ಪವಿತ್ರ ಕ್ಷೇತ್ರ ಕಟೀಲಿನಲ್ಲಿ ಸಂಭ್ರಮದ ನವರಾತ್ರಿ ಉತ್ಸವ
ಮಂಗಳೂರಿನ
ದೇವಸ್ಥಾನದಲ್ಲಿ
ನವರಾತ್ರಿ
ಆಚರಣೆಯ
ವೈಭವ.
ದೇವಸ್ಥಾನಕ್ಕೆ
ದೀಪಾಲಂಕಾರದ
ಮೆರುಗು.
ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಲಯದಲ್ಲಿ ನವರಾತ್ರಿ ಉತ್ಸವವನ್ನು ಸೆ.30ರಿಂದ ಅಕ್ಟೋಬರ್ 8ರವರೆಗೂ ವಿಜೃಂಭಣೆಯಿಂದ ಆಚರಿಸಲು ಸಂಕಲ್ಪಿಸಲಾಗಿದೆ. ನವರಾತ್ರಿ ಉತ್ಸವದ ಭಾಗವಾಗಿ ಅಕ್ಟೋಬರ್ 4ರಂದು 'ಲಲಿತ ಪಂಚಮಿ', ಅ.6ರಂದು 'ಮಹಾನವಮಿ', ಅ.8ರಂದು 'ವಿಜಯ ದಶಮಿ' ಹಾಗೂ ಅ.9ರಂದು 'ಮಾಧ್ವ ಜಯಂತಿ'ಯನ್ನು ಆಚರಿಸಲಾಗುತ್ತದೆ.
ದುರ್ಗಾಪರಮೇಶ್ವರಿ ಆಲಯದಲ್ಲಿ ಪ್ರತಿ ದಿನ ಸಂಜೆ 5 ರಿಂದ 7 ಗಂಟೆವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಶಾಲೆಯ ಸಭಾಂಗಣದಲ್ಲಿ ಸಂಜೆ 7.30ರಿಂದ 10.30ರವರೆಗೂ 'ಯಕ್ಷಗಾನ' ಕಾರ್ಯಕ್ರಮ ನಡೆಯಲಿದೆ. ಸೆ.30ರ ಸಂಜೆ 5 ಗಂಟೆಗೆ ಬಜ್ಪೆಯ 'ಶಾಂತಿ' ಸಂಗೀತ ತಂಡದಿಂದ ಸುಶ್ರಾವ್ಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹಾಗೆಯೇ ಅ.1ರಂದು ಕೆ.ಜಿ.ಶಶಿಕುಮಾರ್ ಕಾರಂತ ತಂಡದಿಂದ 'ದಾಸವಾಣಿ' ಹಾಗೂ ಸಂಜೆ ವಿ.ಸುಧಾಕರ್ ತಂಡದಿಂದ 'ಸಂಜೀವಿನಿ' ರೂಪಕಗಳನ್ನು ಪ್ರದರ್ಶಿಸಲಾಗುತ್ತದೆ. ಅ.3ರಂದು ಚೈತ್ರ ನಾಯಕ್ ಗುರುವಾಯನಕೆರೆ ಅವರಿಂದ ಭರತನಾಟ್ಯ ಪ್ರದರ್ಶನವಿದೆ. ಅ.4ರಂದು ಉಡುಪಿಯ ಸಂಗೀತ ಬಾಲಚಂದ್ರ ಅವರಿಂದ 'ಭಕ್ತಿ ಸಂಗೀತ'ದ ಸುರಿಮಳೆಯಾಗಲಿದೆ.
ಇವುಗಳ ಜೊತೆಗೆ ಅ.5ರಂದು ಯಕ್ಷಗಾನ ತಾಳಮದ್ದಳೆ 'ರಾವಣ ವಧೆ', ಅ.6ರಂದು 'ಹರಿ ಕೀರ್ತನೆ', ಅ.7ರಂದು ಮೈಸೂರಿನ ವಿದುಷಿ ವಾಣಿ ಆರ್ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, ಅ.9ರಂದು ನಿಶಿತಾ ಮತ್ತವರ ತಂಡದಿಂದ 'ನೃತ್ಯಾಂಜಲಿ' ಕಾರ್ಯಕ್ರಮವಿರುತ್ತದೆ. ಇದರ ಜೊತೆಗೆ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.