ದಸರಾಕ್ಕೆ ಹೆಗ್ಗಡೆ ಅವರ ವಿಂಟೇಜ್ ಕಾರುಗಳು
ದಸರಾ ಸಿದ್ಧತೆ ಕುರಿತು ವಿವಿಧ ಅಧಿಕಾರಿಗಳ ಜತೆ ಚರ್ಚಿಸಿದ ಅವರು, ದಸರಾ ಮಹೋತ್ಸವ ಆಚರಣೆ ಆರಂಭವಾಗಿ 400 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಬೆಳ್ಳಿ ನಾಣ್ಯ ಹಾಗೂ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
ವೇದಿಕೆ ನಿರ್ಮಾಣ, ಶಾಮಿಯಾನ, ಮತ್ತಿತರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಿವಿಧ ಕೆಲಸಗಳಿಗೆ ಏಜೆನ್ಸಿ ಗುರುತಿಸಲಾಗಿದೆ. ವಿವಿಧ ಸಮಿತಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಏಜೆನ್ಸಿಗಳಿಂದ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ದಸರಾ ಪಾಸ್ ಹಾಗೂ ಟೆಕೆಟ್ಗಳ ನಕಲು ಮಾಡುವುದನ್ನು ತಪ್ಪಿಸಲು ಬಾರ್ಕೋಡಿಂಗ್ ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ನೀಡುವ ಗುರುತು ಚೀಟಿ ಸೇರಿ ಬಾರ್ ಕೋಡಿಂಗ್ ಬಳಸಲಾಗುತ್ತಿದೆ. ಭದ್ರತೆಯ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ದಸರಾ ಪೂರ್ವ ಪ್ರಚಾರಕ್ಕಾಗಿ ಕಲಾ ತಂಡಗಳನ್ನು ಒಳಗೊಂಡ ವಿಶೇಷ ವಾಹನ ಸಿದ್ಧಪಡಿಸಲಾಗುತ್ತಿದೆ, ಇವು ಮೈಸೂರು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಸಂಚರಿಸಿ ದಸರಾ ವಾತಾವರಣ ಮೂಡಿಸುವಲ್ಲಿ ನೆರವಾಗಲಿವೆ. ವಿವಿಧ ಉಪಸಮಿತಿಗಳು ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುತ್ತಿವೆ ಎಂದು ಹರ್ಷಗುಪ್ತ ಹೇಳಿದರು.