ತಣ್ಣಗಾದ ಅರಮನೆ ವಿವಾದ!
*ವರದರಾಜ ಬಾಣಾವರ
ಜನತಾದಳ ಸರಕಾರ ಇದ್ದಾಗ ಮೈಸೂರು ಅರಮನೆಯನ್ನು ಸ್ವಾಧೀನಪಡಿಸಿಕೊಳ್ಳುವ ವಿಧೇಯಕ ರೂಪಿಸಿ, ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿತು. ಇದರ ವಿರುದ್ಧ ರಾಜವಂಶಸ್ಥರಾದ ಕಾಂಗ್ರೆಸ್ಪಕ್ಷದ ಲೋಕಸಭಾ ಸದಸ್ಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದಾರೆ. ಈ ಮಧ್ಯೆ ಹಿಂದಿನ ವರ್ಷದ ದಸರಾ ನಂತರ ರಾಜ್ಯ ಸರಕಾರದ ಸೂತ್ರ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. ಇದರಿಂದ ಈ ವಿವಾದ ಸಧ್ಯಕ್ಕೆ ತಣ್ಣಗಾದಂತಿದೆ.
ಬಕಿಂಗ್ಹ್ಯಾಮ್ ಮಾದರಿ ಟ್ರಸ್ಟ್ : ಈಗಿನ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಅವರು ಮೈಸೂರು ಅರಮನೆಯ ನಿರ್ವಹಣೆಗೆ ಬಕಿಂಗ್ಹ್ಯಾಮ್ ಅರಮನೆ ಮಾದರಿಯ ಟ್ರಸ್ಟ್ ರಚಿಸುವುದಾಗಿ ಹೇಳಿದ್ದರೂ ಸಹ ಪ್ರಸ್ತುತ ಈ ವಿಷಯವೂ ಹಿಂದೆ ಸರಿದಿದೆ.
ಶ್ರೀಕಂಠದತ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು ಆದ್ದರಿಂದ ರಾಜ್ಯ ಸರಕಾರವೂ ಹಿಂದಿನ ಜನತಾದಳ ಸರಕಾರದಂತೆ ಕಠೋರವಾಗಿ ವರ್ತಿಸಲು ಹೋಗಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್. ವಿಶ್ವನಾಥ್ ಅವರು ದಸರಾ ಆನೆಗಳ ಮೊದಲ ತಂಡವನ್ನು ಸ್ವಾಗತಿಸುವ ದಿವಸ ಒಡೆಯರ್ ಅವರನ್ನು ಭೇಟಿ ಮಾಡಿ ಫಲ-ತಾಂಬೂಲದೊಂದಿಗೆ 3 ಲಕ್ಷ ರುಪಾಯಿಗಳ ಚಕ್ ನೀಡಿ ದಸರೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದ್ದಾರೆ. ಒಡೆಯರ್ ಇದಕ್ಕೆ ಸಮ್ಮತಿಸಿದ್ದಾರೆ.
ಸಾರ್ವಜನಿಕರ ಭೇಟಿ: ಒಡೆಯರ್ ದಿನಚರಿ ಈ ಬಾರಿ ಒಡೆಯರ್ ಅವರು ಸಂಸದರಾದ ನಂತರ ಕಾಲುನೋವಿನ ಚಿಕಿತ್ಸೆಗಾಗಿ ಲಂಡನ್ಗೆ ತೆರಳಿದ್ದರು. ಹೀಗಾಗಿ ಕೆಲವು ತಿಂಗಳು ಸಾರ್ವಜನಿಕರ ಭೇಟಿ ಲಭ್ಯ ಇರಲಿಲ್ಲ. ಇತ್ತೀಚೆಗೆ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಕಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈಗ ಅರಮನೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾರ್ವಜನಿಕರನ್ನು ಭೇಟಿ ಮಾಡುತ್ತಾರೆ. ಆದರೆ ಎಲ್ಲರಿಗೂ ಭೇಟಿ ಆಗುವ ಅವಕಾಶ ಸಿಗುವುದಿಲ್ಲ ಹೀಗಾಗಿ ಒಡೆಯರ್ ಜನರ ಕೈಗೆ ಸಿಗುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ.