ಕುದ್ರೋಳಿ ದಸರಾದಲ್ಲಿ ವಿಧವೆಯರಿಗೆ ಅರಿಷಿಣ ಕುಂಕುಮ
ದಸರಾ ಉತ್ಸವದ ಸಂದರ್ಭದಲ್ಲಿ ನಿರ್ದಿಷ್ಟ ದಿನದಂದು ಕುದ್ರೋಳಿ ಕ್ಷೇತ್ರದಲ್ಲಿ ಸುಮಾರು 1500 ವಿಧವೆಯರಿಗೆ ದೇವರ ಪ್ರಸಾದ ರೂಪದಲ್ಲಿ ಸೀರೆ, ಕುಂಕುಮದ ಕರಡಿಗೆ, ಹೂವು ಬಳೆಗಳನ್ನು ನೀಡಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ತಿಳಿಸಿದ್ದಾರೆ.
ಬೆಳ್ಳಿಯ ರಥದಲ್ಲಿ ದೇವರನ್ನು ಕುಳ್ಳಿರಿಸಿ ವಿಧವೆಯರ ಪಾಲ್ಗೊಳ್ಳುವಿಕೆಯೊಂದಿಗೆ ರಥೋತ್ಸವ ನಡೆಸಲಾಗುವುದು, ವಿಶೇಷ ಚಂಡಿಕಾ ಹೋಮ ಮಾಡಲಾಗುವುದು. ಗಂಡ ಮೃತಪಟ್ಟ ಮಹಿಳೆಯನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಮತ್ತು ಅವರನ್ನು ಇತರ ಮಹಿಳೆಯರಂತೆ ಗೌರವ ಭಾವದಿಂದ ನೋಡುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ಸಾಮಾಜಿಕ ಅಭಿಯಾನ ನಡೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಿಳೆಯರಿಗೆ ವಿಶೇಷ ಗೌರವ ನೀಡಿದ, ಮಾತೃದೇವೋಭವ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಇಲ್ಲಿ ಮಹಿಳೆಯರನ್ನು ಅವಮಾನಿಸುವುದು, ಅವರಿಗೆ ಮಾನಸಿಕ ಹಿಂಸೆ ನೀಡುವಂತಹ ವಿಚಾರಗಳು ನಡೆಯಬಾರದು. ಗಂಡ ಮೃತಪಟ್ಟ ಕೂಡಲೇ ಆಕೆಯ ಕುತ್ತಿಗೆಯಿಂದ ಕರಿಮಣಿ ತೆಗದು, ಕುಂಕುಮ ಅಳಿಸಿ, ಬಳೆಗಳನ್ನು ಒಡೆದು ಹಾಕುವ ಕ್ರಮಗಳನ್ನು ನಡೆಸಲಾಗುತ್ತದೆ. ಆಕೆಯನ್ನು ಶುಭಕಾರ್ಯಗಳಿಂದ ದೂರವಿಡಲಾಗುತ್ತದೆ. ಇದು ಬದಲಾಗಬೇಕು ಎನ್ನುವುದು ಮೂಲ ಉದ್ದೇಶವೆಂದರು.
ಮಠಾಧೀಶರು, ಧರ್ಮಗುರುಗಳು, ಸಮಾಜ ಸುಧಾರಕರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ಶಿಕ್ಷಕರು ಈ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಬೇಕು. ಗಂಡ ಮೃತಪಟ್ಟ ಮಹಿಳೆ ಕೂಡಾ ಇತರ ಮಹಿಳೆಯರಂತೆ ಬಾಳುವಂತಾಗಬೇಕು. ನಾನು ಇಂದಿನಿಂದ ವಿಧವೆ ಎಂಬ ಶಬ್ಧವನ್ನು ಬಳಸುವುದಿಲ್ಲ. ಯಾಕೆಂದರೆ ವಿಧವೆ ಎಂಬ ಶಬ್ಧ ಕೂಡಾ ಅಗೌರವ ತರುವ, ಮಾನಸಿಕ ಹಿಂಸೆ ನೀಡುವ ಶಬ್ಧ ಎಂದು ಪೂಜಾರಿ ಹೇಳಿದರು.