ದೀಪಾವಳಿಯ ಹಿಂದಿದೆ ಹಲವಾರು ಪುರಾಣೈತಿಹಾಸಿಕ ಕತೆ
ಸಮಸ್ತ ಹಿಂದುಗಳೂ ಶ್ರದ್ಧೆ ಭಕ್ತಿಯಿಂದ ಆಚರಿಸುವ ದೀಪಾವಳಿಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಹಿಂದುಗಳಷ್ಟೇ ಅಲ್ಲದೆ ಜೈನ, ಬೌದ್ಧ, ಸಿಕ್ಖ್ ಮತೀಯರೂ ಆಚರಿಸುವ ದೀಪಾವಳಿಯ ಹಿಂದೆ ಹಲವಾರು ಪುರಾಣೈತಿಹಾಸಿಕ ಕತೆಗಳಿವೆ.
ದೀಪಾವಳಿಯ ಆಚರಣೆಯೂ ಒಂದೆಡೆಯಿಂದ ಮತ್ತೊಂದೆಡೆಗೆ ಭಿನ್ನವಾಗಿದ್ದು, ಭಾರತದಲ್ಲೇ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಹಬ್ಬದ ಆಚರಣೆ ನಡೆಯುತ್ತದೆ. ಆಚರಣೆ ಭಿನ್ನವಾಗಿದ್ದರೂ ಉದ್ದೇಶ ಮಾತ್ರ, ದೀಪ ಬೆಳಗುವ ಮೂಲಕ ಅಜ್ಞಾನದ ಕತ್ತಲಿನಿಂದ ಮನುಷ್ಯನನ್ನು ಸುಜ್ಞಾನದ ಬೆಳಕಿನತ್ತ ತರುವುದೇ ಆಗಿದೆ.
ದೇಶದ ಹಲವು ರಾಜ್ಯಗಳು ಪಟಾಕಿ ನಿಷೇಧಿಸಿ, ಪರಿಸರ ಸ್ನೇಹಿ ದೀಪಾವಳಿಗೆ ಸಂಕಲ್ಪ ಮಾಡುತ್ತಿರುವುದರಿಂದ ಈ ದೀಪಾವಳಿ ಕೊಂಚ ವಿಭಿನ್ನ ಅನ್ನಿಸಿದೆ. ದಕ್ಷಿಣ ಭಾರತದಲ್ಲಿ ಮೂರು ದಿನ ಮತ್ತು ಉತ್ತರ ಭಾರತದಲ್ಲಿ ಐದು ದಿನ ಅದ್ಧೂರಿಯಾಗಿ ಆಚರಿಸಲ್ಪಡುವ ದೀಪಾವಳಿಯ ಹಿಂದಿರುವ ಕತೆಗಳು ಇಲ್ಲಿವೆ.

ಅಯೋಧ್ಯೆಗೆ ಹಿಂತಿರುಗಿದ ರಾಮ
ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂತಿರುಗಿದ ದಿನವೇ ದೀಪಾವಳಿಯ ದಿನ ಎಂಬುದು ಉತ್ತರ ಭಾರತೀಯರ ನಂಬಿಕೆ. ಆ ನಂಬಿಕೆಯಲ್ಲೇ ಉತ್ತರ ಭಾರತೀಯರು ಹಬ್ಬ ಆಚರಿಸುತ್ತಾರೆ. ಚಿಕ್ಕಮ್ಮ ಕೈಕೇಯಿಯ ಆಣತಿಯಂತೆ 14 ವರ್ಷ ವನವಾಸಕ್ಕೆ ತೆರಳಿದ್ದ ಶ್ರೀರಾಮ, ಪತ್ನಿ ಸೀತೆಯನ್ನು ಅಪಹರಿಸಿದ್ದ ಲಂಕಾಧಿಪತಿ ರಾವಣನನ್ನು ಸೋಲಿಸಿ, ಮತ್ತ ಅಯೋಧ್ಯೆಗೆ ವಾಪಸಾದ ದಿನ ಇಂದು ಎಮಬುದು ನಂಬಿಕೆ.

ಶ್ರೀಕೃಷ್ಣನಿಂದ ನರಕಾಸುರ ವಧೆ
ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಆಶ್ವಯುಜ ಮಾಸದ ಕೃಷ್ಣ ಪಕ್ಷದ 14 ನೇ ದಿನ ನರಕಾಸುರನನ್ನು ವಧಿಸಿದ ಎಂಬುದು ದಕ್ಷಿಣ ಭಾರತೀಯರ ನಂಬಿಕೆ. ಅದಕ್ಕೆಂದೇ ಆ ದಿನವನ್ನು ನರಕಚತಿರ್ದಶಿ ಎಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದರ ಮರುದಿನ ಅಂದರೆ ಅಮಾವಾಸ್ಯೆಯ ದಿನ ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ಪಾಡ್ಯದಂದು ಬಲಿಪಾಡ್ಯಮಿ ಆಚರಿಸಿ, ವಾಮನನಿಂದ ಮೋಕ್ಷ ಪಡೆದ ಬಲಿಚಕ್ರವರ್ತಿಯ ತ್ಯಾಗವನ್ನು ನೆನೆಯುತ್ತಾರೆ.

ಬಲಿಚಕ್ರವರ್ತಿಯ ನೆನೆಕೆ
ರಕ್ಕಸನಾಗಿದ್ದರೂ ದಾನಶೂರನಾಗಿದ್ದ ಬಲಿಚಕ್ರವರ್ತಿಯು ವಾಮನಾವತಾರದಲ್ಲಿದ್ದ ವಿಷ್ಣುವಿನ ಮೂರಡಿ ಜಾಗದ ಕೋರಿಕೆಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ ನೆನಪಿಗಾಗಿ ಪಶ್ಚಿಮ ಭಾರತದಲ್ಲಿ ಈ ಹಬ್ಬವನ್ನು ಬಲಿಚಕ್ರವರ್ತಿಯ ಹಬ್ಬವನ್ನಾಗಿ ಆಚರಿಸುತ್ತಾರೆ.

ಜೈನರಲ್ಲಿ ದೀಪಾವಳಿ
ಮಹಾರಾಜನಾಗಿದ್ದ ಮಹಾವೀರನಿಗೆ ಕ್ರಿ.ಪೂ.527ರ ಇದೇ ದಿನ ಜ್ಞಾನೋದಯವಾದ್ದರಿಂದ ಜೈನ ಮತೀಯರು ದೀಪಾವಳಿಯನ್ನು ಮಹಾವೀರರ ಜ್ಞಾನೋದಯದ ದ್ಯೋತಕವಾಗಿ ಆಚರಿಸುತ್ತಾರೆ.

ಸಿಕ್ಖರಲ್ಲೂ ಆಚರಣೆ
ಆರನೇ ಸಿಕ್ಖ್ ಗುರುವಾಗಿದ್ದ ಗುರು ಹರ್ಗೋಬಿಂದ್ ಜೀ ಅವರು ಸೆರೆಮನೆಯಿಂದ ಬಿಡುಗಡೆಯಾದ ದಿನ ಇದಾದ್ದರಿಂದ ಸಿಕ್ಖರೂ ಈ ಹಬ್ಬವನ್ನು ಪವಿತ್ರ ಹಬ್ಬವನ್ನಾಗಿ ಆಚರಿಸುತ್ತಾರೆ.












Click it and Unblock the Notifications