ಸಾರ್ವಜನಿಕ ಗಣೇಶೋತ್ಸವ ಮಹತ್ವ ಎಲ್ಲಿದೆ?
ನಮ್ಮ ರಾಜ್ಯದ ಬಗ್ಗೆ ಮಾತನಾಡುವುದಾದರೆ, ಎಷ್ಟೋ ಸಂಘಟನೆಗಳು ಸಕ್ರಿಯವಾಗಿ ಈ ಉತ್ಸವವನ್ನು ನಡೆಸಿಕೊಂಡು ಬರುತ್ತಿವೆ. ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿ ಸಾರ್ವಜನಿಕರ ನಂಬಿಕೆಗೆ ಪಾತ್ರವಾಗಿವೆ. ಇಂಥ ಸಂಘಟನೆಗಳು ನಡೆಸುವ ಗಣೇಶೋತ್ಸವಕ್ಕೆ ತಮಗೆ ಕಾರ್ಯಕ್ರಮಕ್ಕೆ ತಗಲುವ ಖರ್ಚುವೆಚ್ಚದ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಇಂಥ ಸಂಘಟನೆಗಳಿಗೆ ಸಹಾಯಹಸ್ತ ಚಾಚುವುದರಿಂದ ಎಲ್ಲವೂ ಸುಸೂತ್ರವಾಗಿ ನಡೆದುಕೊಂದು ಬರುತ್ತಿದೆ.
ಉದಾಹರಣೆಗೆ ಬೆಂಗಳೂರು ನಗರದ ನರಸಿಂಹರಾಜ ಕಾಲೋನಿಯಲ್ಲಿರುವ ವಿದ್ಯಾರಣ್ಯ ಯುವಕರ ಸಂಘ, ರಾಗಿಗುಡ್ಡದ ಸರ್ವಜ್ಞ ಮಿತ್ರ ಮಂಡಳಿ, ಜೆಪಿ ನಗರ ವಿನಾಯಕ ಬಳಗ ಮುಂತಾದ ರಾಜ್ಯದ ಅನೇಕ ಸಂಘಟನೆಗಳು ನಡೆಸಿಕೊಂಡು ಬರುತ್ತಿರುವ ಗಣೇಶೋತ್ಸವ ಮತ್ತು ವಿಸರ್ಜನೆ ಮೆರವಣಿಗೆಗಳು ಆಸುಪಾಸಿನ ಜನರಿಗೆ ಹಬ್ಬದ ವಾತಾವರಣ ಸೃಷ್ಟಿಸುತ್ತವೆ.
ಆದರೆ ಇಲ್ಲಿ ಚರ್ಚಿಸಬೇಕಾದಂತ ಗಂಭೀರ ವಿಚಾರವೇನಂದರೆ, ಗೂಂಡಾಗಿರಿ ಮೂಲಕ ಅಥವಾ ಬಲವಂತವಾಗಿ ಚಂದಾ ವಸೂಲು ಮಾಡಿ ಗಣೇಶೋತ್ಸವ ನಡೆಸಿ, ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ನಮ್ಮ ಹಿಂದೂ ಸಂಪ್ರದಾಯಕ್ಕೆ ಇಂತಹ ಸಂಘಟನೆಗಳಿಂದ ಅಪಚಾರವೆಸಗಿದಂತಾಗುವುದಿಲ್ಲವೇ? ಹಿಂದೂ - ಅಲ್ಪಸಂಖ್ಯಾತರ ನಡುವಣ ಸಾಮರಸ್ಯಕ್ಕೆ ಅದೆಷ್ಟೋ ಗಣೇಶೋತ್ಸವ ಈ ಹಿಂದೆ/ಇಂದಿಗೂ ವೇದಿಕೆಯಾಗಿದ್ದು/ವೇದಿಕೆಯಾಗಿರುವುದು ತಮಗೆಲ್ಲಾ ತಿಳಿದಿರುವ ವಿಚಾರ.
* ಉತ್ಸವ ನಡೆಸುವ ಪ್ರದೇಶದಲ್ಲಿರುವ ಸಂಸ್ಥೆಯ ಅನುಮತಿ ಇಲ್ಲದೆ ಆಮಂತ್ರಣ ಪತ್ರದಲ್ಲಿ ಪ್ರೋತ್ಸಾಹಕರೆಂದು ಹೆಸರು ಸೇರಿಸಿ ಸಾವಿರಾರು ರುಪಾಯಿ ಡಿಮ್ಯಾಂಡ್ ಮಾಡುವುದು, ಕೊಡಲು ನಿರಾಕರಿಸಿದರೆ ರೌಡಿ ವರ್ತನೆ ತೋರುವುದು.
* ಗಣೇಶ ವಿಸರ್ಜನೆಯ ಸಮಯದಲ್ಲಿ ಬಾರ್ ನಲ್ಲಿರುವ ಮದ್ಯ ಖಾಲಿಯಾಗುವ ತನಕ ಕುಡಿದು ಕುಪ್ಪಳಿಸಿ ಅಹಂಕಾರದ ಪರಮಾವಧಿ ತೋರುವುದು.
* ಮನೆ ಮನೆಗೆ ತೆರಳಿ ಮನೆಯವರ ಪರಿಸ್ಥಿತಿ ಅರಿಯದೆ ತಾವು ಬರೆದು ಹರಿದುಕೊಟ್ಟ ರಸೀದಿನಲ್ಲಿ ನಮೂದಿಸಿದ ಹಣ ಪಾವತಿಸಬೇಕೆಂದು ಜಬರ್ದಸ್ತಿ ನಡೆಸುವುದು (ಬೆಂಗಳೂರಿನ ಕೆಲ ವಲಯದಲ್ಲಿ ಇದು ಚಾಲ್ತಿಯಲ್ಲಿದೆ).
* ಉತ್ಸವದ ಮಹತ್ವ ಅರಿಯದೆ ಬರೀ ಮನರಂಜನೆಗಾಗಿ ಆರ್ಕೆಸ್ಟ್ರಾ ನಡೆಸುವುದು. ಅಲ್ಲೂ ಕೂಡ ರಾಜ್, ವಿಷ್ಣು, ಶಂಕರನಾಗ್ ಚಿತ್ರದ ಹಾಡು ಮಾತ್ರ ಹಾಡಬೇಕೆನ್ನುವ ನಿಬಂಧನೆ. (ತಮಿಳು, ತೆಲುಗು ಚಿತ್ರದ ಎಷ್ಟು ಹಾಡು ಹಾಡಿದರೂ ಲೆಕ್ಕಕ್ಕಿಲ್ಲ, ಕನ್ನಡದ ಹಾಡಿಗೆ ಮಾತ್ರ ನಿರ್ಬಂಧ)
* ಜಾನಪದ ಕಲಾವಿದರನ್ನು ಕರೆಸಿ ಕುಣಿಸಿ ಪೇಮೆಂಟ್ ನೀಡದೇ ಸತಾಯಿಸುವುದು.
* ವಿಸರ್ಜನೆಯ ನಂತರ ಖರ್ಚುವೆಚ್ಚ ಮತ್ತು ಉಳಿದ ಹಣದ ಬಟವಾಡೆಗೆ ಕಿತ್ತಾಟ.
ಇತ್ಯಾದಿ.......
ಮೇಲೆ ಬರೆದಿರುವ ಹೇಳಿಕೆಗಳು (ಇನ್ನೂ ಹಲವಾರು ಇರಬಹುದು) ಓದುಗರ ಗಮನಕ್ಕೂ ಬಂದಿರಬಹುದು. ಮತ್ತೆ ಮತ್ತೆ ಹೇಳುವಂತೆ ಇಂದಿಗೂ ಬಹಳಷ್ಟು ಸಂಘಟನೆಗಳು ಈ ಗಣೇಶೋತ್ಸವ ಸಾರ್ವಜನಿಕ ಕಾರ್ಯಕ್ರಮವನ್ನು ಅನ್ನದಾನಕ್ಕೆ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ, ಆರ್ಥಿಕವಾಗಿ ಹಿಂದುಳಿದಿರುವ ನಾಗರಿಕರ ಆಸ್ಪತ್ರೆ ಖರ್ಚು ಭರಿಸುವುದಕ್ಕಾಗಿ, ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಪುರಸ್ಕರಿಸುವುದಕ್ಕೆ, ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವುದಕ್ಕೆ ವೇದಿಕೆಯಾಗಿ ಬಳಸಿಕೊಳ್ಳುತ್ತಿರುವುದು ಹೆಮ್ಮಯ ಸಂಗತಿ.
ಆದರೆ.... ರಾಜ್ಯದಲ್ಲಿ ಇಂಥಾ ಸಂಘಟನೆಗಳು ಎಷ್ಟಿವೆ? ಗಣೇಶ ಹಬ್ಬದ ಪ್ರಯುಕ್ತ ನಿಮ್ಮ ಆಪ್ತರಿಗೆ ಹೂಗುಚ್ಛ ಕಳಿಸಿ