿಂದ ಬೇರೆಯವರಿಗೆ ಯಾವ ರೀತಿಯ ಅನುಕೂಲವಾಗಿದೆ? ಎಂದು ಆಲೋಚಿಸಬೇಕಾಗಿದೆ. ನಮಗೆ ನಾವು ಅನುಕೂಲ ಮಾಡಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆ ಏನಿದೆ? ಅದೇ ಬೇರೆಯವರಿಗೆ ಒಂದಷ್ಟು ಸಹಾಯ ಮಾಡಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಿದೆಯಲ್ಲ ಅದು ಕೊಡುವ ಸುಖ ನಿಜಕ್ಕೂ ಮರೆಯಲಾಗದ್ದು.
ಹೊಸವರ್ಷವನ್ನು ಸ್ವಾಗತಿಸಲು ವೈಯಕ್ತಿಕವಾಗಿ ನಾವು ಹಲವು ರೀತಿಯಲ್ಲಿ ಸಿದ್ಧರಾಗಿರುತ್ತೇವೆ. ಕೆಲವರು ಹೊಸ ವರ್ಷಕ್ಕೆ ಹೊಸ ವಸ್ತುಗಳ ಖರೀದಿಗೆ ಮುಂದಾದರೆ, ಮತ್ತೆ ಕೆಲವರು ಹೊಸವ್ಯವಹಾರ, ವ್ಯಾಪಾರ, ಉದ್ದಿಮೆ ಆರಂಭಿಸಬೇಕೆನ್ನುವ ಚಿಂತನೆಯಲ್ಲಿ ತೊಡಗಿರಬಹುದು.ಹೊಸವರ್ಷಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಏನಾದರೊಂದು ಸಾಧನೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ.[ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು]
ಎಲ್ಲರಿಗೂ ಹೊಸ ವರ್ಷದ ಬಗ್ಗೆ ತಮ್ಮದೇ ಆದ ನಿರೀಕ್ಷೆ ಮತ್ತು ಹತ್ತು ಹಲವು ಕನಸುಗಳಿರುತ್ತವೆ. ಕಳೆದು ಹೋದ ವರ್ಷದಲ್ಲಿ ಅನುಭವಿಸಿದ ಎಲ್ಲಾ ಕಷ್ಟಗಳು ಪರಿಹಾರವಾಗಿ ಬಾಳು ಹಸನಾಗಲಿ ಎಂಬ ಬಯಕೆಯೊಂದಿಗೆ ಹೊಸ ವರ್ಷದತ್ತ ಹೆಜ್ಜೆ ಇಡೋಣ.