ಮಂಗಳೂರು ಕುದ್ರೋಳಿ ದಸರಾಕ್ಕೆ ಭರದ ತಯಾರಿ
ಬ್ರಹ್ಮ ಶ್ರೀ ನಾರಾಯಣ ಗುರುಗಳಿಂದ ರಾಜ್ಯದಲ್ಲಿ ಸ್ಥಾಪಿತ ಏಕೈಕ ಕ್ಷೇತ್ರ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನ. ಶ್ರೀ ಕ್ಷೇತ್ರದ ನವೀಕರಣ ರೂವಾರಿ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಕಳೆದ 21 ವರ್ಷಗಳಿಂದ ಸತತವಾಗಿ ವೈಭವಪೂರ್ಣವಾಗಿ ದಸರಾ ಕಾರ್ಯಕ್ರಮ ನಡೆಯುತ್ತಿದೆ. ಈ ವರ್ಷ ಮತ್ತಷ್ಟು ವೈಭವಪೂರ್ಣವಾಗಿ ನಡೆಸಲು ಸಾಕಷ್ಟು ತಯಾರಿಗಳನ್ನು ಮಾಡಲಾಗುತ್ತಿದೆ.
10 ದಿನಗಳ ಕಾಲ ನಡೆಯುವ ಈ ದಸರಾ ಕಾರ್ಯಕ್ರಮ ಸೆ. 28ರಂದು ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ 11.35ಕ್ಕೆ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿರುವ ವಿಶೇಷ ಮಂಟಪಗಳಲ್ಲಿ ನವದುರ್ಗೆಯರು ಹಾಗೂ ಶಾರದಾ ಮಾತೆಯ ಮಾರ್ತಿಗಳನ್ನು ಸಂಪ್ರದಾಯಿಕ ಹಾಗೂ ವಿಧಿಪೂರ್ಣವಾಗಿ ಪ್ರತಿಷ್ಠಾಪಿಸಲಾಗುವುದು. ಇದರೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ಅ. 2ರಂದು ಸಂಜೆ 6 ಗಂಟೆಗೆ ಮಂಗಳೂರು ದಸರಾ ಉತ್ಸವವನ್ನು ಕೇಂದ್ರ ನಾಗರಿಕಯಾನ ಖಾತೆ ಸಚಿವ ವಯಲಾರ್ ರವಿ ಉದ್ಘಾಟಿಸುವರು. ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಅ. 6ರಂದು ಸಂಜೆ 4 ಗಂಟೆಗೆ ಶಾರದಾ ಮಾತೆಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಮೆರವಣಿಗೆ ಸಾಗುವ 6 ಕಿ.ಮೀ. ದಾರಿಯನ್ನು ಈ ಬಾರಿ ವಿನೂತನ ರೀತಿಯಲ್ಲಿ ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಗುತ್ತಿದೆ. ದಸರಾ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಮೆರವಣಿಗೆಯಲ್ಲಿ ರಾಜ್ಯದ ಹಾಗೂ ನೆರೆ ರಾಜ್ಯಗಳಿಂದ ಬರುವ ಸುಮಾರು 50ಕ್ಕೂ ಹೆಚ್ಚು ಸ್ತಬ್ದ ಚಿತ್ರಗಳು ಪಾಲ್ಗೊಳ್ಳಲಿವೆ.