ಐಶ್ವರ್ಯ ಪ್ರಾಪ್ತಿಗೆ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮಿ ಪೂಜೆ ವಿಧಾನ
Recommended Video
ಲಕ್ಷ್ಮೀ ಎಂದರೆ ಹಣ ಕೊಡುವ ಅಥವಾ ಸಂಪತ್ತಿಗೆ ಅಷ್ಟೇ ದೇವತೆ ಅಲ್ಲ. ಆದರೆ ಆ ಲಕ್ಷ್ಮೀ ದೇವಿಯನ್ನು ನಾವು ಪ್ರಧಾನವಾಗಿ ಆರಾಧಿಸುವುದು ಹಣ, ಸಂಪತ್ತು ಹಾಗೂ ಐಶ್ವರ್ಯ ಇತ್ಯಾದಿಗಳಿಗಾಗಿಯೇ ಎನ್ನುವುದು ಸಹ ಅಷ್ಟೇ ಸತ್ಯ. ಹೀಗೆ ಐಶ್ವರ್ಯ ಪ್ರಾಪ್ತಿಗಾಗಿಯೇ ಲಕ್ಷ್ಮೀ ದೇವಿಯನ್ನು ಆರಾಧಿಸುವುದು ಎನ್ನುವುದಾದರೆ, ಆ ಪೂಜೆ ಹೇಗೆ ಇರಬೇಕು ಎನ್ನುವುದು ಸಹ ಅಷ್ಟೇ ಮುಖ್ಯ.
ದೀಪಾವಳಿ ಆಚರಣೆ ಹಿಂದಿದೆ ಪುರಾಣದ ಬೆಸುಗೆ!
ಆಶ್ವಯುಜ ಮಾಸ ಎಂದರೆ ದೇವಿ ಆರಾಧನೆ ಮಾಡಲು ವಿಶೇಷವಾದ ಮಾಸ. ಈ ಮಾಸದ ಶುಕ್ಲ ಪಕ್ಷದ ಮೊದಲ ಹತ್ತು ದಿನ ದುರ್ಗಾ ದೇವಿಯ ನವರಾತ್ರಿ ಆಚರಣೆ ಮಾಡಿ, ಹತ್ತನೇ ದಿನದಂದು ವಿಜಯ ದಶಮಿ ಆಚರಿಸುತ್ತೇವೆ. ಆಗ ಮಹಾ ನವಮಿಯಂದು ಆಯುಧ ಪೂಜೆ ಎಂದು ಹೇಳಿ ನಿತ್ಯ ಉಪಯೋಗದ ವಸ್ತುಗಳನ್ನು ಪೂಜಿಸಿದರೆ, ಆಶ್ವಯುಜ ಕೃಷ್ಣ ಪಕ್ಷದ ಅಮಾವಾಸ್ಯೆಯಂದು (ಅಕ್ಟೋಬರ್ 19, ಗುರುವಾರ) ಲಕ್ಷ್ಮೀ ಪೂಜೆ ಮಾಡಬೇಕು.
ಇಡೀ ವರ್ಷದಲ್ಲಿ ಪ್ರತ್ಯಕ್ಷವಾಗಿ ಹಣದ ಸ್ವರೂಪದಲ್ಲೇ ಲಕ್ಷ್ಮೀ ದೇವಿಯನ್ನು ಆರಾಧಿಸುವ ಏಕೈಕ ದಿನ ಇದು. ಈ ದಿನ ಸಂಧ್ಯಾಕಾಲದಲ್ಲಿ ಲಕ್ಷ್ಮೀ ದೇವಿ ಪೂಜೆ ಮಾಡಲು ಉಪಯುಕ್ತ. ವ್ಯಾಪಾರ ಮಾಡುವ ಎಲ್ಲರೂ ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆಯನ್ನು ತಪ್ಪದೇ ಮಾಡಬೇಕು.
ಧನ ತ್ರಯೋದಶಿ: ದೀಪ ದಾನ, ಚಿನ್ನ- ಬೆಳ್ಳಿ ಖರೀದಿ ಶ್ರೇಷ್ಠ
ಅಂಗಡಿಯಲ್ಲಿ ದಕ್ಷಿಣ ಹೊರತು ಪಡಿಸಿ ಉಳಿದ ಯಾವುದಾದರೂ ದಿಕ್ಕಿಗೆ ಲಕ್ಷ್ಮೀ ದೇವಿಯ ಒಂದು ಚಿತ್ರ ಪಟ ಇಟ್ಟು, ಅದರ ಮುಂದೆ ಒಂದು ಚಿಕ್ಕ ಬಟ್ಟಲಿನಲ್ಲಿ (ಟೊಳ್ಳು ಇಲ್ಲದ) ಮಹಾಲಕ್ಷ್ಮಿ ವಿಗ್ರಹವನ್ನು ಇಡಬೇಕು. ಆ ವಿಗ್ರಹದ ಮುಂದೆ ಗಲ್ಲಾ ಪೆಟ್ಟಿಗೆ ಅಥವಾ ಒಂದು ಪಾತ್ರೆಯಲ್ಲಿ (ಚಿಲ್ಲರೆ ಕಾಸು ಹಾಗೂ ಹಣದ ಕಂತೆ) ಹಣ ತುಂಬಿ ಇಡಬೇಕು.
ವ್ಯಾಪಾರಕ್ಕೆ ಬಂದರೆ ವಾಪಸ್ ಕಳುಹಿಸಬಾರದು
ದೇವರ ಮುಂದೆ ಹಣದ ಜೊತೆಯಲ್ಲಿ ಅಂಗಡಿಯ ರಶೀದಿ ಪುಸ್ತಕ ಇಡುವುದನ್ನು ಮರೆಯದಿರಿ. ಅದಕ್ಕೂ ಅರಿಶಿನ- ಕುಂಕುಮ ಹಚ್ಚಿ, ಪೂಜಿಸಿ. ದೀಪಗಳನ್ನು ಎರಡೂ ದಿಕ್ಕಿನಲ್ಲಿ ಹಚ್ಚಿ ಭಕ್ತಿ ಭಾವದಿಂದ ಪೂಜಿಸಬೇಕು. ಈ ಸಮಯದಲ್ಲಿ ಅಂಗಡಿಗೆ ಯಾರಾದರೂ ವ್ಯಾಪಾರ ಮಾಡಲು ಬಂದರೆ ಅವರಿಗೆ ಇಲ್ಲ ಎಂದು ಕಳುಹಿಸಬಾರದು ಹಾಗೂ ಸಾಲ ಕೊಡಬಾರದು.
ಬೂದುಗುಂಬಳ ನಿವಾಳಿಸಿ, ಒಡೆಯಿರಿ
ಸಿಹಿಯನ್ನು ಎಲ್ಲರಿಗೂ ಹಂಚುವುದನ್ನು ಮರೆಯಬೇಡಿ. ಪೂಜೆ ಮುಗಿದ ನಂತರ ಅಂಗಡಿಗೆ ಒಂದು ಬೂದುಗುಂಬಳಕಾಯಿಯನ್ನು ನಿವಾಳಿಸಿ, ಒಡೆದು ಹಾಕಿ. ಇನ್ನು ಮನೆಯಲ್ಲಿ ಈ ಪೂಜೆ ಮಾಡಿದರೆ ಅತ್ಯುತ್ತಮ. ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡುವವರು. ಬೆಳಗ್ಗೆಯೇ ಮನೆಯನ್ನು ಗೋಮೂತ್ರ ಹಾಕಿ ಶುಚಿಗೊಳಿಸಬೇಕು. ಮನೆಯ ಮುಂದೆ ಸಗಣಿ ಹಾಕಿ ಸಾರಿಸಿ ರಂಗೋಲಿ ಹಾಕಬೇಕು.
ಮಣ್ಣಿನ ಹಣತೆಯ ದೀಪ
ಮನೆಯ ಹೊರ ಆವರಣದಲ್ಲಿ ಸಾಧ್ಯವಾದ ಎಲ್ಲೆಡೆ ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ, ದೀಪ ಹಚ್ಚಿ ಇಡಿ. ಸಂಧ್ಯಾ ಕಾಲದಲ್ಲಿ ಶುಚಿರ್ಭೂತರಾಗಿ (ಕೈಕಾಲು ತೊಳೆದು ಅಥವಾ ಸ್ನಾನ ಮಾಡಿ) ದೇವರ ಮನೆಯಲ್ಲಿ ರಂಗೋಲಿ ಹಾಕಿ, ಅದರ ಮೇಲೆ ಬಾಳೆ ಎಲೆ ಇಟ್ಟು, ಅದಕ್ಕೆ ಅಕ್ಕಿ ಹಾಕಿ ಮಣ್ಣಿನ ಮಡಿಕೆಯ ಅಥವಾ ತಾಮ್ರ ಅಥವಾ ಬೆಳ್ಳಿ ಕಲಶ ಇಡಿ.
ಹಣ-ಒಡವೆಗಳನ್ನು ಇಟ್ಟು ಪೂಜಿಸಬೇಕು
ಅದರ ಒಳಗೆ ಅರಿಶಿನ- ಕುಂಕುಮ, ಮೂರು ವಿಧದ ಪರಿಮಳ ಹೂವು, ಬಿಲ್ವ ಪತ್ರೆ ಎಲೆ ಹಾಗೂ ಬೆಳ್ಳಿ ಅಥವಾ ಬಂಗಾರದ ನಾಣ್ಯ ಹಾಕಿ, ಮಾವಿನ ಸೊಪ್ಪು ಹಾಕಿ, ತೆಂಗಿನಕಾಯಿ ಇಡಬೇಕು. ಒಂದು ರವಿಕೆ ಕಣ ಹಾಕಿ, ಗೆಜ್ಜೆ ವಸ್ತ್ರ ಹಾಕಿಡಬೇಕು. ನಂತರ ಅದರ ಮುಂದೆ ಒಂದು ಬೆಳ್ಳಿ ಬಟ್ಟಲು ಅಥವಾ ಹೊಸದಾದ ಪಾತ್ರೆಯಲ್ಲಿ ನಿಮ್ಮ ಹಣ, ಒಡವೆಗಳನ್ನು ಇಟ್ಟು, ಲಕ್ಷ್ಮಿ ದೇವಿಯ ಚಿಕ್ಕ ವಿಗ್ರಹ ಇಟ್ಟು ಪೂಜಿಸ ಬೇಕು.
ಕುಂಕುಮಾರ್ಚನೆ ಮಾಡಲೇಬೇಕು
ಪೂಜೆಯಲ್ಲಿ ಲಕ್ಷ್ಮೀ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ಅಷ್ಟೋತ್ತರ ಹೇಳಿ, ಕುಂಕುಮಾರ್ಚನೆ ಮಾಡುವುದನ್ನು ಮರೆಯಬೇಡಿ. ತುಪ್ಪದ ದೀಪವನ್ನು ಹಚ್ಚಿ, ತುಪ್ಪದ ಬತ್ತಿ ತಯಾರಿಸಿ ಅದರಲ್ಲಿಯೇ ಆರತಿ ಮಾಡಿ. ಕಮಲ ಹೂವಿನ ಕಾಂಡದಿಂದ ದೀಪದ ಬತ್ತಿಯನ್ನು ತಯಾರಿಸುತ್ತಾರೆ. ಅದು ನಿಮಗೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ. ಅದು ಸಿಕ್ಕರೆ ಅದರಲ್ಲಿ ದೀಪ ಹಚ್ಚಿ.
ನೈವೇದ್ಯಕ್ಕೆ ಪಾಯಸ ಶ್ರೇಷ್ಠ
ನೈವೇದ್ಯಕ್ಕೆ ಪಾಯಸ ಮಾಡುವುದು ವಾಡಿಕೆ ಹಾಗೂ ಶ್ರೇಷ್ಠ. ಪೂಜಾ ಸಮಯದಲ್ಲಿ ನಿಮ್ಮ ಮನೆಗೆ ಕರೆಯದೆ ಬಂದ ಮುತ್ತೈದೆ ಯಾರೆ ಆದರೂ ಅವರು ಮಹಾಲಕ್ಷ್ಮಿಯ ಸ್ವರೂಪ ಆಗಿರುತ್ತಾರೆ. ಆದಕಾರಣ ಅವರಿಗೆ ಅರಿಶಿನ- ಕುಂಕುಮ, ವೀಳ್ಯದ ಎಲೆ, ಅಡಿಕೆ, ಹಣ್ಣು, ಬಳೆ ಇತ್ಯಾದಿ ಲಭ್ಯ ಆದದ್ದು ಕೊಡಿ. ಮಹಾಲಕ್ಷ್ಮಿ ಅಷ್ಟಕ ಹಾಗೂ ಹಾಡು ಹೇಳಿ ಕುಂಕುಮದ ನೀರಿನಲಿ ಆರತಿ ಮಾಡಿ, ಮನೆಯ ಆಚೆ ಹಾಕಿ. ನೆನಪಿಡಿ: ಇಂದು ಯಾರೂ ಸಾಲ ಮಾಡಬೇಡಿ ಅಥವಾ ಸಾಲ ಕೊಡಬೇಡಿ.