ಅಲ್ರೀ, ಕೇಳೋ ಪ್ರಶ್ನೆ ಏನ್ರೀ ಇದು ಸುಬ್ಬುಸಾರ್?
ಇರಲಿ, ಸೀದ ಹೋಗಿ ಆಕೆಯ ಪಕ್ಕದಲ್ಲಿ ಕುಳಿತೇ ಬಿಟ್ಟ. ಮುಂದಿನ ಸೀಟಿನಲ್ಲಿ ಅಜ್ಜಿಯ ತೊಡೆಯ ಮೇಲೆ ಕುಳಿತಿದ್ದ ಒಂದು ಹೆಣ್ಣು ಮಗು, ಅಲ್ಲಿಂದ ಎದ್ದು "ಮಮ್ಮಿ" ಎನ್ನುತ್ತ ಸುಬ್ಬನ ಪಕ್ಕದ ಹುಡುಗಿಯ (?) ಬಳಿ ಬರೋದೇ? ಸುಬ್ಬ ಆಶ್ಚರ್ಯದಿಂದ ಆಕೆಯನ್ನು ಕೇಳಿಯೇ ಬಿಟ್ಟ "ಮಗು ನಿಮ್ಮದೇ?" ಅಂತ. ಆಕೆ ನಾಚಿ "ಹೌದು" ಎಂದು "ನಾನು ದಿನವೂ ಸಂತೂರ್ ಸಾಬೂನನ್ನೇ ಬಳಸುವುದು" ಎನ್ನಲಿದ್ದಳು... ಅಷ್ಟರಲ್ಲೇ ಸುಬ್ಬ "ನಿಮ್ಮನ್ನು ನೋಡಿ ಹುಡುಗಿ ಅಂದುಕೊಂಡೆ... ವಯಸ್ಸಾದವರು ಅಂತ ಗೊತ್ತಾಗಲಿಲ್ಲ... ಸಾರಿ" ಎಂದಿದ್ದ! ಮುಂದೆ ಏನಾಯ್ತು ಎಂಬೋದು ಇಲ್ಲಿ ಹೇಳಲಾರೆ... ಅಂದಿನಿಂದ ಅವನು ಬಸ್ ಹತ್ತಿಲ್ಲ ಅಂತ ಮಾತ್ರ ಹೇಳಬಲ್ಲೆ!
ಸುಬ್ಬನ ಬಗ್ಗೆ ಒಂದು ಐಡಿಯಾ ಬಂತೇ? ಇಂತಹ ಸುಬ್ಬನಿಗೆ ರಾಯರು ತಮ್ಮ ಮಗಳನ್ನು ಹೇಗೆ ಕೊಟ್ಟರು ಅನ್ನೋ ಅನುಮಾನ ನಿಮಗೆ ಬಂದಿರಲೂಬಹುದು. ಕೆಲವೊಮ್ಮೆ ದುರ್ಘಟನೆಗಳು ಹಿತವಾಗೇ ನಡೆದು ಅಪಘಾತಗಳಾಗುವುದುಂಟು. ಅದಕ್ಕೆ ಹಿರಿಯರು "ಹಣೆಬರಹ" ಅಥವಾ "ಬ್ರಹ್ಮಗಂಟು" ಎಂದೂ ಅನ್ನುತ್ತಾರೆ. ಈಗ ವಿಷಯ ಹೇಳ್ತೀನಿ ಕೇಳಿ,
ಮದುವೆಗೆ ಮುನ್ನ ಮನೆ ಮಾಡು ಅನ್ನೋದನ್ನ ಯಾರೋ ಸುಬ್ಬನಿಗೆ ಹೇಳಿದ್ದರು. ಅದರಂತೆ ಮನೆ ಹುಡುಕುತ್ತಿದ್ದ. ಒಂದೆರಡು ಮನೆ ನೋಡಿದ ಮೇಲೆ ಸುಬ್ಬನಿಗೆ ದಲ್ಲಾಳಿ ಜೊತೆ ಹೇಗೆ ವ್ಯವಹರಿಸಬೇಕು ಅಂತ ಗೊತ್ತಾಯ್ತು. ನಂತರ ಆ ದಲ್ಲಾಳಿ ಯಾವುದೇ ಮನೆಯ ಬಗ್ಗೆ ಹೇಳುವಾಗ ಸುಬ್ಬ "ಆ ಮನೆಯಲ್ಲಿ ಏನೇನಿದೆ" ಎಂದು ಮುಂಚಿತವಾಗಿಯೇ ತಿಳಿದುಕೊಳ್ಳುತ್ತಿದ್ದ. ಅಂತಹ ಸುಬ್ಬನ ಬಳಿ ಮದುವೆ ದಲ್ಲಾಳಿ, ರಾಯರ ಮಗಳ ವಿವರ ಹೊತ್ತು ಬಂದ.
ಸುಬ್ಬ ಅವರನ್ನು ಕೇಳಿಯೇಬಿಟ್ಟ "ಹುಡುಗೀಗೆ ಏನೇನಿದೆ?" ಅಂತ. ದಲ್ಲಾಳಿಯ ಅದೃಷ್ಟವೋ ಅಥವಾ ದುರಾದೃಷ್ಟವೋ ರಾಯರೂ ಅವನ ಜೊತೆಗೇ ಇದ್ದರು! ಸುಬ್ಬನಿಗೆ ಸರಿಯಾಗಿ ನಾಲ್ಕು ಬಿತ್ತು ಅಂದುಕೊಳ್ಳುವಷ್ಟರಲ್ಲಿ, ರಾಯರು ಗಟ್ಟಿಯಾಗಿ ನಕ್ಕುಬಿಡೋದೇ? ಒಂದು ಕೆಟ್ಟ ಘಳಿಗೆಯಲ್ಲಿ ರಾಯರಿಗೆ ಸುಬ್ಬ ಮನಸ್ಸಿಗೆ ಬಂದುಬಿಟ್ಟಿದ್ದ. ಸುಬ್ಬನು ರಾಯರ ಅಳಿಯನಾದ. ಇವನಿಗೊಂದು ಹುಡುಗಿ ಹುಡುಕಿಯೇ ತೀರುತ್ತೇನೆ ಎಂದು ದಳ್ಳಾಳಿ ಮಾಡಿದ್ದ ಶಪಥ ಕೂಡ ನೆರವೇರಿತು.