ಉಡುಪಿ: ಹಣತೆಗಳಿಗೆ ಬಣ್ಣ ನೀಡಿ ಜೀವನದ ದಾರಿ ಹುಡುಕಿದ ವಿದ್ಯಾರ್ಥಿನಿ
ಉಡುಪಿ, ನವೆಂಬರ್ 1: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದ್ದು, ದೀಪಾವಳಿಯ ಅಂದ ಹೆಚ್ಚಿಸುವುದು ಚಂದದ ಹಣತೆಗಳು. ಮಾರುಕಟ್ಟೆಗಳಲ್ಲಿ ತರಹೇವಾರಿ ಹಣತೆಗಳು ಬರುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬಣ್ಣದ ಹಣತೆಗಳನ್ನು ತಯಾರಿಸಿ, ಉಡುಪಿಯ ವಿದ್ಯಾರ್ಥಿನಿಯೊಬ್ಬಳು ಮನೆಗೆ ಆಸೆರೆಯಾಗುತ್ತಿದ್ದಾಳೆ. ಹಣತೆ ಬೆಳಗಿದಂತೆ ತನ್ನ ಕನಸು ಬೆಳಗಬಹುದು ಎಂಬ ಆಶಾಭಾವನೆಯಲ್ಲಿದ್ದಾಳೆ.
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ದೀಪದ ಹಣತೆಗಳು ಬೆಳಕಿನ ಹಬ್ಬದ ಅಂದವನ್ನು ಇಮ್ಮಡಿಗೊಳಿಸುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಮನೆಯ ಬಡತನಕ್ಕೆ ನೆರವಾಗಬೇಕು, ತನ್ನ ವಿದ್ಯಾಭ್ಯಾಸಕ್ಕೆ ಸಹಕಾರಿ ಆಗಬೇಕು ಎಂಬ ಸುಂದರ ಕನಸನ್ನು ಇಟ್ಟುಕೊಂಡು ಹಣತೆಗಳಿಗೆ ವಿಧವಾದ ಬಣ್ಣ ಬಳಿಯುತ್ತಿದ್ದಾಳೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿ ನಿವಾಸಿ ರಕ್ಷಾ ಹಣತೆಗಳಿಗೆ ಬಣ್ಣಗಳ ಚಿತ್ತಾರ ಬಿಡಿಸುತ್ತಿರುವ ವಿದ್ಯಾರ್ಥಿನಿ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪೈನ್ ಆರ್ಟ್ಸ್ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿರುವ ಈಕೆಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದು ಅಂದರೆ ಈಕೆಗೆ ಪಂಚಪ್ರಾಣ.
ಅಂಗವಿಕಲ ತಂದೆ, ಕೂಲಿ ಕೆಲಸ ಮಾಡುವ ತಾಯಿ. ಕಾಲೇಜು ವ್ಯಾಸಂಗ ಮಾಡುವ ತಮ್ಮ. ಇವರೊಂದಿಗೆ ಬಾಡಿಗೆ ಮನೆಯಲ್ಲಿ ಬಡತನದ ಜೀವನ ನಡೆಸುವ ರಕ್ಷಾ, ತನ್ನ ವಿಶಿಷ್ಟ ಚಿತ್ರ ಕಲೆಯನ್ನೇ ಬಂಡವಾಳವಾಗಿಸಿ, ಹಣತೆಗಳಿಗೆ ಬಣ್ಣ ಬಳಿದು ಮಾರಾಟಕ್ಕೆ ಮುಂದಾಗಿದ್ದಾಳೆ.
ಬೆಂಗಳೂರಿನಿಂದ ಕಚ್ಚಾ ವಸ್ತುಗಳನ್ನು ತರಿಸಿ, ಮನೆಯಲ್ಲೇ ಹಣತೆಗಳಿಗೆ ವಿವಿಧ ಬಣ್ಣ ಬಳಿದು, ಹಣತೆಗಳ ಮೆರಗನ್ನು ಹೆಚ್ಚಿಸುತ್ತಿದ್ದಾಳೆ. ಈಕೆಯ ಕೈಚಳಕದಿಂದ ಮೂಡಿ ಬರುವ ಬಣ್ಣ ಬಣ್ಣದ ಹಣತೆಗಳಿಗೆ, ಕರಾವಳಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಈ ಬಾರಿ ಬೇಡಿಕೆ ಇದೆಯಂತೆ. ದೀಪಾವಳಿಯ ಈ ಸಂದರ್ಭದಲ್ಲಿ ರಕ್ಷಾ ಫುಲ್ ಬ್ಯುಸಿಯಾಗಿದ್ದಾರೆ.
ರಕ್ಷಾಳಿಗೆ ಸ್ವಂತ ಸೂರು ಕಟ್ಟಿಕೊಳ್ಳಬೇಕು ಅಂತ ಕನಸಿದೆ. ಜೊತೆಗೆ, ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಬೇಕು ಅಂತ ಆಸೆ ಇದೆ. ಹೀಗಾಗಿ ರಾತ್ರಿ ಹಗಲೆನ್ನದೇ ಹಣತೆಗಳಿಗೆ ಚಿತ್ತಾರ ಬಿಡಿಸುತ್ತಿದ್ದಾರೆ. ಇವರ ಶ್ರಮಕ್ಕೆ ಬೆನ್ನೆಲುಬಾಗಿ ಸ್ನೇಹಿತರು ಸಾಥ್ ನೀಡುತ್ತಿದ್ದಾರೆ.
ಅಂದಹಾಗೆ, ವಿದ್ಯಾಭ್ಯಾಸ ಜೊತೆಗೆ ತನ್ನ ವಿಶಿಷ್ಟ ಕಲೆಯನ್ನು ಬಳಸಿಕೊಂಡು ಮನೆಯವರಿಗೆ ನೆರವಾಗುವ ರಕ್ಷಾ ಇತರಿಗೂ ಮಾದರಿಯಾಗಿದ್ದಾಳೆ. ದೀಪಾವಳಿಯಲ್ಲಿ ಬಣ್ಣ ಬಣ್ಣದ ಹಣತೆಗಳು ಬೆಳಗಿದಂತೆ, ಈಕೆಯ ಜೀವನವೂ ಬೆಳಗಲಿ, ಕಂಡ ಕನಸು ಕನಸಾಗಲಿ ಅನ್ನುವುದು ನಮ್ಮ ಆಶಯ.