ಕೇವಲ 5ರು.ಗೆ ವೋಲ್ವೊ ಬಸ್ ನಲ್ಲಿ ಮೈಸೂರು ಸುತ್ತಾಡಿ!
ಬೆಂಗಳೂರು, ಸೆ. 29 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಐತಿಹಾಸಿಕ ಮೈಸೂರು ದಸರಾ ಹಬ್ಬ ವೀಕ್ಷಿಸಲು ತೆರಳುವವವರಿಗೆ ಬಂಪರ್ ಬಹುಮಾನ ಘೋಷಣೆ ಮಾಡಿದೆ. ಸೆ. 30 ರಿಂದ ಹತ್ತು ದಿನಗಳ ಕಾಲ ವೋಲ್ವೋ ಬಸ್ ದರದಲ್ಲಿ ಭಾರಿ ರಿಯಾಯಿತಿ ನೀಡಿದೆ.
ವಿಶ್ವವಿಖ್ಯಾತ ದಸರಾ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಸಂಚರಿಸುವ ವೋಲ್ವೋ ಬಸ್ ಗಳಲ್ಲಿ ಕೇವಲ 5 ರು.ಗೆ ಪ್ರಯಾಣದರ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಸಚಿವ ಆರ್. ಆಶೋಕ್ ಇಂದು ತಿಳಿಸಿದ್ದಾರೆ. ಅ. 1 ರಿಂದ ಅ.10ರ ವರೆಗೆ ಈ ವಿಶೇಷ ಸೌಲಭ್ಯ ಜಾರಿಯಲ್ಲಿರುತ್ತದೆ. ಮೈಸೂರಿನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ಕೇವಲ 5 ರು.ಗಳಲ್ಲಿ ನೋಡಬಹುದಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಚಾಮುಂಡಿ ಬೆಟ್ಟಕ್ಕೆ 1 ರು. ಪ್ರಯಾಣ ದರಚಾಲ್ತಿಯಲ್ಲಿದ್ದು, ಆದರೆ ಈ ಯೋಜನೆ ಮುಂದುವರೆಯಲಿದೆ. ಈ ಸಲದ ದಸರಾ ಉತ್ಸವದ ವಿಶೇಷ ಪ್ರಯಾಣಕ್ಕೆ 450 ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ ಮೈಸೂರು ದಸರಾ ಉತ್ಸವದ ಅಂಗವಾಗಿ ವಿಶೇಷ ಪ್ಯಾಕೇಜ್ ಗಳನ್ನು ರೂಪಿಸಲಾಗಿದೆ. ಅದರಂತೆ 230 ರು.ಗಳ ಜಲದರ್ಶಿನಿ ಪ್ಯಾಕೇಜ್ ನಲ್ಲಿ ನಾಗರಹೊಳೆ, ಹಿರಪು, ಅಬ್ಬೆ ಜಲಪಾತ, ಗೋಲ್ಡನ್ ಟೆಂಪಲ್ ಪ್ರವಾಸ ಮಾಡಬಹುದು. ಹಾಗೆಯೇ 190 ರು.ಗಳ ಗಿರಿ ದರ್ಶಿನಿ ಪ್ಯಾಕೇಜ್ ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಚಾಮುಂಡಿ ಬೆಟ್ಟ ಪ್ರವಾಸ ಹೊರಡಬಹುದು.
ಕೇವಲ 90 ರು.ಗೆ ನಗರ ದರ್ಶಿನಿ ಪ್ಯಾಕೇಜ್ ನಲ್ಲಿ ನಂಜನಗೂಡು ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ನಗರಗಳಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ. 140 ರು.ಗೆ ದೇವದರ್ಶಿನಿ ಪ್ಯಾಕೇಜ್ ನಲ್ಲಿ ಬ್ಲಫ್, ಮುಡುಕುತೊರೆ ಪ್ರವಾಸ ಮಾಡಬಹುದಾಗಿದೆ ಎಂದು ಸಚಿವರು ವಿವರಿಸಿದರು. ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದಿನದ ವಿಶೇಷ ಪಾಸ್ ಯೋಜನೆ ಜಾರಿಗೆ ತರಲು ಸಂಸ್ಥೆ ನಿರ್ಧರಿಸಿದ್ದು, ಕೇವಲ 30 ರುಪಾಯಿಗೆ ದಿನದ ಪಾಸ್ ದೊರೆಯುವ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿಗೂ ಅನ್ವಯ
ಜನಸಾಮಾನ್ಯರಿಗೆ ವೋಲ್ವೋ ಬಸ್ ಗಳ ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಸಂಸ್ಥೆ ಬೆಂಗಳೂರಿನಲ್ಲಿ ಸೆ. 11 ರಿಂದ 14ರ ವರೆಗೆ ವೋಲ್ವೋ ಬಸ್ ದರ ಕೇವಲ 1ರುಪಾಯಿ ನಿಗದಿಪಡಿಸಲಾಗಿತ್ತು. ಇದರಿಂದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸರ್ಕಾರದ ಕೆಲಸ ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಬೆಂಗಳೂರಿಗರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಸಿದ್ಧವಾಗಿದೆ.
ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಂದು ವೋಲ್ವೋ ಬಸ್ ಪ್ರಯಾಣ ದರವನ್ನು ಕನಿಷ್ಠ 5 ರುಪಾಯಿ ಹಾಗೂ ಗರಿಷ್ಠ 20 ರುಪಾಯಿಗೆ ನಿಗದಿಪಡಿಸಲಾಗಿದೆ. ಎಲ್ಲ ವರ್ಗದ ಜನರಿಗೂ ವೋಲ್ವೋ ಬಸ್ ಗಳನ್ನು ಪರಿಚಯಿಸಲು ಕಳೆದ ಸೆ. 11 ರಿಂದ 14ರ ವರೆಗೆ ವೋಲ್ವೋ ಬಸ್ ನ ದರ ಕೇವಲ ಒಂದು ರುಪಾಯಿ ನಿಗದಿಪಡಿಸಲಾಗಿತ್ತು. ನಗರದಲ್ಲಿರುವ 140 ವೋಲ್ವೋ ಬಸ್ ಗಳಲ್ಲಿ 3.25 ಲಕ್ಷ ಜವರು ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಸುಮಾರು 5000 ಮಂದಿಯನ್ನು ಸಂದರ್ಶನ ಮಾಡಲಾಗಿದ್ದು, ಸರ್ಕಾರದ ತೆಗೆದುಕೊಂಡಿರುವ ನಿರ್ಣಯಕ್ಕೆ ಸಾರ್ವಜನಿಕವಾಗಿ ಉತ್ತಮ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ವರ್ಷದ ಭಾನುವಾರ ಸೇರಿ 83 ಸರ್ಕಾರಿ ರಜಾ ದಿನಗಳಲ್ಲಿ ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications