ಸರ್ಕಾರದ ವಿರುದ್ಧ ದಂಗೆಯೆದ್ದ ಕ್ರೀಡಾ ತರಬೇತಿಗಾರರು
ಮೈಸೂರು, ಅ. 4 : ಒಲಿಂಪಿಕ್ ಪದಕ ವೀರರಾದ ಅಭಿನವ್ ಬಿಂದ್ರಾ ಮತ್ತು ವಿಜಯೇಂದ್ರ ಅವರ ಸಮ್ಮುಖದಲ್ಲೇ 'ದಸರಾ ಕ್ರೀಡೋತ್ಸವ' ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಕ್ರೀಡಾ ತರಬೇತಿಗಾರರು ಪ್ರತಿಭಟನೆ ನಡೆಸಿ ಕ್ರೀಡಾಸ್ಫೂರ್ತಿಗೆ ಮಸಿ ಬಳಿದ ಘಟನೆ ಇಂದು ನಡೆದಿದೆ.
ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೂರಾರು ಕೋಚ್ ಗಳು ಸರ್ಕಾರದ ವಿರುದ್ಧ ಉತ್ಸವ ನಡೆದಿರುವಾಗಲೇ ಪ್ರತಿಭಟನೆ ನಡೆಸಿದ್ದರಿಂದ ಕೆಲ ಕಾಲ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಪ್ರತಿಭಟನೆಗಿಳಿದ 50ಕ್ಕೂ ಹೆಚ್ಚಿನ ತರಬೇತಿಗಾರರನ್ನು ಪೊಲೀಸರು ಬಂಧಿಸಿದರು.
ಸುಮಾರು 12 ವರ್ಷಗಳಿಂದ ಕ್ರೀಡಾ ತರಬೇತಿಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸುತ್ತಲೇ ಇದ್ದಾರೆ. ಸರ್ಕಾರದ ಉದಾಸೀನತೆಯಿಂದ ಇಡೀ ಜಗತ್ತಿನ ದೃಷ್ಟಿ ದಸರಾ ಉತ್ಸವದ ಮೇಲೆ ಬಿದ್ದಿರುವಾಗ ಈ ಅಹಿತಕರ ಘಟನೆ ನಡೆದು ಸರ್ಕಾರ ತಲೆತಗ್ಗಿಸುವಂತಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್, ಕ್ರೀಡಾ ತರಬೇತುಗಾರರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.
ಬಿಂದ್ರಾ ಉದ್ಘಾಟನೆ : ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ದಕ್ಕಿಸಿಕೊಟ್ಟ ಅಭಿನವ್ ಬಿಂದ್ರಾ ಅವರು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಮೂರು ದಿನಗಳ ದಸರಾ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಮತ್ತೊಬ್ಬ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದ್ರ ಸಿಂಗ್ ಅವರ ಜೊತೆಗಿದ್ದರು. ಅನಾರೋಗ್ಯದ ಕಾರಣ ಸುಶೀಲ್ ಕುಮಾರ್ ದಸರಾ ಉತ್ಸವಕ್ಕೆ ಬಂದಿಲ್ಲ. ಕ್ರೀಡಾ ಉತ್ಸವದಲ್ಲಿ ಒಟ್ಟು 2500 ಕ್ರೀಡಾಳುಗಳು ಭಾಗವಹಿಸಲಿದ್ದಾರೆ.
ಸೂಪರ್ ಸ್ಪೆಷಾಲಿಟಿ ಕ್ರೀಡಾ ಕೇಂದ್ರ : ಉದ್ಘಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಬಿಂದ್ರಾ, ರಾಷ್ಟ್ರದಾದ್ಯಂತ 500 ಸೂಪರ್ ಸ್ಪೆಷಾಲಿಟಿ ಕ್ರೀಡಾ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದರು. ಅವುಗಳಲ್ಲಿ ಮೊಟ್ಟಮೊದಲ ಕ್ರೀಡಾ ಕೇಂದ್ರ ಕರ್ನಾಟಕದಲ್ಲೇ ತೆರೆಯುತ್ತಿರುವುದಾಗಿ ಬಿಂದ್ರಾ ಅವರ ತಂದೆ ಎ.ಎಸ್. ಬಿಂದ್ರಾ ತಿಳಿಸಿದರು.
ಈ ಕೇಂದ್ರಗಳಲ್ಲಿ ಶೂಟಿಂಗ್ ಮಾತ್ರವಲ್ಲ ಈಜು, ಟೆನ್ನಿಸ್, ಜ್ಯುಡೋ ಮತ್ತಿತರ ಕ್ರೀಡೆಗಳಲ್ಲಿ ನವಪೀಳಿಗೆಯ ಆಟಗಾರರಿಗೆ ಶಕ್ತ ತರಬೇತಿ ನೀಡುವುದಾಗಿ ವಿವರಿಸಿದರು. ಯುವ ಆಟಗಾರರನ್ನು ಮುಂಬರುವ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವಂತೆ ತರಬೇತಿ ನೀಡುವುದೇ ಮುಖ್ಯ ಉದ್ದೇಶವಾಗಲಿದೆ ಎಂದು ಅವರು ನುಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications