ದಸರಾ ಎಂದರೆ ಮೈಸೂರು ಸೂಜಿಗಲ್ಲು
*ಟಿ. ಎಂ. ಸತೀಶ್
ನವರಾತ್ರಿ ಹೆಸರೇ ಹೇಳುವಂತೆ ಇದು ಒಂಬತ್ತು ಇರುಳಿನ ಕತೆ. ದುಷ್ಟ ಮಹಿಷಾಸುರನ ಸಂಹರಿಸಲು ಶಕ್ತಿ ದೇವತೆಯಾದ ಶ್ರೀಚಾಮುಂಡಾಂಬಿಕೆ ದೇವಾನು ದೇವತೆಗಳ ಶಕ್ತಿಯನ್ನು ಧರಿಸಿದ 9 ದಿನಗಳೇ ನವರಾತ್ರಿಯ ಆಚರಣೆಗೆ ಮೂಲ. ನವರಾತ್ರಿಯನ್ನು ಭಾರತಾದ್ಯಂತ ನಾನಾ ರೀತಿಯಲ್ಲಿ ಆಚರಿಸುತ್ತಾರೆ.
ಆದರೆ, ಶರನ್ನವರಾತ್ರಿ ಕನ್ನಡಿಗರಿಗೆ ದಸರಾ ಎಂದೇ ಪರಿಚಿತ. ದಸರಾ ಕನ್ನಡಿಗರ ನಾಡಹಬ್ಬ. ಶರನ್ನವರಾತ್ರಿಯ ಉತ್ಸವಗಳು ರಾಷ್ಟ್ರದ ನಾನಾ ಭಾಗಗಳಲ್ಲಿ ನಾನಾ ವಿಧದಿಂದ ಆಚರಿಸಲ್ಪಡುತ್ತವೆ. ಎಲ್ಲೆಡೆಯೂ ಶಕ್ತಿ ಅರ್ಥಾತ್ ದುರ್ಗೆಯ ಪೂಜೆಯೇ ಈ 9 ದಿನಗಳ ವಿಶೇಷ. ಉತ್ತರ ಭಾರತದಲ್ಲಿ ರಾಮನನ್ನು ಪೂಜಿಸುತ್ತಾರೆ. ರಾವಣವಧಾ ರೂಪದಲ್ಲಿ ಇಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಇದಕ್ಕಾಗಿಯೇ ರಾಮಲೀಲಾ ಮೈದಾನಗಳೂ ಇವೆ. ವಾಲ್ಮೀಕಿ ರಾಮಾಯಣ ಪಠಣದಿಂದ ಆರಂಭವಾಗುವ ಹಬ್ಬ ಶ್ರೀರಾಮ ಪಟ್ಟಾಭಿಷೇಕದೊಂದಿಗೆ ಅಂತ್ಯವಾಗುತ್ತದೆ. ಇನ್ನು ಕೆಲವೆಡೆ 9 ದಿನ ದುರ್ಗೆಯನ್ನು ಪೂಜಿಸಿ, ನಾವು ಗಣೇಶನನ್ನು ನೀರನಲ್ಲಿ ವಿಸರ್ಜಿಸುವಂತೆ, ದುರ್ಗೆಯ ಮಣ್ಣಿನ ಮೂರ್ತಿಗಳನ್ನು ನದಿಯಲ್ಲಿ ವಿಸರ್ಜಿಸುತ್ತಾರೆ.
ಮೈಸೂರಲ್ಲಿ ಶರನ್ನವರಾತ್ರಿ : ಮೈಸೂರು ದಸರಾವನ್ನು ಕಾಳಿಕಾ ಪುರಾಣದಲ್ಲಿ ಹೇಳಿರುವಂತೆ ಶಾಸ್ತ್ರೋಕ್ತವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮೈಸೂರು ಪ್ರಾಂತದಲ್ಲಿ ನವರಾತ್ರಿ ಬೊಂಬೆ ಹಬ್ಬ ಎಂದೂ ಹೆಸರು ಪಡೆದಿದೆ. ಮೈಸೂರು ರಾಜ ಮನೆತನದಲ್ಲಿ ನಾಲ್ಕುನೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವೇ ಮೈಸೂರಿನಲ್ಲಿ ಜನಪ್ರಿಯವಾಗಿದೆ. ಪಾಡ್ಯದ ದಿನದಿಂದಲೇ ಪಟ್ಟದ ಬೊಂಬೆಗಳ ಆದಿಯಾಗಿ ಹಂತ ಹಂತಗಳಲ್ಲಿ ಬೊಂಬೆಗಳನ್ನು ಕೂರಿಸಿ ಆಚರಿಸುವ ಈ ಹಬ್ಬ ಮಕ್ಕಳಿಗೆ ಅಚ್ಚು ಮೆಚ್ಚು.