ಬೆಂಗಳೂರಿನಲ್ಲಿ ಶಾರುಖ್ ವಧೆ!
*ಮಲೆನಾಡಿಗ
ರಂಜಾನ್ ತಿಂಗಳಲ್ಲಿ ರೋಜಾ(ಉಪವಾಸ) ಮಾಡಿ ದಣಿದ ಉದರಗಳನ್ನು ಕೊಬ್ಬಿದ ಕುರಿ ಮಾಂಸದ ಛರ್ಬಿಯನ್ನು ಕತ್ತರಿಸುವುದರ ಮೂಲಕ ಸಂತಸಗೊಳಿಸಲಾಗುತ್ತದೆ. ಮುಂಜಾನೆ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಪ್ರಸಾದ ರೂಪದಲ್ಲಿ ಪುಷ್ಕಳ ಭೋಜನ ಸಿದ್ಧವಾಗಿರುತ್ತದೆ. ಸಿಹಿ ತಿನಿಸು, ಹಣ್ಣುಗಳು ಹಾಗೂ ಬಿರಿಯಾನಿ ಮಾಡುವುದು ಸಾಮಾನ್ಯ. ಎಲ್ಲಕ್ಕೂ ಮೂಲವಸ್ತುವಾದ ಬಕ್ರಾಗಳಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಬಕ್ರಾಗಳಿಗೆ ನಾನಾ ಜಾತಿ, ವೈವಿಧ್ಯಮಯ ಹೆಸರುಗಳನ್ನು ಇಟ್ಟು ಗಿರಾಕಿಗಳನ್ನು ಆಕರ್ಷಿಸುವುದು ಒಂದು ಕಲೆ.
ಬಕ್ರೀದ್ ಬಂದರೆ ಸಲ್ಮಾನ್, ಶಾರುಖ್, ಲಾಲೂ, ಟೈಗರ್ ಸೇರಿದಂತೆ ಹಲವು ಹೆಸರುಗಳು ಕುರಿಗಳಿಗೆ ಇಡಲಾಗುತ್ತದೆ. ಆಕಾರ, ರೂಪಕ್ಕೆ ತಕ್ಕಂತೆ ಹೆಸರು ಇಟ್ಟು ಗಿರಾಕಿಯನ್ನು ಆಕರ್ಷಿಸುತ್ತಾರೆ. ಮಟನ್ ಸ್ಟಾಲ್ ಗೆ ಹೋಗಿ ಕುರಿ ಮಾಂಸ ತಂದು ತಿನ್ನುವುದು ಸಾಮಾನ್ಯ ಸಂಗತಿ. ಆದರೆ ಬಕ್ರೀದ್ ವೇಳೆಯಲ್ಲಿ ಕುರಿಯನ್ನು ಕೊಂಡು ತಂದು ಬೇಕಾದ ರೀತಿಯಲ್ಲಿ ಬಳಸುವುದು ವಿಶೇಷ. ಕುರಿಯ ಮಾಂಸ ಹೊಟ್ಟೆ ತುಂಬಿಸಿದರೆ ಚರ್ಮ, ಗೊಬ್ಬರ,ಹಾಲು ಬೇರೆ ಉಪಯೋಗಕ್ಕೆ ಬರುತ್ತದೆ.
ನಿನ್ನೆ ಸೋಮವಾರ ಶಿವಾಜಿನಗರದ ಕರ್ನಾಟಕ ಮಟನ್ ಸ್ಟಾಲ್ ನ ದರದಂತೆ ಕೆ.ಜಿ ಕುರಿ ಮಾಂಸಕ್ಕೆ 220 ರು ಇತ್ತು. ಇದರಲ್ಲಿ ಒಂದು ಅನುಕೂಲವೆಂದರೆ, ಕಾಲು , ತಲೆ ಹೀಗೆ ಅಂಗ ಅಂಗಗಳಿಗೆ ಬೇರೆ ಬೇರೆ ರೇಟ್ ಇದೆ. ಕಾಲಿನ ಮಾಂಸಕ್ಕೆ 60 ರು, ತಲೆ ಮಾಂಸಕ್ಕೆ 110 ರು, ಬೋಟಿ ಮಾಂಸಕ್ಕೆ 70 ರು ಇತ್ತು. [ತಲೆ ಮಾಂಸದ ಸೂಪ್ ಮಾಡಿ ಸವಿಯುವವರಿಗೆ ಒಂದು ಸುದ್ದಿ. ಕನ್ನಡದ ಹೆಮ್ಮೆಯ ನಟ ರಾಜ್ ಕುಮಾರ್ ಅವರಿಗೆ ತಲೆ ಮಾಂಸದ ಸೂಪ್ ಅಂದರೆ ಪಂಚಪ್ರಾಣವಾಗಿತ್ತು.]
ಕುರಿಗೂ
ಬಂತೂ
ಒಂದು
ಕಾಲ
ಕುರಿ ಬೆಲೆ ನಿರ್ಧಾರ, ಆಯ್ಕೆ ಬಗ್ಗೆ ಹೇಳಬೇಕು. ಮೊದಲೇ ಹೇಳಿದಂತೆ ಒಳ್ಳೆ ತುಪ್ಪಟ ಇರೋ ಕುರಿಗೆ ಸಲ್ಮಾನ್, ಶಾರುಖ್ , ಲಾಲೂ , ಟೈಗರ್ ಪ್ರಭಾಕರ್ ಹೆಸರುಗಳನ್ನು ಇಡುತ್ತಾರೆ. ಸ್ವಲ್ಪ ನಕ್ರಾ ಮಾಡೊ ಬಕ್ರಾಗಳಿಗೆ ವಿಲನ್ ಗಳ ಹೆಸರು ಖಾಯಂ. ಕುರಿ ತಜ್ಞ(ಇವನ ಸಹಾಯವಿಲ್ಲದಿದ್ದರೆ ನೀವು ಬಕ್ರಾ ಆಗೋದು ಖಂಡಿತಾ)ನ ಜತೆ ಹೋಗಿ ವ್ಯಾಪಾರ ಕುದುರಿಸಬೇಕು. ಅವನು ಕುರಿಯ ಕಿವಿ, ಕತ್ತು, ಹಲ್ಲು, ಮರ್ಮಾಂಗ ಭಾಗದಲ್ಲಿ ಮುಟ್ಟಿ, ಬೇಕಾದ ಪರೀಕ್ಷೆ ಮಾಡಿ ಆ ಕುರಿಯ ಯೋಗ್ಯತೆಯನ್ನು, ಬೆಲೆಯನ್ನು ನಿರ್ಧರಿಸುತ್ತಾನೆ.
ಉತ್ತರ ಭಾರತದಲ್ಲಿ ಕುರಿಗಳ ರೇಟು ಲಕ್ಷ ದಾಟುತ್ತೆ ಸಾಬ್, ಸುಮಾರು ಒಂದೂವರೆ ವರ್ಷದ 150 ಕೆಜಿ ಬಕ್ರಾ 1.5 ಲಕ್ಷಗೆ ಹೋಗಿದೆ ಅಂತಾನೆ ಚಾಮರಾಜಪೇಟೆ ರಹೀಂ. ಸರಿ ಯಾವ ಹೆಸರಿಟ್ಟಿದ್ರೀ ಅದಕ್ಕೆ ಅಂದ್ರೆ. ಸಲ್ಮಾನ್ ಸಾಬ್, ಸಲ್ಮಾನ್ , ಶಾರುಖ್ ಬಕ್ರಾಗಳಿಗೆ ಬಹುತ್ ಡಿಮ್ಯಾಂಡ್ ಸಾಬ್ ಅಂದ.
ಕುರಿಗಳ ಜೊತೆಗೆ ಬಡಕಲು ಮೇಕೆಗಳಿಗೂ ಬೇಡಿಕೆ ಬಂದು ಬಿಡುತ್ತದೆ. 30-40 ಕೆಜಿ ಮೇಕೆಗಳಿಗೆ 4ರಿಂದ 6 ಸಾವಿರ ಇದೆ ಈಗ ಬೆಲೆ . ಮೇಕೆ ಹಾಲು ಕೂಡ ಉತ್ತಮ ಎಂದು ನಂಬಿಕೆಯಿದೆ. ರೇಟು ಎಷ್ಟೇ ಹೆಚ್ಚಾದರೂ ವರ್ಷಕ್ಕೆ ಒಮ್ಮೆ ಬರುವ ಹಬ್ಬದ ದಿನ ಸರಿಯಾದ ಹೊಟ್ಟೆ ಪೂಜೆ ಆಗದಿದ್ದರೆ ಹೇಗೆ ಹೇಳಿ. ಜನ ಹಣದುಬ್ಬರದ ನಡುವೆಯೂ ಬಕ್ರಾ ಖರೀದಿಗೆ ಮುನ್ನುಗ್ಗುತ್ತಿದ್ದ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು.