ದಸರಾ ವಿಶೇಷ: ಅರಮನೆ ಕಂಚಿನ ಹುಲಿಗಳ ಹಿಂದೆ ಉಂಟು ರೋಚಕ ಕಥೆ...
ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆಯನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನು ಇಲ್ಲಿನ ಕಂಚಿನ ಹುಲಿಗಳು ಥಟ್ಟನೆ ಸೆಳೆಯುತ್ತವೆ. ಬಹಳಷ್ಟು ಮಂದಿ ಇದರ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ನೋಡಲು ಆಕರ್ಷಕವಾಗಿರುವ ಇವುಗಳು ಕುತೂಹಲವನ್ನು ಕೆರಳಿಸುತ್ತವೆ.
ಮಾಮೂಲಿಯಾಗಿ ಅಡ್ಡಾಡುವ ಮಂದಿಗೆ ಇವುಗಳು ವಿಶೇಷವಾಗಿ ಕಾಣದಿದ್ದರೂ ದೂರದಿಂದ ಬರುವ ಪ್ರವಾಸಿಗರಿಗೆ ಅಚ್ಚರಿ ಮೂಡಿಸುತ್ತವೆ. ದಸರಾ ಸಂದರ್ಭದಲ್ಲಂತೂ ಇವುಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬೀಳುತ್ತಾರೆ. ಅರಮನೆ ಆವರಣದ ವಿವಿಧ ಕಡೆ ಒಟ್ಟು ಎಂಟು ಹುಲಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅವುಗಳ ನಿರ್ಮಾಣದ ಹಿಂದೆ ರೋಚಕ ಇತಿಹಾಸ ಇರುವುದನ್ನು ಕಾಣಬಹುದಾಗಿದೆ.[ಮೈಸೂರು ದಸರಾದಲ್ಲಿ ಅಲಮೇಲಮ್ಮನಿಗೇಕೆ ಪೂಜೆ?]
ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅರಮನೆಯ ಹೊರ ಆವರಣದಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿದ್ದವಂತೆ. ಆದರೆ ಅವು ಯಾರಿಗೂ ತೊಂದರೆ ನೀಡುತ್ತಿರಲಿಲ್ಲವಂತೆ. ಸೌಮ್ಯತೆಯಿಂದ ವರ್ತಿಸುತ್ತಿದ್ದ ಹುಲಿಗಳನ್ನು ನೋಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಖುಷಿಪಡುತ್ತಾ ದಿನ ಕಳೆಯುತ್ತಿದ್ದರಂತೆ.
ಆದರೆ, ಕೆಲವು ವರ್ಷಗಳ ನಂತರ ಹುಲಿಗಳು ಬರುವುದನ್ನು ನಿಲ್ಲಿಸಿಬಿಟ್ಟವು. ಇದು ಅವರಿಗೆ ವೇದನೆ ಉಂಟು ಮಾಡಿತಂತೆ. ಮುಂದೆ ಈ ವಿಚಾರವನ್ನು ಅವರು ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಹೇಳಿದರಂತೆ. ಆಗ ಅವರು ಅರಮನೆ ಆವರಣದಲ್ಲಿ ಹುಲಿಗಳು ಅಡ್ಡಾಡುತ್ತಿದ್ದ ನೆನಪಿಗಾಗಿ ಪ್ರತಿಮೆಗಳನ್ನು ನಿರ್ಮಿಸುವ ತೀರ್ಮಾನ ಮಾಡಿದರು.[ಫಲಪುಷ್ಪ ಪ್ರದರ್ಶನದಲ್ಲಿ ತೆರೆದಿದೆ ಇಂಡಿಯನ್ ಗೇಟ್ ವೇ..]
ಹುಲಿಗಳ ಪ್ರತಿಮೆ ನಿರ್ಮಾಣ ಮಾಡಲು ಶಿಲ್ಪಿಗಳನ್ನು ಹುಡುಕುತ್ತಿದ್ದರಂತೆ. ಅದೇ ಸಂದರ್ಭ ಅರಮನೆ ವೀಕ್ಷಣೆಗೆ ಬಂದಿದ್ದ ಪ್ರಖ್ಯಾತ ಶಿಲ್ಪ ತಜ್ಞ ಬ್ರಿಟನ್ ರಾಯಲ್ ಅಕಾಡೆಮಿಯ ರಾಬರ್ಟ್ ವಿಲಿಯಂ ಕಾಲ್ಟನ್ ಅವರೊಂದಿಗೆ ಮಾತನಾಡುತ್ತಾ ತಮ್ಮ ಮನದ ಇಂಗಿತವನ್ನು ತಿಳಿಸಿದರು.
ಆಗ ಆತ ಮೂರು ತಿಂಗಳ ಅವಧಿಯೊಳಗೆ ಹುಲಿಗಳ ಪ್ರತಿಮೆಯನ್ನು ಮಾಡಿಕೊಡಲು ಒಪ್ಪಿದರು. ಅದರಂತೆ 1909ರ ಅವಧಿಯಲ್ಲಿ ಅರಮನೆಯ ತೊಟ್ಟಿಯ ಭಾಗದ ನಾಲ್ಕು ಕಡೆ ಕಂಚಿನ ಹುಲಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಯಿತು.[ಮೈಸೂರು ದಸರಾ ಖಾಸಗಿ ದರ್ಬಾರ್ ಅಂದರೆ...]
ಇವತ್ತು ನಾವು ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕು ಅಲ್ಲದೆ, ಜಯಮಾರ್ತಂಡ, ವರಾಹ, ಜಯರಾಮ ಮತ್ತು ಬಲರಾಮ ದ್ವಾರಕ್ಕೆ ಎದುರಾಗಿ ಹಾಗೂ ಕಲ್ಯಾಣ ಮಂಟಪ ಹತ್ತಿರವಿರುವ ತೆರೆದ ತೊಟ್ಟಿಯ ಭಾಗ (ಜಟ್ಟಿ ಕಾಳಗ ಸ್ಥಳ)ದಲ್ಲಿ ಹೀಗೆ ಒಟ್ಟು ಎಂಟು ಕಡೆ ಕಂಚಿನ ಹುಲಿಗಳನ್ನು ಕಾಣಬಹುದಾಗಿದೆ.