ಶಾಯರಿ, ಶತಾವಧಾನಕ್ಕೂ ಕವಿಗೋಷ್ಠಿಯಲ್ಲಿ ಸ್ಥಾನ
ಮೈಸೂರಿನ ಪಾರಂಪರಿಕ ಸೊತ್ತು ಎನಿಸಿದ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಕನ್ನಡದ ಕಾವ್ಯಪರಂಪರೆ ಸೋಮವಾರ ರಾಜಗಾಂಭೀರ್ಯದಿಂದ ಬೀಗಿತು.
ಅಲ್ಲಿ ಹಿರಿ-ಕಿರಿಯರು ಎಂಬ ಭಾವ ಸುಳಿಯಲಿಲ್ಲ. ದಸರಾ ಕವಿಗೋಷ್ಠಿ ಅಂಗವಾಗಿ ಅರಮನೆಯ ಪಡಸಾಲೆಯಲ್ಲಿ ಗಂಟೆಗಳ ಕಾಲ ಹರಿದ ಕಾವ್ಯ ರಸಧಾರೆಯಲ್ಲಿ ಹಿರಿಯರು ಕಿರಿಯರಾಗಿ ಬದಲಾದರೆ, ಕಿರಿತನ ಒಮ್ಮೊಮ್ಮೆ ತಾರುಣ್ಯದ ತುಂಟತನವಾಗಿ, ಇನ್ನೂ ಕೆಲವೊಮ್ಮೆ ಹಿರೇತನದ ಗಂಭೀರತೆ ಪಡೆಯಿತು.
ಅಂಡಯ್ಯನ ಕಬ್ಬಿಗರ ಕಾವಕ್ಕೆ ಪ್ರಾರ್ಥನೆಯ ರೂಪ, ಶಾಯರಿ, ಶತಾವಧಾನ, ಒಂದಷ್ಟು ಪ್ರೇಮ, ಕಾಮ, ಚರ್ಚ್ ಮೇಲಿನ ದಾಳಿ, ಮಂಟೇಸ್ವಾಮಿಯ ಕಥಾ ಪ್ರಸಂಗ, ಬದುಕಿನ ಹಿನ್ನೋಟ-ಮುನ್ನೋಟ, ಕತ್ತಲ ಕನವರಿಕೆಗಳು ಹೀಗೆ ಹಲವು ವಿಚಾರ ವೈವಿಧ್ಯಗಳು ಕವಿಗೋಷ್ಠಿಯಲ್ಲಿ ಸ್ಥಾನ ಪಡೆದವು. ವಿಶೇಷವೆಂದರೆ ಈ ಬಾರಿಯ ದಸರಾ ಕವಿಗೋಷ್ಠಿಯಲ್ಲಿ ಉರ್ದು, ಕೊಂಕಣಿ ಹಾಗೂ ಕೊಡವ ಭಾಷೆಯ ಕವನಗಳು ಸ್ಥಾನ ಪಡೆದಿದ್ದವು.
ಅನಾರೋಗ್ಯದ ಕಾರಣ ಕವಿಗೋಷ್ಠಿಗೆ ಬರಲಾಗದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಬದಲಿಗೆ ನವೋದಯದ ಪ್ರೇಮಕವಿ ಎನ್.ಎಸ್.ಲಕ್ಷ್ಮಿನಾರಾಯಣಭಟ್ಟರ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿ ರಾಜ್ಯದ 25 ಜಿಲ್ಲೆಗಳಿಂದ ಆಗಮಿಸಿದ್ದ ೩೦ಕ್ಕೂ ಹೆಚ್ಚು ಕವಿಗಳಿಗೆ ತಮ್ಮ ಕವನ ವಾಚಿಸಲು ವೇದಿಕೆಯಾಯಿತು.
ತಮ್ಮ ಅನುಪಸ್ಥಿತಿಯಲ್ಲಿ ಜಿಎಸ್ಎಸ್ ಕಳುಹಿಸಿದ್ದ "ಕವಿತೆ ನಮ್ಮೊಳಗಿನ ಕನಸು, ಆದರ್ಶ ಹಾಗೂ ವಾಸ್ತವಗಳನ್ನು ಎತ್ತಿ ಹಿಡಿಯುವ ಪ್ರಜ್ಞೆಯಾಗಿದೆ" ಎಂಬ ಸಂದೇಶದ ನುಡಿ ವೇದಿಕೆಯ ಮುಂದಿನ ಕಾರ್ಯಕ್ರಮಗಳಿಗೆ ಆಶಯವಾಯಿತು.
ತಮ್ಮ "ಕಾಡು" ಶೀರ್ಷಿಕೆಯ ಕವನ ವಾಚಿಸುವ ಮೂಲಕ ಹಿರಿಯ ಕವಿ ಹಾಗೂ ಜಾನಪದ ತಜ್ಞ ಡಾ.ಎಚ್.ಜೆ.ಲಕ್ಕಪ್ಪಗೌಡ ಕಾವ್ಯವಾಚನಕ್ಕೆ ವಿದ್ಯುಕ್ತ ಚಾಲನೆ ನೀಡುತ್ತಿದ್ದಂತೆಯೇ ಸಾಹಿತಿ ಡಾ.ಮ.ನ.ಜವರಯ್ಯ ಇತ್ತೀಚೆಗೆ ನಡೆದ ಚರ್ಚ್ಗಳ ಮೇಲಿನ ದಾಳಿಯ ವಿರುದ್ಧ ಕವನದ ರೂಪದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಹರಿದದ್ದು ಶಾಯರಿಗಳ ಕಚಗುಳಿ.. ಕನ್ನಡ ಕಾವ್ಯ ಪರಂಪರೆಗೆ ಶಾಯರಿಗಳ ಉನ್ಮತ್ತತೆ ಪರಿಚಯಿಸಿದ ಸ್ಪರ್ಶ ಕವಿ ಇಟಗಿ ಈರಣ್ಣ ವೇದಿಕೆಯಲ್ಲಿ ಕೆಲವು ಶಾಯರಿಗಳ ವಾಚಿಸಿದರು.
* ಹೂವಿನ ಮ್ಯಾಲೆ ಈ ಬಣ್ಣ ಬಂದೇತಿ, ಗೆಳತಿ ಬಹುಶಃ ಅದು ನಿನ್ನ ಕೆನ್ನೆಯಿಂದ ಕಳುವಾಗೇತಿ...
* ಈ ಕತ್ತಲ ರಾತ್ರಿ ನಿನ್ನ ಹಾದಿ ಕಾದು ಕಾದು ನನ್ನ ಎದೆ ಒಂದೇ ಅಳತೆಗೆ ಸುಡುತಾ ಐತಿ, ಕತ್ತಲಾಗೇತಿ ಎಂದು
ಹೆದರಿ ಕೂರಬೇಡ ಗೆಳತಿ, ನನ್ನ ಸುಡುವ ಎದೆ ನಿನ್ನ ದಾರಿಗೆ ಬೆಳಕ ನೀಡೇತಿ.....
* ನೊಂದ ಹೃದಯದ ನೋವ ಈ ಜಗವೇನು ಬಲ್ಲದು. ಗೋರಿ ಒಳಗೂ ಮಲಗಿವೆ ಎಷ್ಟೊಂದು ಕನಸುಗಳು.
ಮೇಲೆ ಹೂವಿಟ್ಟು ಹೋಗುವ ಈ ಜನರೇನು ಬಲ್ಲರು... ಹೀಗೆ ಸಭಾಂಗಣಕ್ಕೆ ಶಾಯರಿಗಳ ಕಿಚ್ಚು ಹಚ್ಚಿದ ಕವಿ ಇಟಗಿ ಈರಣ್ಣ ಪ್ರೇಕ್ಷಕರಿಂದ ಚಪ್ಪಾಳೆಯ ಇನಾಮು ಪಡೆದರು.
ಶತಾವಧಾನಿ ಆರ್.ಗಣೇಶ್ ಸಂಸ್ಕೃತ ಶ್ಲೋಕ ವಾಚಿಸಿದರು. ಕಾವಿಧಾರಿ ಕುಮಾರ ನಿಜಗುಣ ಕವಿಗಳು ತಮ್ಮ ಕಾವ್ಯ ವಾಚಿಸಿ ವೈರಾಗ್ಯದಲ್ಲಿಯೂ ನಿರ್ಮಲ ಕಾವ್ಯ ಅರಳುವುದು ಎಂಬುದನ್ನು ನಿರೂಪಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.
ಬೆಳಗಾವಿಯ ಸಿ.ಕೆ. ಜೋರಾಪುರ್, ಡಾ.ಸರಸ್ವತಿ ಚಿಮ್ಮಲಗಿ, ದಾವಣಗೆರೆಯ ಆನಂದ ಋಗ್ವೇದಿ, ಚಿದಾನಂದ ಸಾಲಿ, ಡಾ.ಪ್ರಕಾಶ ಖಾಡೆ, ರೋಸಿ ಡಿಸೋಜಾ, ಖಾನಾಸಾಬ್ ಸುಂಕದ ಸೇರಿದಂತೆ ಹಲವು ಕವಿಗಳು ತಮ್ಮ ಕವನ ವಾಚಿಸಿದರು.
ಮುನೀರ್ ಅಹಮದ್ ಜಾಮಿ ಉರ್ದು ಕವಿತೆ, ಕೃಷ್ಣ ಪೈ ಬಜೆಯಡ್ಕ ಕೊಂಕಣಿ ಕವಿತೆ ಹಾಗೂ ಕೊಡಗು ಪ್ರಾಂತ್ಯದ ವೇಷಭೂಷಣ ತೊಟ್ಟು ನೆರೆದವರ ಗಮನ ಸೆಳೆದ ಕೇಕಡ ಚಂಗಪ್ಪ ಕೊಡವ ಭಾಷೆಯಲ್ಲಿ ಕವನ ವಾಚಿಸಿದರು.
ದಸರಾ ಕವಿಗೋಷ್ಠಿ ಉಪಸಮಿತಿ ಅಧ್ಯಕ್ಷ ಡಾ.ಶಿವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಮರಿಸ್ವಾಮಿ ಸ್ವಾಗತಿಸಿದರು. ಶಾಂತಾ ಜಗದೀಶ್ ಪ್ರಾರ್ಥಿಸಿದರು.
ಪೂರಕ ಓದಿಗೆ:
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ












Click it and Unblock the Notifications