ಪತಿಯ ಆಯುಷ್ಯ ವೃದ್ಧಿಗೆ ವಟ ಸಾವಿತ್ರಿ ವ್ರತ: ಆಚರಣೆ ಏಕೆ? ಹೇಗೆ?
ಪತಿಯ ಆಯುಷ್ಯ ವೃದ್ಧಿಗಾಗಿ ಆಚರಿಸಲ್ಪಡುವ ವಟ ಸಾವಿತ್ರಿ ವ್ರತ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ತನ್ನ ಪತಿ ಸತ್ಯವಾನ್ ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಈ ದಿನವನ್ನು ವಟ ಸಾವಿತ್ರಿ ವ್ರತವನ್ನಾಗಿ ಆಚರಿಸಲಾಗುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಪ್ರತಿವರ್ಷ ಜ್ಯೇಷ್ಠ ಮಾಸದ ಶುದ್ಧ ಹುಣ್ಣಿಮೆಯಂದು ವಟ ಪೂರ್ಣಿಮಾ ಅಥವಾ ವಟ ಸಾವಿತ್ರಿ ವ್ರತ ಆಚರಿಸಲಾಗುತ್ತದೆ. ಈ ವರ್ಷ ಜೂನ್ 27, ಬುಧವಾರದಂದು ಈ ವ್ರತವನ್ನು ಆಚರಿಸಲಾಗುತ್ತಿದ್ದು, ಹಬ್ಬದ ಆಚರಣೆ ಹೇಗೆ, ಏಕೆ ಎಂದು ಗೊಂದಲದಲ್ಲಿರುವ ಮಹಿಳೆಯರಿಗೆ ಕೆಲವು ಮಹತ್ವದ ಮಾಹಿತಿ ಇಲ್ಲಿದೆ.
ಪತಿಯ ಆಯುಷ್ಯ ವೃದ್ಧಿಗೆ ಕರ್ವ ಚೌತ್: ಸುಂದರ ಲಲನೆಯರ ಚೆಂದದ ಚಿತ್ರಗಳು
ಸತ್ಯವಾನ ಅಲ್ಪಾಯುಷಿ ಎಂಬುದು ತಿಳಿದೂ ಆತನನ್ನೇ ವರಿಸಿ, ನಂತರ ತನ್ನ ಸಚ್ಚಾರಿತ್ರ್ಯ, ಚತುರ ಮಾತುಗಳಿಂದ ಯಮನನ್ನೇ ಗೆದ್ದು ಪತಿಯನ್ನು ಉಳಿಸಿಕೊಂಡ ಮಹಾನ್ ಸ್ತ್ರೀ ಸಾವಿತ್ರಿ.
ವಟ ಸಾವಿತ್ರಿ ವ್ರತ
ಹಲವೆಡೆ ವಟ ಸಾವಿತ್ರಿ ವ್ರತಕ್ಕೂ ಮೂರು ದಿನ ಮೊದಲಿನಿಂದಲೂ ಮಹಿಳೆಯರು ಪತಿಯ ಆಯುಷ್ಯ ವೃದ್ಧಿಗೋಸ್ಕರ ಉಪವಾಸ ವ್ರತ ಕೈಗೊಳ್ಳುವ ಪರಿಪಾಠವಿದೆ. ಇನ್ನೂ ಕೆಲವೆಡೆ ವ್ರತದ ದಿನವಷ್ಟೇ ಉಪವಾಸ ಮಾಡುತ್ತಾರೆ. ಹುಣ್ಣಿಮೆ ಮುಗಿದು ಪಾಡ್ಯ ಶುರುವಾದ ಮೇಲೆಯೇ ಆಹಾರ ಸೇವಿಸುತ್ತಾರೆ.
ಪೂಜೆ ಹೇಗೆ?
ವ್ರತದ ದಿನ ಬೆಳಿಗ್ಗೆ ನಸುಕಿನಲ್ಲೇ ತಲೆಸ್ನಾನ ಮಾಡಿ, ಮಡಿಬಟ್ಟೆಯನ್ನುಟ್ಟು ವ್ರತ ಆರಂಭಿಸುತ್ತಾರೆ. ಕೆಲವರು ಈ ಹಬ್ಬದ ಸಮಯದಲ್ಲಿ ಮಣೆಯ ಮೇಲೆ ಅಥವಾ ಮನೆಯ ಗೋಡೆಯ ಮೇಲೆ ಯಮ, ಸಾವಿತ್ರಿ, ಸತ್ಯವಾನ, ಆಲದ ಮರಗಳನ್ನು ಗಂಧದಲ್ಲಿ ಬರೆಯುತ್ತಾರೆ. ನಂತರ ನೆಲದ ಮೇಲೆ ಅಕ್ಕಿಯನ್ನು ಹರವುತ್ತಾರೆ. ಸಾವಿತ್ರಿ ಮತ್ತು ಸತ್ಯವಾನನ ಬೊಂಬೆ ಅಥವಾ ಮೂರ್ತಿಯನ್ನು ಬಟ್ಟಲಿನಲ್ಲಿಟ್ಟು ಪೂಜಿಸುತ್ತಾರೆ. ಗಂಧದ ಬಟ್ಟಲಾದರೆ ಶ್ರೇಷ್ಠ. ಜೊತೆಗೆ ಆಲದ ಎಲೆಗಳನ್ನು ಇಟ್ಟು ಮಂತ್ರ ಹೇಳುತ್ತಾ ಪೂಜಿಸುತ್ತಾರೆ.
ಆಲದ ಮರಕ್ಕೆ ಪೂಜೆ
ಇವಿಷ್ಟು ಮನೆಯೊಳಗಾದರೆ ಮನೆಯ ಹೊರಗೆ ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರದ ಸುತ್ತ ದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ. ಹಿರಿಯ ಮಹಿಳೆಯರು ಕಿರಿಯ ಮಹಿಳೆಯರಿಗೆ, 'ನೀನೂ ಸಾವಿತ್ರಿಯಂತಾಗು' ಎಂದು ಹಾರೈಸುತ್ತಾರೆ. ಈ ವ್ರತವನ್ನು ಪ್ರತಿವರ್ಷ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇ ಆದಲ್ಲಿ ಪತಿ ಏಳು ಜನ್ಮದವರೆಗೂ ಆಯುರಾರೋಗ್ಯ ಹೊಂದುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ.
ವೈಜ್ಞಾನಿಕವಾಗಿ ಯೋಚಿಸಿದರೆ...
ವೈಜ್ಞಾನಿಕವಾಗಿ ಯೋಚಿಸುವುದಕ್ಕೆ ಹೋದರೆ ಈ ವ್ರತದಲ್ಲಿ ಸಾವಿತ್ರಿ ಮತ್ತು ಸತ್ಯವಾನ ಎಂದರೆ ಭೂಮಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ಪ್ರತಿವರ್ಷವೂ ಭೂಮಿ ಒಣಗಿ ಸಾಯುತ್ತದೆ. ನಂತರ ನಿಸರ್ಗದ ನಿಯಮದಿಂದಾಗಿ ಮಳೆ ಸುರಿದು ಮತ್ತೆ ಹಸಿರಾಗಿ ಜೀವಕಳೆ ಪಡೆಯುತ್ತದೆ. ಹೀಗೆ ಸತ್ತು, ಹುಟ್ಟುವ, ಮತ್ತೆ ದೀರ್ಘಾಯುಷಿಯಾಗುವ ಪ್ರಕ್ರಿಯೆಯನ್ನೇ ಸಾಂಕೇತಿಕವಾಗಿ ವಟ ಸಾವಿತ್ರಿ ವ್ರತವನ್ನಾಗಿ ಆಚರಿಸುತ್ತಾರೆ ಎಂಬುದು ಭಾರತದ ಪುರಾಣ ಶಾಸ್ತ್ರಜ್ಞ ಬಿ ಎ ಗುಪ್ತೆ ಅವರ ಅಭಿಪ್ರಾಯ.
ಆಧುನಿಕ ಕಾಲದಲ್ಲಿ ವ್ರತಾಚರಣೆ
ಆಧುನಿಕ ಕಾಲದಲ್ಲಿ ಮಹಿಳೆಯರು ಹೊಸ ಬಟ್ಟೆ, ಚಿನ್ನದ ಒಡವೆಗಳನ್ನು ತೊಟ್ಟು, ವ್ರತ ಆರಂಭಿಸುತ್ತಾರೆ. ಬಿಳಿ ದಾರವನ್ನು ಆಲದ ಮರಕ್ಕೆ ಕಟ್ಟಿ, ಇಡೀ ದಿನ ಉಪವಾಸ ವ್ರತ ಆಚರಿಸುತ್ತಾರೆ.
ಆಲದ ಮರವೇ ಏಕೆ?
ವಟ ವೃಕ್ಷ ಎಂದರೆ ಆಲದ ಮರ. ಆಲದ ಮರದ ಕೆಳಗೇ ಸತ್ಯವಾನನ ದೇಹವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತಿದ್ದಳು ಸಾವಿತ್ರಿ. ಯಮನನ್ನು ಬೇಡಿದ್ದು ಸಹ ಇಲ್ಲಿಯೇ. ನಂತರ ಯಮ ಸತ್ಯವಾನನಿಗೆ ದೀರ್ಘಾಯುಷ್ಯವನ್ನು ನೀಡಿದ್ದೂ ಇದೇ ಮರದ ಕೆಳಗೇ ಆದ್ದರಿಂದ ಈ ದಿನ ವಟ ವೃಕ್ಷವನ್ನೂ ಪೂಜಿಸಲಾಗುತ್ತದೆ.