ರಾಜ್ಯದ ಪಾಲಿಗೆ ತಮಿಳುನಾಡು ಮಗ್ಗುಲ ಮುಳ್ಳು: ಕಣವಿ
ಮೈಸೂರು: ತಮಿಳುನಾಡು ರಾಜ್ಯದ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿದೆ ಎಂದು ನಾಡೋಜ ಚೆನ್ನವೀರ ಕಣವಿ ವಿಷಾದ ವ್ಯಕ್ತಪಡಿಸಿದ್ದಾರೆ. ವಿಶ್ವಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾವೇರಿ ನೀರು ಸಂಕಷ್ಟಕ್ಕೆ ಸೂತ್ರವೊಂದನ್ನು ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯ ಇದೀಗ ಎದುರಾಗಿದೆ ಎಂದರು.
ಕರ್ನಾಟಕ- ತಮಿಳುನಾಡಿನ ನಡುವೆ ಉದ್ಭವಿಸಿರುವ ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಮಂತ್ರಿಗೆ ಕಾನೂನಿನಲ್ಲಿ ಅವಕಾಶವಿರುವುದರಿಂದ ಅವರ ಮಧ್ಯಪ್ರವೇಶ ಅನಿವಾರ್ಯ. ಪಕ್ಷ, ರಾಜಕೀಯ ಮರೆತು ರಾಜ್ಯದ ಹಿತ ಮುಖ್ಯವೆಂದು ನಮ್ಮ ರಾಷ್ಟ್ರೀಯ ಪಕ್ಷಗಳು ಭಾವಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.[ಮದುವೆ ನಂತರ ಯದುವೀರ್ ಮೊದಲ ಖಾಸಗಿ ದರ್ಬಾರ್!]

1995ರಲ್ಲಿ ಹೆಲ್ಸಿಂಕಿ ಅಂತಾರಾಷ್ಟ್ರೀಯ ಕಾನೂನು ಸಂಘದ ಸಮಾವೇಶದಲ್ಲಿ ಅಂತರರಾಜ್ಯ ನೀರು ಹರಿಯುವ ಪ್ರದೇಶದಲ್ಲಿ ಪ್ರತಿ ರಾಜ್ಯಕ್ಕೆ ತನ್ನ ಪ್ರದೇಶದೊಳಗೆ ಒಂದು ಸಮತೋಲನದ ನೀರಿನ ಪಾಲು ಬಳಸಿಕೊಂಡು ನೀರು ಹಂಚಿಕೆ ಕುರಿತು ಅಂತಾರಾಷ್ಟ್ರೀಯ ನೀತಿ ರೂಪಿಸಲಾಗಿದೆ. ಅದರ ಆಧಾರದ ಮೇಲೆ ತಕ್ಕ ಮಾನದಂಡ ರೂಪಿಸಿ ಜಲವಿವಾದಗಳನ್ನು ಕೇಂದ್ರ ಸರ್ಕಾರ ಬಗೆಹರಿಸಬಹುದು ಎಂದು ಮನವಿ ಮಾಡಿದರು.
ಕನ್ನಡಿಗರು ಎಂದೂ ಭಾಷಾಂಧರಾಗಿರಲಿಲ್ಲ. ಸರ್ವಭಾಷಾ ಸರಸ್ವತಿ ಎಂಬ ಪರಿಕಲ್ಪನೆ ಜಗತ್ತಿಗೆ ಕೊಟ್ಟವರು ಕನ್ನಡಿಗರು. ತಾಯ್ನಾಡಿಗೆ ಅಗ್ರಪೂಜೆ ಸಲ್ಲಬೇಕು. ಕನ್ನಡವನ್ನು ಪೂರ್ತಿ ತೊರೆದು ಇಂಗ್ಲಿಷ್ ಒಂದೇ ನಮ್ಮ ಪರಮ ದೈವ ಎಂದರೆ ಮಾತ್ರ ದುರಂತ ತಪ್ಪಿದ್ದಲ್ಲ ಎಂದು ಹೇಳಿದರು.[ಯುವ ದಸರಾ 2016 : ಅಯ್ಯೋ! ಕನ್ನಡಿಗರ ಕಡೆಗಣನೆ]

ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಬೇಕು ಎಂದು ಸೂಚಿಸಿರುವುದು ಸ್ವಾಗತಾರ್ಹ ಎಂದ ಅವರು, ರಾಜ್ಯ ಸರಕಾರಗಳು ಆಯಾ ರಾಜ್ಯಗಳ ಭಾಷೆಯನ್ನು ಕಡ್ಡಾಯವಾಗಿ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಿ ಮಾಡಬೇಕು ಎಂದು ಹೇಳಿದರು.
ಧರ್ಮದ ಸೋಗಿನಲ್ಲಿ ಆಚರಿಸುವ ನಾನಾ ರೀತಿ ಕಂದಾಚಾರಗಳನ್ನು ನಿಷೇಧಿಸುವ ಅತ್ಯಂತ ಅಗತ್ಯವಿದೆ. ನಂಬಿಕೆಗಳು ಅವಶ್ಯಕ. ನಂಬಿಕೆಗಳು ವ್ಯಕ್ತಿಗತ ನೆಲೆಯಲ್ಲಿರುತ್ತವೆ. ಅಂಥವುಗಳನ್ನು ಯಾವ ವೈಚಾರಿಕರೂ ವಿರೋಧಿಸುವುದಿಲ್ಲ. ಆದರೆ ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸುವ ಮೂಢನಂಬಿಕೆಗಳನ್ನು ನಾಗರಿಕ ಸಮಾಜ ವಿರೋಧಿಸಲೇ ಬೇಕು ಎಂದರು.[ದಸರಾ: ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿಲ್ಲ]

ರಾಜ್ಯದಲ್ಲಿ ಬರಗಾಲದ ಛಾಯೆ ದಟ್ಟವಾಗಿ ಆವರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರ ದಸರಾ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಸರಳವಾಗಿ ಆಚರಿಸಲು ಯೋಗ್ಯ ನಿರ್ಣಯ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ಯಾರಾ ಒಲಂಪಿಯನ್ ದೀಪಾ ಮಲ್ಲಿಕ್ ಮತ್ತು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್, ತನ್ವೀರ್ ಸೇಠ್, ರುದ್ರಪ್ಪ ಮಾನಪ್ಪ ಲಮಾಣಿ, ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಚಿಕ್ಕಮಾದು, ಮಹಾಪೌರರಾದ ಬಿ.ಎಲ್.ಭೈರಪ್ಪ, ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾಧಿಕಾರಿ ಡಿ.ರಂದೀಪ್, ಪೊಲೀಸ್ ಆಯುಕ್ತ ಬಿ.ದಯಾನಂದ್ ಇತರರು ಇದ್ದರು.












Click it and Unblock the Notifications