ಕುದೇರು ಗ್ರಾಮದ ಕಡಲೆ ಹಿಟ್ಟಿನ ಗೌರಮ್ಮ
1913ರಲ್ಲಿ ಈ ಗೌರಿ ದೇವಾಲಯವನ್ನು ನಿರ್ಮಿಸಲಾಗಿದ್ದು, ಇಲ್ಲಿ ಗಣೇಶನಿಗಿಂತ ಗೌರಮ್ಮನಿಗೆ ಹೆಚ್ಚಿನ ಪ್ರಾಧಾನ್ಯತೆ. ಹಬ್ಬ ಆರಂಭವಾದ ಮೊದಲ ದಿನದಿಂದ 12 ದಿನಗಳ ಕಾಲ ಗೌರಿಗೆ ನಿತ್ಯ ಪೂಜೆ. ಈ ಸಂದರ್ಭ ನವದಂಪತಿಗಳು ಬಾಗಿನ ಅರ್ಪಿಸಿದರೆ, ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲನ್ನು, ಯುವತಿಯರು ಕಂಕಣ ಭಾಗ್ಯಕ್ಕೆ ಮಾಂಗಲ್ಯವನ್ನು ಹರಕೆಯಾಗಿ ಅರ್ಪಿಸುತ್ತಾರೆ.
ಇದರೊಂದಿಗೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ದೀಪೋತ್ಸವ, ದೀಪಾ ರಾಧನೆ ಸೇರಿದಂತೆ ವಿವಿಧ ನೆರವೇರಿಸುತ್ತಾರೆ. ಪ್ರತಿ ವರ್ಷವೂ ಗೌರಿ-ಗಣೇಶ ಹಬ್ಬದ ಸಂದರ್ಭ ಮೈಸೂರು, ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿ ಗೌರಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಪ್ರಸಕ್ತ ವರ್ಷ ಸೆ. 11ರಂದು ಗೌರಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಸೆ.22 ರಂದು ರಾತ್ರಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಗ್ರಾಮದ ಮಲ್ಲಿಕಾರ್ಜುನಸ್ವಾಮಿ ದೇವಾಲಯದಿಂದ ಸ್ವರ್ಣಗೌರಿ ದೇವಾಲಯದವರೆಗೆ ಅಡ್ಡ ಪಲ್ಲಕ್ಕಿ ಉತ್ಸವ ಕೂಡ ನಡೆಯುತ್ತದೆ.
ಮಲ್ಲಿಕಾರ್ಜುನ ಸ್ವಾಮಿ ಗೌರಿಯನ್ನು ತವರಿನಿಂದ ತನ್ನ ಮನೆಗೆ ಕರೆದೊಯ್ಯಲು ಬಂದಿದ್ದಾನೆ ಎಂದು ಭಾವಿಸಿ, ಮೆರವಣಿಗೆ ಮೂಲಕ ತೆರಳಿ ಯಮನಾ ತಡಿಯಲ್ಲಿ ಗೌರಿ ವಿಗ್ರಹ ವಿಸರ್ಜನೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆ ದಿನ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬರುತ್ತದೆ.
1913 ರಲ್ಲಿ ಸಣ್ಣ ಗುಡಿಯೊಳಗಿದ್ದ ಗೌರಿಗೆ 15 ವರ್ಷಗಳ ಹಿಂದೆ ದೇವಾಲಯ ನಿರ್ಮಿಸಲಾಗಿದೆ. ಆರಂಭದಲ್ಲಿ ಕಡಲೆ ಹಿಟ್ಟಿನ ಗೌರಮ್ಮ ಎಂದು ಪೂಜಿಸಲಾಗುತ್ತಿತ್ತು. ನಂತರ ಇದನ್ನು ಊರ ಉತ್ಸವವಾಗಿ ಆಚರಿಸುವ ಸಲುವಾಗಿ ವಿಗ್ರಹಕ್ಕೆ ಚಿನ್ನದ ಕವಚ ಹಾಗೂ ಆಭರಣಗಳನ್ನು ತೊಡಿಸಲಾಗಿದ್ದು ಅಂದಿನಿಂದ ಇದು ಸ್ವರ್ಣ ಗೌರಿ ಎಂದು ಪ್ರಸಿದ್ದಿ ಪಡೆಯಿತು ಎಂದು ಪ್ರಧಾನ ಅರ್ಚಕ ನಂಜುಂಡ ಸ್ವಾಮಿ ತಿಳಿಸುತ್ತಾರೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ನಿಮ್ಮ ಆಪ್ತರಿಗೆ ಹೂಗುಚ್ಛ ಕಳಿಸಿ