ಜವಳಿ ಉದ್ಯಮದ ದೈತ್ಯ ರೇಮಂಡ್: ಅಪ್ಪ ಕಂಪೆನಿಯನ್ನು ಎತ್ತರಕ್ಕೇರಿಸಿದರೆ, ಮಗ ಅಪ್ಪನನ್ನೇ ಹೊರಹಾಕಿದ
ಭಾರತದ ಜವಳಿ ಉದ್ಯಮದಲ್ಲಿ ಬಹುದೊಡ್ಡ ಹೆಸರು ಮಾಡಿರುವಂತಹ ರೇಮಂಡ್ ಲಿಮಿಟೆಡ್ ಸ್ಥಾಪನೆಗೊಂಡು ಹೆಚ್ಚುಕಮ್ಮಿ ಒಂಬತ್ತು ದಶಕಗಳಾಗಿದ್ದರೂ, ಸಂಸ್ಥೆ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದು 1980ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಹಿಂದಿರುಗಿ ನೋಡದಷ್ಟು ಬೆಳೆದಿರುವ ರೇಮಂಡ್ ಸಂಸ್ಥೆ, ಈಗ ಜವಳಿ ಉದ್ಯಮದ ಜೊತೆಗೆ ಇತರ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುತ್ತಿದೆ.
1980ರಲ್ಲಿ ಸಂಸ್ಥೆಯ ಆಡಳಿತವನ್ನು ಸಂಪೂರ್ಣವಾಗಿ ಡಾ. ವಿಜಯಪಥ್ ಸಿಂಘಾನಿಯಾ ತಮ್ಮ ಹತೋಟಿಗೆ ಪಡೆದುಕೊಂಡ ನಂತರ, ಕಂಪೆನಿಯ ವಹಿವಾಟಿನಲ್ಲಿ ಭಾರೀ ಬದಲಾವಣೆಗಳು ಕಂಡು ಬಂದವು. ಜವಳಿ ಉದ್ಯಮದ ಜೊತೆಜೊತೆಗೆ, ಕಾಸ್ಮೆಟಿಕ್ಸ್, ಇಂಜಿನಿಯರಿಂಗ್ ಕ್ಷೇತ್ರದಲ್ಲೂ ರೇಮಂಡ್ ಸದ್ದು ಮಾಡಲು ಆರಂಭಿಸಿತು.
ರೇಮಂಡ್ಸ್ ಲಿಮಿಟೆಡ್ ಎಂಬ ಜವಳಿ ಉದ್ಯಮ ಸ್ಥಾಪಿಸಿ ಪ್ರಮುಖವಾಗಿ ಪುರುಷರ ಮನೆ ಮಾತಾಗಿದ್ದ ರೇಮಂಡ್ ಕಂಪೆನಿಯ ಮಾಲೀಕ ಸಿಂಘಾನಿಯಾ, 2015ರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕಮೌಲ್ಯದ ಶೇರುಗಳನ್ನು ತಮ್ಮ ಸುಪುತ್ರ ಗೌತಮ್ ಸಿಂಘಾನಿಯಾ ಹೆಸರಿಗೆ ಬರೆದುಕೊಟ್ಟರು.
ಆರು ಸಾವಿರ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುವ, ಸಾವಿರಾರು ಉದ್ಯೋಗಿಗಳಿಗೆ ಕೆಲಸ ನೀಡುವ ಮತ್ತು ದೇಶದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿದ್ದ ಸಿಂಘಾನಿಯಾ, ತಮ್ಮ ಆಸ್ತಿಯ ಪಾಲನ್ನೆಲ್ಲಾ ಮಗನ ಹೆಸರಿಗೆ ಬರೆದುಕೊಟ್ಟು ತಪ್ಪು ಮಾಡಿದೆ ಎಂದು ಅರ್ಥಮಾಡಿಕೊಳ್ಳಲು ಅವರಿಗೆ ಹೆಚ್ಚು ದಿನಗಳು ಬೇಕಾಗಿರಲಿಲ್ಲ.

ಐಷಾರಾಮಿ 36 ಅಂತಸ್ತಿನ ಜೆ.ಕೆ. ಹೌಸ್
ಸಂಸ್ಥೆಯ ಚುಕ್ಕಾಣಿ ತನ್ನ ಕೈಗೆ ಬರುತ್ತಿದ್ದಂತೆಯೇ, ಮುಂಬೈನ ಮಲಬಾರ್ ಹಿಲ್ಸ್ ನಲ್ಲಿರುವ ಐಷಾರಾಮಿ 36 ಅಂತಸ್ತಿನ ಜೆ.ಕೆ. ಹೌಸ್ ನಿಂದ ವಿಜಯಪಥ್ ಸಿಂಘಾನಿಯಾ ಅವರನ್ನು ಮಗ ಗೌತಮ್ ಹೊರ ಹಾಕಿದರು. ಅದಾದ ನಂತರ ಕಂಪೆನಿಯಿಂದ ತೆಗೆದು ಹಾಕಲಾಯಿತು. ಸದ್ಯ, ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಜಯಪಥ್ ಅವರು ಮಾಸಿಕ ಬಾಡಿಗೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಇದರ ಜತೆಗೆ ಅವರಿಗೆ ನೀಡಿದ್ದ ಕಾರನ್ನು ಮಗ ವಾಪಸ್ ಪಡೆದಿದ್ದಾರೆ ಎಂದು ವರದಿಯಾಗಿದೆ. ಮಗನ ನಡೆಗೆ ಅಪ್ಪ ಈಗ ಕಾನೂನಿನ ಮೊರೆ ಹೋಗಿದ್ದಾರೆ.

ರೇಮಂಡ್ ಸಂಸ್ಥೆಯ ಗೌರವಾಧ್ಯಕ್ಷ ವಿಜಯಪಥ್ ಸಿಂಘಾನಿಯಾ
ತಂದೆ ಮತ್ತು ಮಗನ ಕೌಟುಂಬಿಕ ಕಲಹ ಬೀದಿಗೆ ಬಂದ ಬೆನ್ನಲ್ಲೇ, ರೇಮಂಡ್ ಸಂಸ್ಥೆಯ ಆಡಳಿತ ಮಂಡಳಿ ವಿಜಯಪಥ್ ಸಿಂಘಾನಿಯಾ ಅವರನ್ನು ಗೌರವ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದೆ. ಇವೆಲ್ಲವೂ, ಮಗನ ಅಣತಿಯಂತೆ ನಡೆಯುತ್ತಿದೆ ಎನ್ನುವುದು ಸಿಂಘಾನಿಯಾ ಅವರ ನೋವಿನ ಮಾತಾದರೂ, ನನ್ನದೇನೂ ಇದರಲ್ಲಿ ಪಾತ್ರವಿಲ್ಲ ಎಂದು ಮಗ ಗೌತಮ್ ಹೇಳುತ್ತಾರೆ. ಇವೆಲ್ಲಗಳ ನಡುವೆ ಸಂಸ್ಥೆಯ ಶೇರುಗಳೂ ಕುಸಿಯುತ್ತಿವೆ.

ಒಂದು ಡುಫ್ಲೆಕ್ಸ್ ಮನೆ ಕೊಡಿ
ವಿಜಯಪಥ್ ಸಿಂಘಾನಿಯಾ ತಾನೇ ಕಟ್ಟಿದ ತಮ್ಮ 36 ಅಂತಸ್ತಿನ ಅರಮನೆಯ ಯಾವುದಾದರೂ ಒಂದು ಫ್ಲೋರ್ ನಲ್ಲಿ ಒಂದು ಸಣ್ಣ ಡುಫ್ಲೆಕ್ಸ್ ಮನೆ ಕೊಡಿ ಎಂದು ಕೋರ್ಟ್ ಮುಂದೆ ಅಂಗಲಾಚುತ್ತಿದ್ದಾರೆ. ಜೊತೆಗೆ, ಕಾರು, ಡ್ರೈವರ್ ಹಾಗೂ ಪ್ರತಿ ತಿಂಗಳು ಏಳು ಲಕ್ಷ ರೂಪಾಯಿ ಹಣವನ್ನು ಕೊಡಿಸುವಂತೆ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯಪಥ್ ಅವರು ಬಿಡಿಗಾಸಿಗೂ ಪರದಾಡುತ್ತಿದ್ದಾರೆ ಎಂದು ಮುಂಬೈನ ಪತ್ರಿಕೆಗಳು ವರದಿ ಮಾಡಿದ್ದವು.

ನನ್ನ ಈ ಜೀವನ ದೇಶದ ಇತರ ಪೋಷಕರಿಗೆ ಒಂದು ಪಾಠವಾಗಲಿ
ನನ್ನ ಮನೆಯಿಂದ ಮಗ ಹೊರಹಾಕಿದ, ಕಚೇರಿಯಿಂದಲೂ ಹೊರಗಿಟ್ಟ, ಉದ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ಸರಕಾರದಿಂದ ಸಿಕ್ಕಿದ್ದ ಪದ್ಮಭೂಷಣ ಪ್ರಶಸ್ತಿಯೂ ನನಗೆ ಸಿಗದಂತೆ ಮಾಡಿದ. ನನ್ನ ಈ ಜೀವನ ದೇಶದ ಇತರ ಪೋಷಕರಿಗೆ ಒಂದು ಪಾಠವಾಗಲಿ, ಪ್ರಪಂಚದಲ್ಲಿ ಇಂತಹ ಮಗನೂ ಇರುತ್ತಾನೆ ಎನ್ನುವುದಕ್ಕೆ ಗೌತಮ್ ಒಂದು ಉದಾಹರಣೆ ಎಂದು ವಿಜಯಪಥ್ ಸಿಂಘಾನಿಯಾ ನೋವಿನ ಮಾತನ್ನಾಡುತ್ತಾರೆ.

ಏಷ್ಯಾದ ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿರುವ ಸಿಂಘಾನಿಯಾ ಕುಟುಂಬ
ಏಷ್ಯಾದ ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿರುವ ಸಿಂಘಾನಿಯಾ ಕುಟುಂಬ ಸಿಮೆಂಟ್ (ಜೆ ಕೆ ಸಿಮೆಂಟ್) ಮತ್ತು ಐಟಿ ಕ್ಷೇತ್ರದಲ್ಲೂ ಸಕ್ರಿಯವಾಗಿದೆ. ತಂದೆ ಮಾಡುವ ಎಲ್ಲಾ ಆರೋಪಗಳು ನಿರಾಧಾರ ಎನ್ನುವ ಮಗ ಗೌತಮ್, ಸಂಸ್ಥೆಯ ಅಧ್ಯಕ್ಷನಾಗಿ ನನ್ನ ಜವಾಬ್ದಾರಿಯೇ ಬೇರೆ. ತಂದೆಯನ್ನು ಸಂಸ್ಥೆಯಿಂದ ಹೊರಹಾಕಿದ ವಿಚಾರದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಹೇಳಿದ್ದಾರೆ.

ಮಗನಿಗೆ ಸರ್ವಶ್ವವನ್ನು ಕೊಟ್ಟು ತಪ್ಪುಮಾಡಿದೆ
ಮಗ ತಮ್ಮ ಪೋಷಕರನ್ನು ಹೊರಹಾಕುವ ಅದೆಷ್ಟೋ ಸಿನಿಮಾಗಳ ಕಥೆಯ ರೀತಿಯಲ್ಲೇ, ವಿಜಯಪಥ್ ಸಿಂಘಾನಿಯಾ ಅವರ ಜೀವನ ಸಾಗುತ್ತಿದೆ. ಮಗನಿಗೆ ಸರ್ವಶ್ವವನ್ನು ಕೊಟ್ಟು ತಪ್ಪುಮಾಡಿದೆ, ನೀವು ಇಂತಹ ತಪ್ಪುಗಳನ್ನು ಮಾಡಬೇಡಿ ಎಂದು ಎಲ್ಲಾ ಪೋಷಕರಿಗೂ ವಿಜಯಪಥ್ ಸಿಂಘಾನಿಯಾ ಬಹಿರಂಗವಾಗಿ ಮನವಿ ಮಾಡಿದ ವಿದ್ಯಮಾನಗಳೂ ನಡೆದು ಹೋಗಿದೆ. ಅಪ್ಪ-ಮಗನ ನಡುವೆ ಅದೇನು ನಾಲ್ಕು ಗೋಡೆಯ ನಡುವೆ ನಡೆದಿದೆಯೋ, ಅಪ್ಪ ಸರಿಯೋ, ಮಗ ಸರಿಯೋ? ಒಟ್ಟಿನಲ್ಲಿ ವಿಜಯಪಥ್ ಸಿಂಘಾನಿಯಾ ಅವರ ಜೀವನ ಮಾತ್ರ ಬೀದಿಗೆ ಬಂದಿದೆ.












Click it and Unblock the Notifications